ಸಾರಾಂಶ
ದಾಂಡೇಲಿ; ನಗರಸಭೆಯ ಸಭಾಭವನದಲ್ಲಿ ಅಧ್ಯಕ್ಷ ಅಷ್ಪಾಕ ಶೇಖ ಅಧ್ಯಕ್ಷತೆಯಲ್ಲಿ ನಗರಸಭೆಯ ವಿಶೇಷ ಸಾಮಾನ್ಯ ಸಭೆಯು ನಡೆಯಿತು.ಸಭೆಯಲ್ಲಿ ೨೦೨೫-೨೬ನೇ ೫ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾದ ಅನುದಾನದಲ್ಲಿ ಕ್ರಿಯಾ ಯೋಜನೆಯ ತಯಾರಿಸುವ ಕುರಿತು ಚರ್ಚೆ ನಡೆಯಿತು.
೨೦೨೫-೨೬ನೇ ಸಾಲಿನ ಎಸ್ಎಫ್ಸಿ ಮುಕ್ತ ನಿಧಿ, ಎಸ್ಸಿ, ಎಸ್ಎಸ್ಟಿ, ಟಿಎಸ್ಪಿ ಯೋಜನೆಯಡಿ ಬಿಡುಗಡೆಯಾದ ಅನುದಾನದಲ್ಲಿ ಕ್ರಿಯಾ ಯೋಜನೆ ತಯಾರಿಸುವ ಕುರಿತು ಚರ್ಚೆ ನಡೆಯಿತು. ಸರ್ಕಾರದಿಂದ ನಗರಸಭೆಗೆ ಬಿಡುಗಡೆಯಾದ ವಿವಿಧ ಯೋಜನೆಗಳಲ್ಲಿ ಉಳಿತಾಯವಾಗಿರುವ ಮೊತ್ತದಲ್ಲಿ ಕ್ರಿಯಾ ಯೋಜನೆ ತಯಾರಿಸುವ ಬಗ್ಗೆ ಚರ್ಚಿಸಲಾಯಿತು.ಸಭೆಯಲ್ಲಿ ೨೪*೭ ಕುಡಿಯುವ ನೀರಿನ ಯೋಜನೆಗೆ ಸಂಬಂಧಪಟ್ಟಂತೆ ಪೈಪ್ಲೈನ್ ಕಾಮಗಾರಿ ನಡೆಯುತ್ತಿದ್ದು, ಇದರಿಂದಾಗಿ ರಸ್ತೆ ಬಹಳ ಹದಗೆಟ್ಟಿದೆ. ಈಗ ಮಳೆಗಾಲವಾಗಿರುವುದರಿಂದ ಸಂಚಾರಕ್ಕೆ ಅನುಕೂಲವಾಗುವ ಹಾಗೆ ತಾತ್ಕಾಲಿಕವಾಗಿ ರಸ್ತೆ ದುರಸ್ತಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಗರಸಭೆಯ ಸದಸ್ಯರಾದ ಮೋಹನ ಹಲವಾಯಿ, ದಶರಥ ಬಂಡಿವಡ್ಡ ಆಗ್ರಹಿಸಿದರು.
ಹಳೆದಾಂಡೇಲಿಯಲ್ಲಿ ಕಳೆದ ೩ ವರ್ಷಗಳಿಂದ ರಸ್ತೆ ಹದಗೆಟ್ಟದ್ದರಿಂದ ಅಲ್ಲಿನ ಜನರು ತೀವ್ರ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಕಾರಣ ಅಲ್ಲಿ ಕೂಡಲೇ ರಸ್ತೆ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವಾರ್ಡ್ ಸದಸ್ಯೆ ಸಪುರಾ ಯರಗಟ್ಟಿ ಒತ್ತಾಯಿಸಿದರು.ಈ ರಸ್ತೆ ದುರಸ್ತಿ ಕುರಿತಂತೆ ಈಗಾಗಲೇ ಟೆಂಡರ್ ನೀಡಲಾಗಿದ್ದು, ಕಾಮಗಾರಿ ಆರಂಭಿಸುವ ಮುಂಚೆ ತಾತ್ಕಾಲಿಕ ರಸ್ತೆಗೆ ಅಗತ್ಯ ಕ್ರಮವನ್ನು ಕೈಗೊಳ್ಳಲು ಸಂಬಂಧಿಸಿದ ಗುತ್ತಿಗೆದಾರರಿಗೆ ಶಾಸಕರ ಕಾರ್ಯಾಲಯದಿಂದ ಸೂಚನೆ ನೀಡಲಾಗಿದೆ ಎಂದು ಮೋಹನ ಹಲವಾಯಿ ಸಭೆಯಲ್ಲಿ ತಿಳಿಸಿದರು.
