ಸಾರಾಂಶ
ಕನ್ನಡಪ್ರಭ ವಾರ್ತೆ ಹರಿಹರ
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ಹರಿಹರ ಘಟಕದಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ದಾವಣಗೆರೆಗೆ ಆಗಮಿಸಿದ್ದ ಮುಖ್ಯಮಂತ್ರಿ ಅವರಿಗೆ ಮನವಿ ನೀಡಲಾಯಿತು.ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಕ.ದ.ಸಂ.ಸ. ಸ್ಥಾಪಕ ಪ್ರೊ. ಬಿ.ಕೃಷ್ಣಪ್ಪ ಅಧ್ಯಯನ ಪೀಠ ಆರಂಭಿಸಬೇಕು. ಹರಿಹರ ತಾಲೂಕಿನ ಕಡ್ಲೆಗೊಂದಿ ಹಾಗೂ ಭಾನುವಳ್ಳಿ ಗ್ರಾಮದ ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗದ ನಿರ್ವಸತಿಕರಿಗೆ ವಸತಿ ಯೋಜನೆ ಜಾರಿ ಮಾಡಬೇಕು. ಹರಳಹಳ್ಳಿ, ಗುಳದಹಳ್ಳಿ, ಜಿ.ಬೇವಿನಹಳ್ಳಿ, ಭಾನುವಳ್ಳಿ ಮತ್ತು ಬೆಳ್ಳೂಡಿ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ, ಹರಿಹರದ ಎ.ಕೆ. ಕಾಲೋನಿಯಲ್ಲಿರುವ ಪ್ರೊ. ಬಿ.ಕೃಷ್ಣಪ್ಪ ಅವರ ಮನೆಯನ್ನು ಸ್ಮಾರಕ ಆಗಿಸುವುದು ಹಾಗೂ ಆ ಮನೆಯಲ್ಲಿರುವ ಅವರ ಬಂಧುಗಳಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಪ್ರೊ. ಬಿ.ಕೃಷ್ಣಪ್ಪ ಜಯಂತಿ ಸರ್ಕಾರದಿಂದ ಆಚರಿಸಬೇಕು, ಜಾತಿ ಸಮೀಕ್ಷೆಯಲ್ಲಿ ನೋಂದಾವಣೆ ಮಾಡಿರುವ ಹಲವು ನಕಲಿ ಬೇಡ ಜಂಗಮರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಾಲ ಸವಲತ್ತು ಪಡೆಯಲು ಫಲಾನುಭವಿಗಳ ಆಯ್ಕೆ ಅಧಿಕಾರವನ್ನು ಶಾಸಕರ ಬದಲಾಗಿ ಸಂಬಂಧಿತ ಇಲಾಖೆ ಅಧಿಕಾರಿಗಳಿಗೆ ನೀಡಬೇಕು, ಬಡವರಿಗೆ ಅನುಕೂಲವಾಗಿರುವ ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದರು.ನಗರದ ಉದ್ದೇಶಿತ ಡಾ.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವುದು, ೨೦ ಎಕರೆಗೂ ಹೆಚ್ಚು ಪ್ರದೇಶ ಹೊಂದಿರುವ ಹರಿಹರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಿಸಬೇಕು, ಹರಿಹರ ನಗರಕ್ಕೆ ಸಂಚಾರಿ ಪೊಲೀಸ್ ಠಾಣೆ ಮಂಜೂರು ಮಾಡಬೇಕು, ತಾಲೂಕು ಸಮಾಜ ಕಲ್ಯಾಣ ಇಲಾಖೆಯಿಂದ ಕಳೆದ ಮೂರೂವರೆ ವರ್ಷದಿಂದ ನಡೆಯದ ಎಸ್ಸಿ, ಎಸ್ಟಿ ಕುಂದುಕೊರತೆ ಸಭೆ ಕೂಡಲೆ ಆಯೋಜಿಸಲು ಸೂಚನೆ ನೀಡಬೇಕು, ತುಂಗಭದ್ರಾ ನದಿ ಪರಿಸರದಲ್ಲಿ ೧೦ ವರ್ಷಗಳ ಕಾಲ ಮರಳು ಗಣಿಗಾರಿಕೆ ನಡೆಸದಂತೆ ಆದೇಶಿಸಬೇಕೆಂದು ಒತ್ತಾಯಿಸಲಾಯಿತು.
ಈ ಸಂದರ್ಭ ಜಿಲ್ಲಾ ಸಂಚಾಲಕ ಮಂಜುನಾಥ ಕುಂದವಾಡ, ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್, ಕಡ್ಲೆಗೊಂದಿ ತಿಮ್ಮಣ್ಣ, ವಿಜಯಲಕ್ಷ್ಮೀ, ನಾಗರಾಜ್, ಹನುಮಂತಪ್ಪ, ಹರೀಶ್ ಇತರರಿದ್ದರು.- - -
-17HRR04:ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹರಿಹರ ಕ.ದ.ಸಂ.ನಿಂ. ವತಿಯಿಂದ ಸಿಎಂಗೆ ಮನವಿ ಸಲ್ಲಿಸಲಾಯಿತು.