ಕನ್ನಡಪ್ರಭ ವಾರ್ತೆ ಶಿಕಾರಿಪುರ
ಶರಣರ ಆಚಾರ ವಿಚಾರ ತತ್ವ ಸಿದ್ದಾಂತ ಸಹಿತ ಶರಣ ಸಂಸ್ಕೃತಿಯನ್ನು ಪ್ರತಿಯೊಬ್ಬರ ಮನೆ ಮನೆಗೆ ತಲುಪಿಸುವ ಸದುದ್ದೇಶದಿಂದ ಇದೇ 13ರಿಂದ ಸೆ.9 ರವರೆಗೆ ಪ್ರತಿನಿತ್ಯ ಆಸಕ್ತ ಭಕ್ತರ ಮನೆಯಲ್ಲಿ ‘ಶ್ರಾವಣದಲ್ಲಿ ಶ್ರವಣಾನುಭಾವ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಇಲ್ಲಿನ ಮುರುಘರಾಜೇಂದ್ರ ವಿರಕ್ತಮಠದ ಶ್ರೀ ಮ.ನಿ.ಪ್ರ ಚನ್ನಬಸವ ಸ್ವಾಮೀಜಿ ತಿಳಿಸಿದರು.ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಶರಣ ಸಂಸ್ಕೃತಿ ಅತ್ಯಂತ ಶ್ರೇಷ್ಟವಾಗಿದ್ದು ಶರಣರ ಆಚಾರ ವಿಚಾರ ತತ್ವ ಸಿದ್ದಾಂತದ ಜತೆಗೆ ಕಾಯಕ ದಾಸೋಹ ಪರಂಪರೆಯನ್ನು ವರ್ಣಭೇದ ಜಾತಿ ಭೇದವಿಲ್ಲದೆ ಸಮಾಜದಲ್ಲಿನ ಪ್ರತಿಯೊಬ್ಬರ ಮನೆಗೆ ತಲುಪಿಸುವ ಸದುದ್ದೇಶದಿಂದ ಕಳೆದ 15 ವರ್ಷದಿಂದ ‘ಶ್ರಾವಣದಲ್ಲಿ ಶ್ರವಣಾನುಭಾವ’ ಕಾರ್ಯಕ್ರಮವನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗಿದ್ದು ಈ ಬಾರಿ ಇದೇ 13ರಿಂದ ಸೆ.9ರವರೆಗೆ ಆಸಕ್ತ ಭಕ್ತರ ಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಗುರುವಾರ ಬೆಳಿಗ್ಗೆ 10.30ಕ್ಕೆ ಪಟ್ಟಣದ ಆಶ್ರಯ ಬಡಾವಣೆ ಸಮೀಪದಲ್ಲಿನ ಎಸ್.ಆರ್. ಕೃಷ್ಣ ಸಿಂಗ್ ಲೇಔಟ್ನಲ್ಲಿನ ಶರಣೆ ನೇತ್ರಾವತಿ ಭವಾನಿ ಸಿಂಗ್ ಅವರ ಸ್ವಗೃಹದಲ್ಲಿ ಕಾರ್ಯಕ್ರಮವನ್ನು ಸಂಸದ ರಾಘವೇಂದ್ರ ಉದ್ಘಾಟಿಸಲಿದ್ದು, ಪಾಂಡೊಮಟ್ಟಿ ವಿರಕ್ತಮಠದ ಶ್ರೀ ಮನಿಪ್ರ ಗುರುಬಸವ ಸ್ವಾಮಿಗಳು, ತಿಪ್ಪಾಯಿಕೊಪ್ಪ ಶ್ರೀ ಮನಿಪ್ರ ಮಹಾಂತ ಸ್ವಾಮಿಗಳು, ಬಸವಾಶ್ರಮದ ಮಾತೆ ಶರಣಾಂಬಿಕೆ, ಹೊನ್ನಾಳಿ ಶಾಸಕ ಡಿ.