ಸಾರಾಂಶ
ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ
9ನೇ ವರ್ಷದ ಸಮೂಹಿಕ ಗಣೇಶೋತ್ಸವ ದಾಸರಹಳ್ಳಿಯಲ್ಲಿ ಅದ್ಧೂರಿಯಿಂದ ನಡೆಯಿತು. ಬಾಗಲಗುಂಟೆ ಎಂ.ಇ.ಐ ಆಟದ ಮೈದಾನದಲ್ಲಿ ಶುಕ್ರವಾರ ದಾಸರಹಳ್ಳಿ ಸಾಮೂಹಿಕ ಗಣೇಶೋತ್ಸವ ಸಮಿತಿ ವತಿಯಿಂದ 14 ಅಡಿ ಎತ್ತರದ ಗಣೇಶನನ್ನು ಪ್ರತಿಷ್ಠಾಪಿಸಲಾಗಿತ್ತು.ಸಾಮೂಹಿಕ ಗಣೇಶೋತ್ಸವದ ಮೆರೆವಣಿಗೆಗೆ ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ ಹಾಗೂ ಶಾಸಕ ಎಸ್.ಮುನಿರಾಜು ಚಾಲನೆ ನೀಡಿದರು. ಈ ವೇಳೆ ಮಾರಮ್ಮ ದೇವಸ್ಥಾನದ ಮುಂಭಾಗ ಗಣೇಶನ ಪ್ರಸಾದವಾದ 25 ಕೆ.ಜಿ. ಲಡ್ಡುವನ್ನು ಹರಾಜಿನಲ್ಲಿ ಚಿಕ್ಕಸಂದ್ರದ ಮೋಹನ್ ₹4.50 ಲಕ್ಷಕ್ಕೆ ಖರೀದಿಸಿದರು. ಕಳೆದ ಭಾರಿ ₹4.25 ಲಕ್ಷಕ್ಕೆ ಹರಾಜಾಗಿದ್ದ ಗಣೇಶ ಲಡ್ಡು ಈ ಬಾರಿ ₹4.50 ಲಕ್ಷಕ್ಕೆ ಹರಾಜಾಯಿತು. ಈ ಹಣವನ್ನು ಮುಂದಿನ ವರ್ಷದ ಗಣೇಶೋತ್ಸವಕ್ಕೆ ಮೀಸಲಿಡಲಾಗುತ್ತದೆ.
ಈ ವೇಳೆ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ನಮ್ಮ ಮನೆಯಲ್ಲಿ, ದೇವಸ್ಥಾನದಲ್ಲಿ ಪೂಜಿಸುತ್ತಿದ್ದ ಗಣೇಶನನ್ನು ಬೀದಿಗೆ ತಂದವರು ಬಾಲಗಂಗಾಧರ್ ತಿಲಕ್, ಗಣೇಶೋತ್ಸವ ಹಿಂದೂತ್ವದ ಪ್ರತೀಕ, ಜಾತಿ ಮೀರಿ ನೆಡೆಯುವ ಉತ್ಸವ, ದೇವರ ಹೆಸರಿನಲ್ಲಿ ನಡೆಯುವ ಉತ್ಸವದಲ್ಲಿ ಹಿಂದೂಗಳೆಲ್ಲ ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.ಶುಕ್ರವಾರ ಗಣೇಶೋತ್ಸವದಲ್ಲಿ ಸೂರಜ್ ಫೌಂಡೇಶನ್ ಸಂಸ್ಥಾಪಕಿ ಸುಜಾತಾ ಮುನಿರಾಜು ನೇತೃತ್ವದಲ್ಲಿ ಮಹಿಳೆಯರಿಗಾಗಿ ರಂಗೋಲಿ, ಗಾಯನ, ನೃತ್ಯ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದವು. ವಿಜೇತರಿಗೆ ಭಾನುವಾರ ಬಹುಮಾನ ನೀಡಲಾಯಿತು. ಗಿಚ್ಚಿ ಗಿಲಿಗಿಲಿ ಖ್ಯಾತಿಯ ರಾಘವೇಂದ್ರ (ರಾಗಿಣಿ) ಅವರಿಂದ ಕಾಮಿಡಿ ಶೋ ಮತ್ತು ಗಣ್ಯರಿಗೆ ಸನ್ಮಾನ ಕಾರ್ಯಕ್ರಮಗಳು ನಡೆದವು.
