ಮಾವು ಪ್ರದರ್ಶನ, ಮಾರಾಟ ಮೇಳಕ್ಕೆ ಡಿಸಿ ಚಾಲನೆ

| Published : May 25 2024, 12:50 AM IST / Updated: May 25 2024, 12:51 AM IST

ಸಾರಾಂಶ

ಬಾಗಲಕೋಟೆ ವಿದ್ಯಾಗಿರಿಯ ಕಾಳಿದಾಸ ಕಲ್ಯಾಣ ಮಂಟಪದ ಆವರಣದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಶುಕ್ರವಾರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವಿದ್ಯಾಗಿರಿಯ ಕಾಳಿದಾಸ ಕಲ್ಯಾಣ ಮಂಟಪದ ಆವರಣದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಶುಕ್ರವಾರ ಚಾಲನೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಮಾವು ಮೇಳಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿ, ರೈತರಿಂದಲೇ ನೇರವಾಗಿ ಗ್ರಾಹಕರು ಖರೀದಿ ಮಾಡಬಹುದಾಗಿದೆ. ಕೃತಕವಾಗಿ ವಿವಿಧ ರಾಸಾಯನಿಕ ವಸ್ತುಗಳನ್ನು ಬಳಸಿ ಬೇಗ ಮಾಗುವಂತೆ ಮಾಡಿ ಮಾರಾಟದಿಂದ ಆರೋಗ್ಯಕ್ಕೆ ಹಾನಿಯಾಗಿರುವ ಪ್ರಕರಣ ನಡೆದಿದೆ. ಆದರೆ, ಈ ಮೇಳದಲ್ಲಿ ರೈತರೆ ತಾವು ಬೆಳೆದ ಮಾವಿನ ಹಣ್ಣನ್ನು ಮಾರುತ್ತಿರುವುದರಿಂದ ಉತ್ತಮ ಗುಣಮಟ್ಟದ ಹಣ್ಣುಗಳಾಗಿವೆ. ಉತ್ತಮ ಬೆಲೆಗೆ ಮಾರಾಟ ಮಾಡುತ್ತಿದ್ದು, ಮಾವು ಪ್ರಿಯರು ಇದರ ಉಪಯೋಗ ಪಡೆದುಕೊಳ್ಳಲು ತಿಳಿಸಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ರೈತರಿಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ. ಇಲ್ಲಿ ವಿವಿಧ ಬಗೆಯ ಮಾವು ಮಾರಾಟಕ್ಕೆ ಇಡಲಾಗಿದೆ. ಇನ್ನು ಕೆಲವು ಬಗೆಯ ಮಾವುಗಳ ಜನರ ಅರಿವಿಗೆ ಪ್ರದರ್ಶನಕ್ಕೆ ಇಡಲಾಗಿದೆ. ಮೇಳದಲ್ಲಿ ಬೆಳಗಾವಿ, ಧಾರವಾಡದಿಂದ ರೈತರು ಮಾರಾಟಕ್ಕೆ ಮಾವು ತಂದಿದ್ದಾರೆ. ಅಲ್ಲದೆ, ಜಿಲ್ಲೆಯ ಮುಧೋಳ, ಜಮಖಂಡಿ, ಬೀಳಗಿ ಹಾಗೂ ಬಾಗಲಕೋಟೆಯ ರೈತರ ಬೆಳೆದ ಮಾವು ಮೇಳದಲ್ಲಿ ಸಿಗುತ್ತವೆ. ಶನಿವಾರ ಮತ್ತು ಭಾನುವಾರ ಕೂಡ ನಡೆಯಲಿದ್ದು, ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ, ಯುಕೆಪಿ ಮಹಾವ್ಯವಸ್ಥಾಪಕ ರಮೇಶ ಕಳಸದ, ಜಿಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟೆ, ತೋಟಗಾರಿಕೆ ಸಹಾಯಕ ನಿರ್ದೇಶಕರಾದ ಬಸವರಾಜ ಗೌಡನ್ನವರ, ಗಣೇಶ ಪಟ್ಟಣಶೆಟ್ಟಿ, ಬಸವರಾಜ ಬೇನಾಳ ಸೇರಿದಂತೆ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ಮೇಳದಲ್ಲಿ ಅಪುಸಾ, ಅಲ್ಪೋಸಾ, ಕೊಂಕಣರುಚಿ, ಪುನಿತ, ರತಾ, ಕಿರಣ, ಅರುಣ, ಕೇಸರ, ಮಲ್ಲಿಕಾ ದಶಹರಿ, ಬನೆಶಾನ ಸೇರಿದಂತೆ ಇನ್ನಿತರ ತಳಿಗಳನ್ನು ಇಡಲಾಗಿದೆ.

ಗಮನ ಸೆಳೆದ ಜಪಾನಿ ಮಾವು:

ಜಪಾನಿ ದೇಶದ ತಳಿಯಾದ ಮಿಯಾ ಜಾಕಿ ಮಾವು ಪ್ರದರ್ಶನದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಈ ಹಣ್ಣಿನ ಬೆಲೆ ಕೇಳಿದ ಜನತೆ ಹೌತ್ರುತ್ತಿದ್ದಾರೆ. ಇದು ಪ್ರತಿ ಕೆಜಿಗೆ ₹ 2 ಲಕ್ಷದವರೆಗೆ ಮಾರಾಟವಾಗುತ್ತಿದಯಂತೆ. ಈ ಹಣ್ಣು ಆ್ಯಂಟಿ ಎಜಿಂಗ್ ಗುಣ ಹೊಂದಿರುತ್ತದೆ. ಈ ಮಾವಿಗೆ ಹೆಚ್ಚಿನ ಬೇಡಿಕೆ ಇದ್ದು, ಈ ಭಾಗದ ರೈತರು ಸಹ ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ ಎಂದು ರೈತರು ಹೇಳಿದರು.