ಜಿ ಶಾಂತನಗೌಡ, ರಾಜ್ಯ ಕೃಷಿಕ ಸಮಾಜದ ಕಾರ್ಯಾಧ್ಯಕ್ಷ ನಗರದ ಮಹಾದೇವಪ್ಪ, ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ಸಹಕಾರಿ ಧುರೀಣ ಡಾ.ಬಿ.ಡಿ ಭೂಕಾಂತ್, ತಾ.ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜಗೌಡ ಸಹಿತ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಹಿರಿಯ ಸಾಮಾಜಿಕ ಕಾರ್ಯಕರ್ತೆ ಕಮಲಾಬಾಯಿ ಕೃಷ್ಣ ಸಿಂಗ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಸುಬಾಷಚಂದ್ರ ಸ್ಥಾನಿಕ್ ಮಾತನಾಡಿ, ಕಳೆದ 15 ವರ್ಷಗಳಿಂದ ನಿರಂತರವಾಗಿ ಶ್ರಾವಣ ಮಾಸದಲ್ಲಿ ಆಯೋಜಿಸುತ್ತಿರುವ ಕಾರ್ಯಕ್ರಮ ಅತ್ಯಂತ ಪರಿಣಾಮಕಾರಿಯಾಗಿದ್ದು ಜಾತಿ ಭೇದವಿಲ್ಲದೆ ಎಲ್ಲ ಶರಣರ ಮನೆಯಲ್ಲಿ ಆಯೋಜಿಸಲಾಗುವ ಕಾರ್ಯಕ್ರಮಕ್ಕೆ ಪ್ರತಿ ಬಾರಿ ಹೊಸಬರು ಸೇರ್ಪಡೆಯಾಗುತ್ತಿದ್ದಾರೆ. ಈ ದಿಸೆಯಲ್ಲಿ ಸಂತೃಪ್ತ ಭಾವನೆಯನ್ನು ಹೊಂದಿರುವುದಾಗಿ ತಿಳಿಸಿದರು.
ಆ.20ರ ಗುರುವಾರ ಚನ್ನಕೇಶವ ನಗರದಲ್ಲಿನ ಅಲ್ಪಸಂಖ್ಯಾತರ ವಸತಿ ಶಾಲೆಯಲ್ಲಿ ಅಪೇಕ್ಷೆಯ ಮೇರೆಗೆ ವಿಶಿಷ್ಟವಾಗಿ ನಡೆಯಲಿದ್ದು,ಸೆ.5 ರಂದು ಚನ್ನಕೇಶವ ನಗರದಲ್ಲಿನ ರಾಧಾ ಬೂದೆಪ್ಪ ನವರ ನಿವಾಸದಲ್ಲಿ ಶಿವಮೊಗ್ಗ ಕರ್ನಾಟಕ ಸಂಘದ ಪೂರ್ವಾಧ್ಯಕ್ಷ ಎಂ.ಎನ್ ಸುಂದರರಾಜ್ ರಿಂದ,ವಿನಾಯಕ ನಗರದಲ್ಲಿನ ನಿರ್ಮಲ ಶಿವಾನಂದಪ್ಪ ನಿವಾಸದಲ್ಲಿ ಸಾಹಿತ್ಯ ಚಿಂತಕ, ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಕತ್ತಿಗೆ ಚನ್ನಪ್ಪರಿಂದ ವಿಶೇಷ ಉಪನ್ಯಾಸ ನಡೆಯಲಿದೆ. ಸೆ.9ರ ಬುಧವಾರ ಮುರುಘರಾಜೇಂದ್ರ ವಿರಕ್ತಮಠದಲ್ಲಿ ಸಮಾರೋಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬಸವಾಶ್ರಮದ ಕಾರ್ಯಾಧ್ಯಕ್ಷ ಸೋಮಶೇಖರ್ ಗಟ್ಟಿ, ಮುತ್ತಪ್ಪ ಕುಚಬಾಳ, ಹೇಮಂತ ಮತ್ತಿತರರು ಹಾಜರಿದ್ದರು.