ಮಳೆ ಕಡಿಮೆಯಾದ ಒಂದೆರಡು ದಿನದಲ್ಲಿ ಕ್ರಮ ಕೈಗೊಳ್ಳುವ ಭರವಸೆಯನ್ನು ನಗರಸಭೆಯ ಅಧ್ಯಕ್ಷ ಅಷ್ಪಾಕ ಶೇಖ ತಿಳಿಸಿದರು. ಗಾಂಧಿನಗರದಲ್ಲಿ ಶೌಚಾಲಯ ನಿರ್ಮಾಣವಾಗಿದೆ. ಆದರೆ ಅದಕ್ಕೆ ಇನ್ನು ವಿದ್ಯುತ್ ಹಾಗೂ ಸಿಂಟೆಕ್ಸ್ ಅಳವಡಿಸಿಲ್ಲ ಏಕೆ ಎಂದು ಸದಸ್ಯ ಬುದವಂತಗೌಡ ಪಾಟೀಲ ಪ್ರಶ್ನಿಸಿದರು.ಇದಕ್ಕೆ ಕೂಡಲೇ ಕ್ರಮ ಕೈಗೊಳ್ಳುವ ಭರವಸೆಯನ್ನು ಅಧ್ಯಕ್ಷರು ನೀಡಿದರು. ಸದಸ್ಯ ರೋಷನ ಜಿತ, ಆಸಿಫ್ ಮುಜಾವರ, ಮೋಹನ ಹಲವಾಯಿ, ಸಂಜಯ ನಂದ್ಯಾಳಕರ, ದಶರಥ ಬಂಡಿವಡ್ಡರ ಒಳ ಕ್ರೀಡಾಂಗಣದ ಬ್ಯಾಡ್ಮಿಂಟನ್ ಕೊಟ್ ದುರಸ್ತಿ ಕಾರ್ಯ ಇನ್ನು ಮುಗಿದಿಲ್ಲ. ಇದರಿಂದ ಸ್ಥಳೀಯ ಮಕ್ಕಳಿಗೆ ತರಬೇತಿಗೆ ತೊಂದರೆಯಾಗಿದೆ. ದಾಂಡೇಲಿ ಮಕ್ಕಳ ಕ್ರೀಡಾ ಭವಿಷ್ಯದ ಹಿದೃಷ್ಟಿಯಿಂದ ತಕ್ಷಣ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಮತ್ತು ಈ ಹಿಂದಿನ ಟೆಂಡರ್ನ್ನು ರದ್ದು ಮಾಡಿ ಮರು ಟೆಂಡರ್ ಕರೆಯಬೇಕು. ಈ ಕಾರ್ಯವನ್ನು ಆದ್ಯತೆಯ ಮೇರೆಗೆ ಗುಣಮಟ್ಟದಲ್ಲಿ ಮಾಡಿಕೊಡಬೇಕು ಒತ್ತಾಯಿಸಿದರು.
ನಗರಸಭೆ ನಾಮನಿರ್ದೇಶಿತ ಸದಸ್ಯ ರಾಜಶೇಖರ ಅವರು ಸುಭಾಸ ನಗರದ ಒಳಕ್ರೀಡಾಂಗಣ ಸುತ್ತ ವಾಕಿಂಗ್ ಪಾತ್ ನಿರ್ಮಿಸಬೇಕು. ಪಜಾ, ಪಪಂಗಳಿಗೆ ಮೀಸಲಿದ್ದ ಅನುದಾನದಲ್ಲಿ ನೀಡುವ ಸೌಭ್ಯಗಳ ಬಗ್ಗೆ ಸಮಪರ್ಕ ವಿವರಗಳನ್ನು ನೀಡಬೇಕು. ಹದಗೆಟ್ಟಿರುವ ರಸ್ತೆ ದುರಸ್ತಿಗೆ ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ಸಲಹೆ ನೀಡಿದರು.ಸಭೆಯಲ್ಲಿ ಸದಸ್ಯರಾದ ಯಾಸ್ಮೀನ ಕಿತ್ತೂರ, ಸರಸ್ವತಿ ರಜಪೂತ, ನರೇಂದ್ರ ಚವ್ಹಾಣ, ಮಜಿದ ಸನದಿ, ಅನೀಲ ನಾಯ್ಕರ, ರಮಾ ರವೀಂದ್ರ, ವೇಂಕಟ್ರಮನಮ್ಮಾ ಮೈತಕುರಿ ಮೊದಲಾದವರು ಸಭೆಯಲ್ಲಿ ಚರ್ಚೆ ನಡೆಸಿದರು. ಸಭೆಯಲ್ಲಿ ಉಪಾಧ್ಯಕ್ಷ ಶಿಲ್ಪಾ ಕೊಡೆ, ಸ್ಥಯಿ ಸಮಿ ಅದ್ಯಕ್ಷೆ ಸುಧಾ ಜಾಧವ, ಪೌರಾಯುಕ್ತ ವಿವೇಕ ಬನ್ನೆ, ನಗರಸಭೆಯ ಸದಸ್ಯರು,ನಗರ ಸಭೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.