ಶನಿವಾರ ಸಂಜೆ ಖ್ಯಾತ ಗಾಯಕ ರಘು ದೀಕ್ಷಿತ್ ತಂಡದಿಂದ ಸಂಗೀತ ರಸಸಂಜೆ ನೇರ ಪ್ರಸಾರದಲ್ಲಿ ಸಂತ ಶಿಶುನಾಳ ಶರೀಫರ ಮತ್ತು ಚಿತ್ರಗೀತೆಗಳಿಗೆ ಅಲ್ಲಿ ಸೇರಿದ್ದ ಜನರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.ಮೆರವಣಿಗೆಯಲ್ಲಿ 75ಕ್ಕೂ ಹೆಚ್ಚು ಗಣೇಶ ಮೂರ್ತಿಗಳು ಇದ್ದವು. ಪಂಜಾಬ್, ಗುಜರಾತ್, ಮುಂಬೈ, ಕೇರಳ ಕರ್ನಾಟಕದಿಂದ ಬಂದ ಕಲಾತಂಡಗಳು ಅದ್ದೂರಿ ಮೆರವಣಿಗೆಗೆ ಮೆರುಗು ನೀಡಿದವು. ಕಲಾತಂಡಗಳ ಸದ್ದಿಗೆ ನೂರಾರು ಯುವಕರು, ಮಹಿಳೆಯರು, ಭಕ್ತಾದಿಗಳು ಹೆಜ್ಜೆ ಹಾಕಿದರು.
ಎಂ.ಇ.ಐ ಆಟದ ಮೈದಾನದಿಂದ ಪ್ರಾರಂಭವಾಗಿ ಬಾಗಲಗುಂಟೆ ಮಾರಮ್ಮನ ದೇವಸ್ಥಾನ, ಹೆಸರಘಟ್ಟ ಮುಖ್ಯ ರಸ್ತೆ, ಮಲ್ಲಸಂದ್ರದ ಪೈಪ್ ಲೈನ್, ಸೆಲೆಕ್ಷನ್ ಕಾರ್ನರ್ ಅಲ್ಲಿಂದ ದಾಸರಹಳ್ಳಿ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿತು. ಚೊಕ್ಕಸಂದ್ರದ ಕೆರೆ ಹತ್ತಿರದ ಕಲ್ಯಾಣಿಗೆ ವಿಸರ್ಜಿಸಲಾಯಿತು.ಗಣೇಶೋತ್ಸವ ಸಮಿತಿಯ ಸದಸ್ಯರಾದ ಸೋಮಶೇಖರ್, ಟಿ.ಎಸ್.ಗಂಗರಾಜು, ಬಿ.ಎಂ.ನಾರಾಯಣ್, ಸೌಂದರ್ಯ ಭರತ್, ಬಿ.ಎಂ.ಕೃಷ್ಣ, ಗುರುಪ್ರಸಾದ್, ಬಿ.ಅರ್.ಸತೀಶ್, ಸಂದೀಪ್ ಸಿಂಗ್, ಮಂಜುನಾಥ (ಅಪ್ಪು), ಪಿ.ಎಚ್.ರಾಜು, ಹಾವನೂರು ಬಡಾವಣೆ ಹನುಮಂತರಾಯಪ್ಪ, ಸುರೇಶ್ ಕೇಂಪೇಗೌಡ, ಶೆಟ್ಟಿಹಳ್ಳಿ ಸುರೇಶ್, ಶಶಿ ಶಿವಕುಮಾರ್, ಪಾಂಡುರಂಗರಾವ್, ಉಮಾದೇವಿ ನಾಗಾರಾಜ್, ಗಂಗಾಧರ್, ಅಬ್ಬಿಗೆರೆ ಮಂಜುನಾಥ್ ಗೌಡ, ಸಿ.ಎಸ್.ದಯಾನಂದ್ ಉಪಸ್ಥಿತರಿದ್ದರು.