ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಶ್ರೇಯೋಭಿವೃದ್ಧಿಯ ಆರ್ಥಿಕ ಶಕ್ತಿ ಆಗಿರುವ ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘ 2023-24ನೇ ಸಾಲಿನಲ್ಲಿ 82.89 ಲಕ್ಷ ರು. ಲಾಭ ಗಳಿಸಿ, ತನ್ನ ಸದಸ್ಯರಿಗೆ ಶೇ.20 ಡಿವಿಡೆಂಡ್ ಘೋಷಿಸಿದೆ ಎಂದು ಸಂಘದ ಅಧ್ಯಕ್ಷ ಎಸ್. ಜಗದೀಶ್ಚಂದ್ರ ಅಂಚನ್ ತಿಳಿಸಿದ್ದಾರೆ.ನಗರದ ಕೊಡಿಯಾಲ್ಬೈಲ್ ಪಿವಿಎಸ್ ಕಲಾಕುಂಜದ ಬಳಿ ಇರುವ ಸಂಘದ ಪ್ರಧಾನ ಕಚೇರಿಯ ಸಪ್ತವರ್ಣ ಸಭಾಂಗಣದಲ್ಲಿ ಶನಿವಾರ ನಡೆದ 93ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಹಕಾರ ಸಂಘಗಳ ನೌಕರ ಸದಸ್ಯರುಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಹಾಗೂ ಠೇವಣಿಗಳಿಗೆ ಆಕರ್ಷಕ ಬಡ್ಡಿಯನ್ನು ನೀಡಿಯೂ ಸಂಘ ವರದಿ ವರ್ಷದಲ್ಲಿ ಅಧಿಕ ಲಾಭ ಗಳಿಸಿದೆ. ಸಂಘ 1,116 ಮಂದಿ ಸದಸ್ಯರನ್ನು ಹೊಂದಿದ್ದು, ವರದಿ ವರ್ಷದಲ್ಲಿ ಸಂಘ 34.27 ಲಕ್ಷ ರು. ಪಾಲು ಬಂಡವಾಳ ಹೊಂದಿದ್ದು, 4.85 ಕೋಟಿ ರು. ವಿವಿಧ ನಿಧಿಯನ್ನು ಹೊಂದಿದೆ. ಠೇವಣಿ ಸಂಗ್ರಹಣೆಯಲ್ಲಿ ಕಳೆದ ವರ್ಷಾಂತ್ಯಕ್ಕೆ ಠೇವಣಿ 84.53 ಕೋಟಿ ರು.ನಿಂದ ವರದಿ ವರ್ಷದಲ್ಲಿ 88.96 ಕೋಟಿ ರು.ಗೆ ಏರಿಕೆಯಾಗಿದೆ ಎಂದರು. ಪ್ರತಿಭಾ ಪುರಸ್ಕಾರ: ಸಂಘವು ಪ್ರತಿವರ್ಷ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಸದಸ್ಯರ ಮಕ್ಕಳನ್ನು ಪುರಸ್ಕರಿಸಿ ಅಭಿನಂದಿಸುವ ಕಾರ್ಯಕ್ರಮವನ್ನು ವಾರ್ಷಿಕ ಮಹಾಸಭೆಯಲ್ಲಿ ಹಮ್ಮಿಕೊಂಡು ಬರುತ್ತಿದೆ. ಈ ಬಾರಿ 36 ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪ್ರೋತ್ಸಾಹ ಧನವನ್ನು ನೀಡಿ ಪುರಸ್ಕರಿಸಲಾಯಿತು ಎಂದರು.ಸತತ 7ನೇ ಬಾರಿ ಪ್ರಶಸ್ತಿ: ಸಂಘದ ಪ್ರಗತಿಯನ್ನು ಗುರುತಿಸಿ ಎಸ್ಸಿಡಿಸಿಸಿ ಬ್ಯಾಂಕ್ ಕಳೆದ 6 ವರ್ಷಗಳಿಂದ ( 2017-18, 2018-19, 2019-20 , 2020-21, 2021-22, 2022-23 ) ಸಾಧನಾ ಪ್ರಶಸ್ತಿಯನ್ನು ನೀಡುತ್ತಿದೆ. 2023-24ನೇ ಸಾಲಿನಲ್ಲೂ ಸಂಘ ಎಸ್ಸಿಡಿಸಿಸಿ ಬ್ಯಾಂಕಿನ ಸಾಧನಾ ಪ್ರಶಸ್ತಿಗೆ ಪಾತ್ರವಾಗಿದೆ. ಈ ಪ್ರತಿಷ್ಠಿತ ಪ್ರಶಸ್ತಿ ಸತತ 7ನೇ ಬಾರಿಗೆ ಪಡೆದ ಹೆಗ್ಗಳಿಕೆಗೆ ಸಂಘ ಪಾತ್ರವಾಗಿದೆ ಎಂದು ಅವರು ತಿಳಿಸಿದರು.
