ಕನ್ನಡಪ್ರಭ ವಾರ್ತೆ ದಾವಣಗೆರೆ

ಈ ವರ್ಷದ ಮೊದಲ ರಾಷ್ಟ್ರೀಯ ಲೋಕ್ ಅದಾಲತ್ ದಾವಣಗೆರೆಯಲ್ಲಿ ಯಶಸ್ವಿಯಾಗಿ ಜರುಗಿದೆ. ವೈಮನಸ್ಸು, ಸಣ್ಣಪುಟ್ಟ ಜಗಳಗಳಿಂದಾಗಿ ದೂರವಾಗಿದ್ದ ದಂಪತಿ ಬಾಳಲ್ಲಿ ಈಗ ಹೊಸ ಬೆಳಕು ಮೂಡಿದೆ. ನ್ಯಾಯಾಲಯದಲ್ಲಿ ಈ ನಿಟ್ಟಿನಲ್ಲಿ ಪ್ರಕರಣಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವಲ್ಲಿ ಲೋಕ್ ಅದಾಲತ್ ಪ್ರಮುಖ ಪಾತ್ರ ವಹಿಸಿದೆ. ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಜಿಲ್ಲೆಯಲ್ಲಿ ಒಟ್ಟು 6818 ಜಾರಿಯಲ್ಲಿರುವ ಪ್ರಕರಣಗಳು ಮತ್ತು 1,72,551 ವ್ಯಾಜ್ಯ ಪೂರ್ವ ಪ್ರಕರಣಗಳು ರಾಜಿ ಮೂಲಕ ಮುಕ್ತಾಯಗೊಂಡಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಡಿ.ಕೆ.ವೇಲಾ ತಿಳಿಸಿದರು.

ಇಲ್ಲಿನ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಶನಿವಾರ ನಡೆದ ಲೋಕ್ ಅದಾಲತ್ ಕುರಿತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಯ ಲೋಕ್ ಅದಾಲತ್ ವಿಶೇಷತೆಗಳ ಕುರಿತು ಮಾಹಿತಿ ನೀಡಿದರು.

ಎಲ್ಲಾ ನ್ಯಾಯಾಲಯಗಳಿಂದ ಇದೇ ಮಾ.1 ರ ವೇಳೆಗೆ ಜಿಲ್ಲೆಯಲ್ಲಿ ಒಟ್ಟು 42,188 ಪ್ರಕರಣಗಳು ಬಾಕಿ ಇದ್ದವು. ಇದರಲ್ಲಿ ಲೋಕ್ ಅದಾಲತ್ ಗೆ ಒಟ್ಟು 11,841 ಪ್ರಕರಣಗಳನ್ನು ಗುರುತಿಸಲಾಗಿತ್ತು. ಶನಿವಾರ ಮಧ್ಯಾಹ್ನದ ವೇಳೆಗೆ ಸುಮಾರು 6,818 ಪ್ರಕರಣಗಳು ಯಶಸ್ವಿಯಾಗಿ ಇತ್ಯರ್ಥಗೊಂಡಿವೆ. ಜಿಲ್ಲೆಯಲ್ಲಿ ಒಟ್ಟು 37 ವೈವಾಹಿಕ ಪ್ರಕರಣಗಳ ರಾಜಿಯಾಗಿ ದಾವಣಗೆರೆ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇಧನ ಮತ್ತು ಜೀವನಾಂಶಕ್ಕಾಗಿ ಪ್ರಕರಣ ದಾಖಲಿಸಿದ್ದ 28 ಜೋಡಿಗಳು ಒಂದಾಗಿ ಮತ್ತೊಮ್ಮೆ ಸಹಬಾಳ್ವೆ ನಡೆಸಲು ತೆರಳಿದ್ದಾರೆ. ಅದರಂತೆ ದಾವಣಗೆರೆಯ 4ನೇ ಅಪರ ಸಿವಿಲ್ ನ್ಯಾಯಾಲಯದಲ್ಲಿ 2 ಜೋಡಿಗಳು, ಚನ್ನಗಿರಿ ತಾಲ್ಲೂಕು ನ್ಯಾಯಾಲಯಗಳಲ್ಲಿ 5, ಹರಿಹರ ತಾಲ್ಲೂಕು ನ್ಯಾಯಾಲಯಗಳಲ್ಲಿ 1, ಹೊನ್ನಾಳಿ ತಾಲೂಕು ನ್ಯಾಯಾಲಯಗಳಲ್ಲಿ 1. ಪ್ರಕರಣದಲ್ಲಿ ವಿವಾಹ ವಿಚ್ಛೇಧನೆ ಮತ್ತು ಜೀವನಾಂಶಕ್ಕಾಗಿ ಪ್ರಕರಣ ದಾಖಲಿಸಿದ್ದ ಪ್ರಕರಣ ಹೀಗೆ ಜಿಲ್ಲೆಯಲ್ಲಿ ಒಟ್ಟಾರೆ 37 ಜೋಡಿಗಳು ಒಂದಾಗಿ ಮತ್ತೊಮ್ಮೆ ಸಹಬಾಳ್ವೆ ನಡೆಸಲು ತೆರಳಿದ್ದಾರೆ ಎಂದು ತಿಳಿಸಿದರು.

