ಸಾರಾಂಶ
ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಹತ್ತಿರವಿರುವ ತುಂಗಭದ್ರಾ ನದಿಯ ಸೇತುವೆಯ ಹೂವಿನ ಹಡಗಲಿ ಭಾಗದಲ್ಲಿ ಸೇತುವೆಯ ಮೇಲಿಂದ ನದಿಗೆ ಹಾರಲು ಯತ್ನಿಸಿದ ತಾಯಿ ಮತ್ತು ಮಗುವನ್ನು ತಡೆದು ಜೀವ ಉಳಿಸುವಲ್ಲಿ ದಾವಣಗೆರೆ ಯುವ ದಂಪತಿ ಯಶಸ್ವಿಯಾಗಿದ್ದು, ಮುಂಡರಗಿ ಪೊಲೀಸರು ಅವರನ್ನು ಕುಟುಂಬದವರಿಗೆ ಒಪ್ಪಿಸಿದ ಘಟನೆ ಶುಕ್ರವಾರ ಮಧ್ಯಾಹ್ನ 12.30ರ ವೇಳೆಗೆ ಜರುಗಿದೆ.
ಮುಂಡರಗಿ: ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಹತ್ತಿರವಿರುವ ತುಂಗಭದ್ರಾ ನದಿಯ ಸೇತುವೆಯ ಹೂವಿನ ಹಡಗಲಿ ಭಾಗದಲ್ಲಿ ಸೇತುವೆಯ ಮೇಲಿಂದ ನದಿಗೆ ಹಾರಲು ಯತ್ನಿಸಿದ ತಾಯಿ ಮತ್ತು ಮಗುವನ್ನು ತಡೆದು ಜೀವ ಉಳಿಸುವಲ್ಲಿ ದಾವಣಗೆರೆ ಯುವ ದಂಪತಿ ಯಶಸ್ವಿಯಾಗಿದ್ದು, ಮುಂಡರಗಿ ಪೊಲೀಸರು ಅವರನ್ನು ಕುಟುಂಬದವರಿಗೆ ಒಪ್ಪಿಸಿದ ಘಟನೆ ಶುಕ್ರವಾರ ಮಧ್ಯಾಹ್ನ 12.30ರ ವೇಳೆಗೆ ಜರುಗಿದೆ.
ತುಂಗಭದ್ರಾ ನದಿಗೆ ಹಾರಿ ಜೀವ ಕಳೆದುಕೊಳ್ಳಲು ಬಂದಿದ್ದ ಮಹಿಳೆಯನ್ನು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ನಿವಾಸಿ ಶಶಿಕಲಾ ಮಂಜುನಾಥ ಬಸವನಕೋಟೆ (30) ಹಾಗೂ ಆಕೆಯ 1 ವರ್ಷದ ಮಗು ಎಂದು ಗುರುತಿಸಲಾಗಿದೆ. ಈ ಮಹಿಳೆ ಶುಕ್ರವಾರ ಮಧ್ಯಾಹ್ನ 12.30ರ ವೇಳೆಗೆ ಕೊರ್ಲಹಳ್ಳಿ ಮದಲಗಟ್ಟಿ ಮಧ್ಯವಿರುವ ಸೇತುವೆ ಮೇಲಿಂದ ನದಿಗೆ ಹಾರುತ್ತಿರುವುದು ಕಂಡು ಬಂದಾಗ ಅದೇ ಮಾರ್ಗಮಧ್ಯದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ದಾವಣಗೆರೆಯ ಸುನಿಲಕುಮಾರ ದಂಪತಿ ತಾಯಿ ಮಗು ನದಿಗೆ ಬೀಳುತ್ತಿರುವುದನ್ನು ಕಂಡು ತಕ್ಷಣವೇ ಅವರನ್ನು ತಡೆದು ಪಕ್ಕಕ್ಕೆ ಕರೆತಂದು ಕೂಡಿಸಿದ್ದಾರೆ.ಮುಂಡರಗಿ ಪೊಲೀಸ್ ಠಾಣೆಯ ತುರ್ತು ಹೈವೇ ಪೆಟ್ರೋಲಿಂಗ್ ವಾಹನ 112ಗೆ ಕರೆ ಮಾಡಿ ವಿಷಯ ತಿಳಿಸಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ 112 ಸಿಬ್ಬಂದಿ ಹೆಡ್ ಕಾನ್ಸ್ಟೇಬಲ್ ಎಫ್.ಐ.ಖಾಜಿ, ಚಾಲಕ ಎಂ.ಜಿ.ಲಮಾಣಿ ಮಹಿಳೆಯನ್ನು ಮಾತನಾಡಿಸಿ ಮಾಹಿತಿ ಪಡೆದು ಅವರ ಮನೆಯವರಿಗೆ ಕರೆ ಮಾಡಿ ಆ ಮಹಿಳೆಯ ಪತಿ ಹಾಗೂ ಚಿಕ್ಕಪ್ಪನನ್ನು ಕರೆಸಿ ಸಮಾಲೋಚಿಸಿದ್ದಾರೆ. ಬಳಿಕ ಹೂವಿನ ಹಡಗಲಿ ಕಂಟ್ರೋಲ್ ರೂಮ್ ಗೆ ವಿಷಯ ತಿಳಿಸಿ ಮನೆಯವರೊಂದಿಗೆ ತಾಯಿ ಮಗುವನ್ನು ಹೂವಿನ ಹಡಗಲಿಗೆ ಕಳಿಸಿಕೊಟ್ಟಿದ್ದಾರೆ.