ದಾಂಡೇಲಿ: ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಫೆ. 28ರಂದು ಗ್ರಾಮೀಣ ಭಾಗವಾದ ಆಲೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ.ಆಲೂರು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ತಹಸೀಲ್ದಾರ್ ಶೈಲೇಶ್ ಪರಮಾನಂದ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಿದ್ಧತಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ್ ಶೈಲೇಶ ಪರಮಾನಂದ ಅವರು, ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗ್ರಾಮೀಣ ಭಾಗದಲ್ಲಿ ನಡೆಸಲು ನಿಶ್ಚಯಿಸಿರುವುದು ಸ್ವಾಗತ. ಗ್ರಾಮೀಣ ಭಾಗದಲ್ಲಿಯೂ ಸಾಹಿತ್ಯದ ಅಭಿರುಚಿಯನ್ನು ಹೆಚ್ಚಿಸಬೇಕಾಗಿದೆ. ಹಾಗಾಗಿ ಗ್ರಾಮೀಣ ಭಾಗದಲ್ಲಿ ನಡೆಯುವ ಸಮ್ಮೇಳನವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಟಿ.ಸಿ. ಹಾದಿಮನಿ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಲೂರಿನಲ್ಲಿ ಹಬ್ಬದ ರೀತಿಯಲ್ಲಿ ಆಚರಿಸೋಣ. ಆಲೂರಿನ ಜನತೆ ಸೇರಿದ ಹಾಗೆ ತಾಲೂಕಿನ ಪ್ರತಿಯೊಬ್ಬರೂ ಇದಕ್ಕಾಗಿ ಶ್ರಮಿಸಬೇಕು ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ದಾಂಡೇಲಿ ತಾಲೂಕು ಆದ ನಂತರ ಎರಡು ಸಮ್ಮೇಳನಗಳು ನಗರ ಪ್ರದೇಶದಲ್ಲಿ ನಡೆದಿತ್ತು. ಈ ಬಾರಿ ಗ್ರಾಮೀಣ ಭಾಗದಲ್ಲಿ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ಆಲೂರಿನ ಗ್ರಾಮಸ್ಥರು ಆತಿಥ್ಯ ವಹಿಸಿಕೊಳ್ಳುವ ಭರವಸೆಯನ್ನು ನೀಡಿದ್ದಾರೆ. ಸಮ್ಮೇಳನದ ಯಶಸ್ವಿಗೆ ಸರ್ವರ ಸಹಕಾರದ ಅಗತ್ಯವಿದೆ ಎಂದರು. ಈ ಸಂದರ್ಭದಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ರಚಿಸಲಾಯಿತು. ಸಭೆಯ ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಾಮನ ಮಿರಾಶಿ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಮುರ್ತುಜಾ ಹುಸೇನ್ ಆನೆಹೊಸೂರ್, ಆಲೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಹೆಳವರ್ ಅವರು ಸಲಹೆ ಸೂಚನೆ ನೀಡಿದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮಣ್ ಜಾಧವ್, ಲಕ್ಷ್ಮಿಬಾಯಿ ಹರಿಜನ್, ಪ್ರಮುಖರಾದ ಪರಶುರಾಮ್ ಎಚ್.ಬಿ., ಗಿರೀಶ್ ಠೋಸೂರ, ಮಾರುತಿ ಕಾಂಬೇಕರ್, ಗಣಪತಿ ಬೇಕನಿ, ಮಹಾವೀರ್ ನೊರ್ಲೇಕರ, ಈಶ್ವರ್ ವಟ್ಲೇಕರ, ಮುಕುಂದ ದಳವಿ, ಸಿಆರ್ಪಿ ಲಲಿತಾ ಪುಟ್ಟೇಗೌಡ, ಶ್ರೀದೇವಿ ಪುಲೆ, ಮುಖ್ಯಾಧ್ಯಾಪಕ ರಾಮಪ್ಪ ಸಿದ್ದರ್, ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಹಲವಾಯಿ, ಪ್ರಮುಖರಾದ ಆರ್.ಪಿ. ನಾಯ್ಕ, ಕಸಾಪ ಕಾರ್ಯದರ್ಶಿ ಗುರುಶಾಂತ ಜಡೇಹಿರೇಮಠ, ಪ್ರವೀಣ್ ನಾಯ್ಕ್, ಶ್ರೀಮಂತ್ ಮದುರಿ, ಅಮೃತ್ ರಾಮರಥ, ಹನ್ಮಂತ್ ಕುಂಬಾರ್, ಭೀಮಾಶಂಕರ ಅಜನಾಳ, ಎಂ.ಆರ್. ನಾಯಕ್, ಅನಿಲ್ ನಾಯ್ಕರ, ಅನಿಲ ದಂಡಗಲ ಸುರೇಶ ಪಾಲನಕರ, ಕಲ್ಪನಾ ಪಾಟೀಲ ಮುಂತಾದವರಿದ್ದರು. ಗ್ರಾಮ ಲೆಕ್ಕಾಧಿಕಾರಿ ರವಿ ಕಮ್ಮಾರ ಸ್ವಾಗತಿಸಿದರು. ದಾಂಡೇಲಿ ಕಸಾಪ ಅಧ್ಯಕ್ಷ ನಾರಾಯಣ ನಾಯ್ಕ ವಂದಿಸಿದರು. ಕಾರ್ಯದರ್ಶಿ ಪ್ರವೀಣ ನಾಯ್ಕ ನಿರೂಪಿಸಿದರು.
ಫೆಬ್ರವರಿ 28ರಂದು ದಾಂಡೇಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ: ತಹಸೀಲ್ದಾರ್ ಶೈಲೇಶ್ ಪರಮಾನಂದ
ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗ್ರಾಮೀಣ ಭಾಗದಲ್ಲಿ ನಡೆಸಲು ನಿಶ್ಚಯಿಸಿರುವುದು ಸ್ವಾಗತ. ಗ್ರಾಮೀಣ ಭಾಗದಲ್ಲಿಯೂ ಸಾಹಿತ್ಯದ ಅಭಿರುಚಿಯನ್ನು ಹೆಚ್ಚಿಸಬೇಕಾಗಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.