ಒಂದೇ ಕುಟುಂಬದ ಮಹದೇವಪ್ಪ-ಶಾಂತಿಲೀಲಾ ಮತ್ತು ರುದ್ರಪ್ಪ ಕಲ್ಪನಾ ದಂಪತಿಗಳು ಅಕ್ಕ,ತಂಗಿ ಮತ್ತು ಅಣ್ಣ, ತಮ್ಮ ದಂಪತಿಗಳು ಬೇರೆ ಬೇರೆಯಾಗಿದ್ದರು ಇಂದು ಒಂದಾಗಿದ್ದು ವಿಶೇಷವಾಗಿತ್ತು. ರಾಜಿ ಮೂಲಕ ಮತ್ತೆ ಒಂದಾದ ಜೋಡಿಗಳು ತಮ್ಮ ಅನಿಸಿಕೆ ಹಂಚಿಕೊಂಡರು. ಆಸ್ತಿ ಹಂಚಿಕೆ ವಿಷಯದಲ್ಲಿ 16 ವರ್ಷಗಳಿಂದ ಬಗೆಹರಿಯದೆ ಇದ್ದ ಪ್ರಕರಣವನ್ನು ಲೋಕ್‌ ಅದಾಲತ್‌ನಲ್ಲಿ ಪರಿಹರಿಸಿದರು.


ರಾಜೀ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡ ಕಕ್ಷಿದಾರರಿಗೆ ಅಭಿನಂದನೆಗಳನ್ನು, ಹೆಚ್ಚು ಪ್ರಕರಣಗಳು ರಾಜೀಯಾಗಲು ಮತ್ತು ಪಕ್ಷಗಾರರಿಗೆ ಮಾಹಿತಿ, ಕಾನೂನು ಸಲಹೆ ಮತ್ತು ಮಾಹಿತಿಯನ್ನು ನೀಡಿದ ಜಿಲ್ಲೆಯ ಎಲ್ಲಾ ನ್ಯಾಯಾಧೀಶರಿಗೂ, ಸಂಧಾನಕಾರರಿಗೂ, ವಕೀಲರಿಗೂ ನ್ಯಾಯಾಂಗ ಇಲಾಖೆ, ವಕೀಲರ ಸಂಘಗಳು, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ನಗರಸಭೆ, ಬಿಎಸ್‌ಎನ್‌ಎಲ್‌ ಸಾರಿಗೆ ಇಲಾಖೆ ಇತರ ಅಧಿಕಾರಿಗಳು, ಸಿಬ್ಬಂದಿಗೆ ಧನ್ಯವಾದ ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ್ ಮ.ಕರೆಣ್ಣವರ, ಜಿಲ್ಲಾ ನ್ಯಾಯಾಧೀಶರು, ವಕೀಲರು ಇದ್ದರು.