ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ವತಿಯಿಂದ ವಾತ್ಸಲ್ಯ ಯೋಜನೆಯಡಿ ಬೆಳ್ತಂಗಡಿ ಜೈನ್ಪೇಟೆಯ ಪ್ರೇಮಾ ಅವರಿಗೆ ಕಟ್ಟಿಸಿದ ವಾತ್ಸಲ್ಯ ಮನೆಯ ಹಸ್ತಾಂತರ ಕಾರ್ಯಕ್ರಮ ಗುರುವಾರ ಜರುಗಿತು.
ಈಗಾಗಲೇ ಪ್ರತಿ ತಿಂಗಳು ಮಾಸಾಶನವನ್ನು ಪಡೆಯುತ್ತಿರುವ ಸದಸ್ಯೆ ಪ್ರೇಮಾ ಅವರ ವಾಸ್ತವ್ಯದ ಮನೆ ತೀರಾ ದುರಸ್ಥಿಯಲ್ಲಿದ್ದುದನ್ನು ಮನಗಂಡು ಕ್ಷೇತ್ರದ ಕಾರ್ಯಕರ್ತರ ಮೂಲಕ ಆಯ್ಕೆಗೊಳಿಸಿ ಯೋಜನೆ ಅನುಷ್ಠಾನಿಸಲಾಯಿತು.ಕ್ಷೇತ್ರದ ಪರವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ರವರು ನೂತನ ಮನೆ ಹಸ್ತಾಂತರಿಸಿ, ಕ್ಷೇತ್ರದಿಂದ ಮಾಸಾಶನ ನೀಡುತ್ತಿರುವ ಸದಸ್ಯರಿಗೆ ಕರೋನ ಸಂದರ್ಭದಲ್ಲಿ ಮಾಸಾಶನ ಮನೆಗೆ ತಲುಪಿಸಿದ ಕಾರ್ಯಕರ್ತರು ಪೋಟೋ ತೆಗೆದು ಹಾಕಿದಾಗ ಪೋಟೋದಲ್ಲಿರುವ ಮನೆಯ ಪರಿಸ್ಥಿತಿಯನ್ನು ಗಮನಿಸಿದ ಹೇಮಾವತಿ ಹೆಗ್ಗಡೆಯವರು ಈ ವಾತ್ಸಲ್ಯ ಯೋಜನೆ ಆರಂಭಿಸಿದ್ದು, ಈಗಾಗಲೇ ರಾಜ್ಯದಲ್ಲಿ ಸುಮಾರು 800 ಮನೆಗಳ ಹಸ್ತಾಂತರವಾಗಿದೆ. ಬೆಳ್ತಂಗಡಿ ತಾಲೂಕಿನಲ್ಲೂ 20 ರಷ್ಟು ಮನೆಗಳು ನಿರ್ಮಾಣವಾಗಿದೆ ಎಂದರು.ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜೇಶ್ ಪೂಜಾರಿ, ನಿಕಟಪೂರ್ವ ಅಧ್ಯಕ್ಷ ಜಯಾನಂದ ಗೌಡ ಶುಭ ಕೋರಿದರು.
ಪ್ರಗತಿ ಬಂಧು ಕೇಂದ್ರ ಸಮಿತಿ ಅಧ್ಯಕ್ಷ ಸೀತಾರಾಮ್ ಆರ್, ಜಿಲ್ಲಾ ನಿರ್ದೇಶಕ ದಿನೇಶ್ ಡಿ, ಜನಜಾಗೃತಿ ವೇದಿಕೆ ತಾಲೂಕು ಸಮಿತಿ ಸದಸ್ಯ, ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ, ಮೇಲಂತಬೆಟ್ಟು ಗ್ರಾ.ಪಂ. ನಿಕಟಪೂರ್ವಾಧ್ಯಕ್ಷೆ ಸವಿತಾ, ಸದಸ್ಯರಾದ ಚಂದ್ರಶೇಖರ, ಭಗವತಿ ದೇವಸ್ಥಾನದ ಮುಖ್ಯಸ್ಥ ಯೋಗೀಶ್, ಒಕ್ಕೂಟದ ಅಧ್ಯಕ್ಷರಾದ ಯಶವಂತ, ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರರಾಜ ಎಂ., ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕಿ ಗೀತಾ ಸುರೇಶ್ ಶೆಟ್ಟಿ, ಜನಜಾಗೃತಿ ಗ್ರಾಮ ಸಮಿತಿಯ ಉಪಾಧ್ಯಕ್ಷ ಸುರೇಶ್ ಶೆಟ್ಟಿ, ತಾಲೂಕು ಯೋಜನಾಧಿಕಾರಿ ಯಶೋಧರ ಮತ್ತಿತರರಿದ್ದರು.ಮನೆ ನಿರ್ಮಿಸಿದ ಮೇಸ್ತ್ರಿ ಶ್ರೀಧರ್, ಸೇವಾ ಪ್ರತಿನಿಧಿ ಲೀಲಾ ಮತ್ತು ಜ್ಯೋತಿ, ಶ್ರಮಾದಾನ ಸೇವೆ ನೀಡಿದ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು, ಹಾಗೂ ಸ್ಥಳೀಯರು ಈ ವೇಳೆ ಹಾಜರಿದ್ದರು.ಮೇಲಂತಬೆಟ್ಟು ವಲಯ ಮೇಲ್ವಿಚಾರಕ ಹಾಗೂ ಕೃಷಿ ಮೇಲ್ವಿಚಾರಕ ರಾಮ್ ಕುಮಾರ್ ಸ್ವಾಗತಿಸಿ, ಜ್ಞಾನವಿಕಾಸ ಕಾರ್ಯಕ್ರಮದ ಸಮನ್ವಯಾಧಿಕಾರಿ ಮಧುರಾ ವಸಂತ್ ವಂದಿಸಿದರು. ನೂತನ ಗೃಹವನ್ನು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜೇಶ್ ಉದ್ಘಾಟಿಸಿದರು. ಗ್ರಾ. ಯೋ. ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಫಲಕ ಅನಾವರಣಗೊಳಿಸಿದರು. ಮನೆಯೊಡತಿ ಪ್ರೇಮಾ ಶ್ರೀ ದೇವರಿಗೆ ದೀಪ ಪ್ರಜ್ವಲಿಸಿದರು. ತಾಲೂಕು ಜನಜಾಗೃತಿ ವೇದಿಕೆ ಸದಸ್ಯ ಅಶ್ರಫ್ ಆಲಿಕುಂಞಿ ಮುಂಡಾಜೆ ಅವರು ಕುರ್ಚಿಗಳನ್ನು ಕೊಡುಗೆಯಾಗಿ ಹಸ್ತಾಂತರಿಸಿದರು. ಕ್ಷೇತ್ರದ ವತಿಯಿಂದ ಪ್ರೇಮಾ ಅವರಿಗೆ ವಸ್ತ್ರಗಳು, ಚಾಪೆ ಹಾಗೂ ವಾತ್ಸಲ್ಯ ಆಹಾರದ ಕಿಟ್ ನೀಡಲಾಯಿತು.