ಪರಿಶಿಷ್ಟ ಜಾತಿ ಮತ್ತು ಅಲ್ಪಸಂಖ್ಯಾತರಿಗೆ, ಕೂಲಿ ಕಾರ್ಮಿಕರ ಭೂಮಿಯ ಹಕ್ಕಿಗಾಗಿ ಸೆ.10ರಂದು ಸಾಗರದ ಎಸಿ ಕಚೇರಿಯ ಮುಂದೆ ಅಹೋರಾತ್ರಿ ಧರಣಿ ನಡೆಸಲಾಗುತ್ತದೆ ಎಂದು ಬಿಜೆಪಿ ಮುಖಂಡ ಹಾಗೂ ಜಿ. ಪಂ. ಮಾಜಿ ಸದಸ್ಯ ರತ್ನಾಕರ ಹೊನಗೋಡ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಆನಂದಪುರ

ಪರಿಶಿಷ್ಟ ಜಾತಿ ಮತ್ತು ಅಲ್ಪಸಂಖ್ಯಾತರಿಗೆ, ಕೂಲಿ ಕಾರ್ಮಿಕರ ಭೂಮಿಯ ಹಕ್ಕಿಗಾಗಿ ಸೆ.10ರಂದು ಸಾಗರದ ಎಸಿ ಕಚೇರಿಯ ಮುಂದೆ ಅಹೋರಾತ್ರಿ ಧರಣಿ ನಡೆಸಲಾಗುತ್ತದೆ ಎಂದು ಬಿಜೆಪಿ ಮುಖಂಡ ಹಾಗೂ ಜಿ. ಪಂ. ಮಾಜಿ ಸದಸ್ಯ ರತ್ನಾಕರ ಹೊನಗೋಡ್ ತಿಳಿಸಿದರು.ಆನಂದಪುರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 8 ದಶಕಗಳಿಂದ ದಾಸಕೊಪ್ಪ, ಯಡೇಹಳ್ಳಿ, ಆಚಾಪುರ, ವ್ಯಾಪ್ತಿಯಲ್ಲಿ ವಾಸವಾಗಿರುವ 170ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಅಲ್ಪಸಂಖ್ಯಾತರಿಗೆ, ಕೂಲಿ ಕಾರ್ಮಿಕರಿಗೆ ವಾಸಿಸಿರುವಂತಹ ಭೂಮಿಗೆ ಹಕ್ಕನ್ನು ನೀಡುವಲ್ಲಿ ಅಧಿಕಾರಿಗಳು ಮಲತಾಯಿ ಧೋರಣೆ ಮಾಡಿದ್ದಾರೆ ಎಂದು ಆರೋಪಿಸಿದರು.

ಪರಿಷ್ಟ ಜಾತಿ ಮತ್ತು ಅಲ್ಪಸಂಖ್ಯಾತರಿಗೆ ಭೂಮಿಯ ಹಕ್ಕನ್ನು ನೀಡುವಂತೆ ಒತ್ತಾಯಿಸಿ ಸೆ. 10ರ ಗುರುವಾರ ಸಾಗರ ಎಸಿ ಕಚೇರಿಯ ಮುಂಭಾಗ ಅಹೋರಾತ್ರಿ ಧರಣಿ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಕಾಗೋಡು ತಿಮ್ಮಪ್ಪನವರು ಕಂದಾಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಖಾಸಗೀ ಜಮೀನಿನಲ್ಲಿ ವಾಸಿಸಿರುವ ದಾಖಲೆ ರಹಿತ ನಿವಾಸಿಗಳನ್ನು ಕಂದಾಯ ಗ್ರಾಮವೆಂದು ಪರಿಗಣಿಸಿ ಒಂದೇ ಸ್ಥಳದಲ್ಲಿ ಹತ್ತಕ್ಕಿಂತ ಹೆಚ್ಚು ಕುಟುಂಬಗಳು ವಾಸವಾಗಿದ್ದರೆ. ಅಂತಹ ಕುಟುಂಬಗಳಿಗೆ ಭೂಮಿಯ ಹಕ್ಕು ಪತ್ರವನ್ನು ನೀಡಬೇಕು ಎಂದು ಆದೇಶ ಮಾಡಿದ್ದರು. ವಾಸಿಸುವ ಭೂಮಿಗೆ ಹಕ್ಕು ಪತ್ರ ಕೊಡುವ ಆದೇಶವಿದ್ದರೂ ಅಧಿಕಾರಿಗಳು ಆದೇಶಕ್ಕೆ ಕಾಸಿನ ಕಿಮ್ಮತ್ತು ಇಲ್ಲದ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಳೆದ 8 ದಶಕಗಳಿಂದ ಪರಿಶಿಷ್ಟ ಜಾತಿ ಮತ್ತು ಅಲ್ಪಸಂಖ್ಯಾತ, ಕೂಲಿ ಕಾರ್ಮಿಕರು ಕುಟುಂಬಗಳು ಮನೆ ಕಟ್ಟಿಕೊಂಡು ವಾಸವಿರುವಂತಹ ಭೂಮಿಯ ಹಕ್ಕನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಮಂಜೂರು ಮಾಡಿರುವುದು ಎಷ್ಟು ಸರಿ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.

ವಾಸಿಸುವಂತಹ ಭೂಮಿಗೆ ಹಕ್ಕುಪತ್ರ ಸಿಗದೆ ಸರ್ಕಾರದ ಯಾವುದೇ ಯೋಜನೆಗಳು ದೊರೆಯುತ್ತಿಲ್ಲ. ಆದ್ದರಿಂದ ವಾಸವಾಗಿರುವ ಜಾಗಕ್ಕೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಅಹೋರಾತ್ರಿ ಧರಣಿ ನಡೆಸಲಾಗುತ್ತದೆ ಎಂದರು.

ಹಕ್ಕು ಪತ್ರಕ್ಕಾಗಿ ಹೋರಾಟ ನಡೆಸುವಂತಹ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿ ಜನರ ಸಮಸ್ಯೆಯನ್ನು ಆಲಿಸಿ ನಿರ್ದಿಷ್ಟ ಅವಧಿಯಲ್ಲಿ ಹಕ್ಕು ಪತ್ರ ನೀಡಲು ಅಧಿಕಾರಿಗಳನ್ನು ನೇಮಕ ಮಾಡುವ ಭರವಸೆ ನೀಡಿದರೆ ಮಾತ್ರ ಧರಣಿಯನ್ನು ಹಿಂದೆ ಪಡೆಯುತ್ತೇವೆ, ಇಲ್ಲವಾದಲ್ಲಿ ಧರಣಿ ಮುಂದುವರಿಸುತ್ತೇವೆ ಎಂದು ತಿಳಿಸಿದರು.