ಕನ್ನಡಪ್ರಭವಾರ್ತೆ ಮೂಲ್ಕಿ
ಕಾಲ ಬದಲಾಗುತ್ತಿಲ್ಲ, ನಾವು ಬದಲಾಗುತ್ತಿದ್ದು ನಮ್ಮ ಮೂಲ ಸತ್ವವನ್ನು ಮರೆತು ಆಧುನಿಕ ಜಗತ್ತಿಗೆ ಮುಖ ಮಾಡಿರುವ ನಮಗೆ ದೈವಾರಾಧನೆಯ ಉದ್ದೇಶ ಮತ್ತು ಅದರ ವಿವಿಧ ಆಯಾಮಗಳ ಬಗೆಗೆ ಜ್ಞಾನವಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮನ್ಮಥ ಶೆಟ್ಟಿ ಪುತ್ತೂರು ಹೇಳಿದರು. ಮಂಗಳೂರು ವಿಶ್ವವಿದ್ಯಾಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ಕಟೀಲಿನ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ಕಟೀಲು ಕಾಲೇಜಿನ ಸಭಾಂಗಣದಲ್ಲಿ ನಡೆದ ಪ್ರಚಾರೋಪನ್ಯಾಸ ಮಾಲಿಕೆಯ ದೈವಾರಾಧನೆ: ದೈವ ಕಲತ್ತ ಬೇತೆ ಬೇತೆ ಮರ್ಗಿಲ್- ಗೇನದ ತುಲಿಪು- ಪಾರ್ದನ. ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.ದೈವಾರಾಧನೆಯೇ ಈ ಮಣ್ಣಿನ ಮೂಲ ಸತ್ವ ಮತ್ತು ತತ್ವ. ಸಂಧಿಗಳ ಸಮೂಹವೇ ಪಾರ್ದನ. ಅದು ಒಂದು ನಿಖರವಾದ ಮಾಹಿತಿ. ಒಂದು ದೈವದ ಹುಟ್ಟು-ಕಟ್ಟು-ಆಯ -ಬೀರ ಇವುಗಳು ಸಂಧಿಗಳಲ್ಲಿ ವ್ಯಕ್ತವಾಗುವ ವಿವಿಧ ಆಯಾಮಗಳು. ಇದರ ಆರಂಭ ಮತ್ತು ಅಂತ್ಯ, ಉದ್ದೇಶ ಒಂದೇ ಆಗಿದ್ದು, ಅದರ ಮಧ್ಯೆ ಪ್ರಾದೇಶಿಕ ವ್ಯತ್ಯಾಸಗಳನ್ನು ಕಾಣಬಹುದು. ಪಾಡ್ಡನಗಳು ತುಳುನಾಡಿನ ಪುರಾಣ ಪಠ್ಯಗಳಾಗಿದ್ದು 16,400 ಸಾಲುಗಳಿರುವ ಸಿರಿ ಪಾರ್ದನ ಹಾಡಿದ ಮಾಚಾರು ಗೋಪಾಲ ನಾಯ್ಕರನ್ನು ವಿದೇಶಿಯರು ಬಂದು ಪಾರ್ದನದ ಬಗೆಗಿನ ಅಧ್ಯಯನ ನಡೆಸಿರುವುದು ನಮಗೆ ಹೆಮ್ಮೆ. ಪಾರ್ದನ ಪಠ್ಯಗಳನ್ನು ಶೈಕ್ಷಣಿಕ ನೆಲೆಯಲ್ಲಿ ಅಧ್ಯಯನ ನಡೆಯಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಕಟೀಲು ಕಾಲೇಜಿನ ಪ್ರಾಂಶುಪಾಲ ಡಾ. ವಿಜಯ ವಿ. ಪಾರ್ದನ ತುಳುವರ ಜೀವನದ ಅವಿಭಾಜ್ಯ ಅಂಗ, ಇದರಲ್ಲಿ ವ್ಯಕ್ತವಾಗುವ ಕಥೆ, ಸಂಗೀತ, ಸಾಹಿತ್ಯ ಎಲ್ಲವೂ ಮುಖ್ಯವಾಗುತ್ತದೆ. ತುಳುವರ ಮೂಲ ಕೃಷಿ ಬದುಕು, ಇಂದಿನ ಪೀಳಿಗೆಯು ಇದರಿಂದ ದೂರವಿರುವುದು ಬೇಸರ ತಂದಿದೆ ಎಂದರು. ಕಾರ್ಯಕ್ರಮ ಸಂಯೋಜಕಿ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಹರಿಣಾಕ್ಷಿ ಉಪಸ್ಥಿತರಿದ್ದರು. ತುಳು ಪೀಠದ ಸಹಾಯಕ ಪ್ರಸಾದ್ ಅಂಚನ್ ಸ್ವಾಗತಿಸಿದರು. ವಿದ್ಯಾರ್ಥಿನಿ ಪೃಥ್ವಿ ಎಚ್. ಪೂಜಾರಿ ನಿರೂಪಿಸಿದರು, ಬಿಂದಿಯಾ ವಂದಿಸಿದರು.