ವ್ಯವಹಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಂಘವು ನಾಲ್ಕು ಶಾಖೆಗಳನ್ನು ಹೊಂದಿದ್ದು , ಈ ಪೈಕಿ ಮಂಗಳೂರಿನಲ್ಲಿ ಎರಡು, ಉಡುಪಿ ಹಾಗೂ ಪುತ್ತೂರಿನಲ್ಲಿ ತಲಾ ಒಂದು ಶಾಖೆ ಕಾರ್ಯ ನಿರ್ವಹಿಸುತ್ತಿದೆ. ಮುಂದೆ ತಾಲೂಕುವಾರು ಶಾಖೆಗಳನ್ನು ತೆರೆಯಲು ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.ರಿಯಾಯ್ತಿಯಲ್ಲಿ ಸಭಾಭವನನಗರದ ಕೊಡಿಯಾಲ್ಬೈಲ್ ಪಿವಿಎಸ್ ಕಲಾಕುಂಜದ ಬಳಿ ಸಂಘವು 10 ಸೆಂಟ್ಸ್ ಸ್ಥಳದಲ್ಲಿ ಎರಡು ಮಹಡಿಗಳ ಸುಸಜ್ಜಿತ ‘ಉನ್ನತಿ’ ಸ್ವಂತ ಕಟ್ಟಡವನ್ನು ಹೊಂದಿದ್ದು, ಈ ಕಟ್ಟಡದಲ್ಲಿ ಕೇಂದ್ರ ಕಚೇರಿ, ಕೊಡಿಯಾಲ್ ಬೈಲ್ ಶಾಖೆ , ಆಡಳಿತ ಮಂಡಳಿ ಸಭಾಂಗಣ ಸೇರಿದಂತೆ ಹವಾನಿಯಂತ್ರಿತ ಸಪ್ತವರ್ಣ ಸಭಾಭವನವೂ ಇದೆ. ಸಂಘದ ಸದಸ್ಯರಿಗೆ ಶುಭ ಸಮಾರಂಭಗಳಿಗೆ ಈ ಸಭಾಭವನವನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಇದರ ಪ್ರಯೋಜನವನ್ನು ಸದಸ್ಯರು ಪಡೆದುಕೊಳ್ಳಬೇಕು ಎಂದರು.
ಸಂಘದ ಉಪಾಧ್ಯಕ್ಷರಾದ ದಿವಾಕರ ಶೆಟ್ಟಿ, ನಿರ್ದೇಶಕರಾದ ಪುಷ್ಪರಾಜ್ ಎಂ.ಎಸ್., ರಾಘವ ಆರ್ ಉಚ್ಚಿಲ್, ವಿಶ್ವೇಶ್ವರ ಐತಾಳ್ , ಜಯಪ್ರಕಾಶ್ ರೈ, ವಿಶ್ವನಾಥ ಕೆ ಟಿ, ಶಿವಾನಂದ ಪಿ, ಗಿರಿಧರ, ಅರುಣ್ ಕುಮಾರ್, ವಿಶ್ವನಾಥ್ ಎನ್., ಅಮೀನ್ , ಮೋಹನ್ ಎನ್. , ಚಂದ್ರಕಲಾ, ಗೀತಾಕ್ಷಿ ಇದ್ದರು.ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸತೀಶ್ ಪೂಜಾರಿ ಸ್ವಾಗತಿಸಿ, ಸಂಘದ 2023-24ನೇ ಸಾಲಿನ ವಾರ್ಷಿಕ ವರದಿ, ಲೆಕ್ಕ ಪತ್ರ ಮಂಡಿಸಿದರು. ಉಪಾಧ್ಯಕ್ಷ ದಿವಾಕರ ಶೆಟ್ಟಿ ವಂದಿಸಿದರು.
---------------