ಹುನಗುಂದ ತಾಲೂಕಲ್ಲಿ ಡಿಸಿ ಬೆಳೆಹಾನಿ ವೀಕ್ಷಣೆ

| Published : Sep 04 2025, 02:00 AM IST

ಹುನಗುಂದ ತಾಲೂಕಲ್ಲಿ ಡಿಸಿ ಬೆಳೆಹಾನಿ ವೀಕ್ಷಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಹುನಗುಂದ ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆಯಿಂದ ಹಾನಿಗೊಳಗಾದ ತೊಗರಿ, ಹೆಸರು, ಸೂರ್ಯಕಾಂತಿ, ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಹಾನಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಸಂಗಪ್ಪ ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಹುನಗುಂದ ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆಯಿಂದ ಹಾನಿಗೊಳಗಾದ ತೊಗರಿ, ಹೆಸರು, ಸೂರ್ಯಕಾಂತಿ, ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಹಾನಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಸಂಗಪ್ಪ ಭೇಟಿ ನೀಡಿ ಪರಿಶೀಲಿಸಿದರು.

ಹುನಗುಂದ ತಾಲೂಕಿನ ರಕ್ಕಸಗಿ, ಬೇವಿನಮಟ್ಟಿ, ಹಿರೇಬಾದವಾಡಗಿ, ಹಿರೇಯರಣಕೇರಿ, ರಾಮತಾಳ ಗ್ರಾಮದಲ್ಲಿ ಮಳೆಯಿಂದ ಹಾನಿಗೊಳಗಾದ ವಿವಿಧ ಬೆಳೆಗಳನ್ನು ವೀಕ್ಷಣೆ ಮಾಡಿದರು. ಪ್ರಸ್ತುತ ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಗಳು ಬಹಳ ಸೂಕ್ಷ್ಮ ಬೆಳೆಗಳಾಗಿದ್ದು, ಹೆಚ್ಚಿನ ತೇವಾಂಶದಿಂದ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿ ಬೇರುಗಳಲ್ಲಿ ಕೊಳೆ ಬರಲು ಪ್ರಾರಂಭವಾಗಿದ್ದು, ಇದೇ ರೀತಿ ಮಳೆ ಮುಂದುವರಿದರೆ ಹೆಚ್ಚಿನ ಹಾನಿ ಉಂಟಾಗಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟರು.

ಕೃಷಿ ಬೆಳೆಗಳಾದ ಸೂರ್ಯಕಾಂತಿ, ತೊಗರಿ ಹಾಗೂ ಹೆಸರು ಬೆಳೆಗಳು ಮಳೆಗೆ ಹಾನಿಯಾಗಿದ್ದು, ಹೆಚ್ಚಿನ ಮಳೆಯಿಂದ ಸೂರ್ಯಕಾಂತಿಯಲ್ಲಿ ಕಾಳು ಕಟ್ಟದೆ ಇರುವುದು ಮತ್ತು ಹೆಸರು ಬೆಳೆಯಲ್ಲಿ ಕೊಯ್ಲು ಮಾಡಲು ಸಹ ಮಳೆ ಬಿಡುತ್ತಿಲ್ಲವೆಂದು ಸ್ಥಳೀಯ ರೈತರು ಹಾಗೂ ಅಧಿಕಾರಿಗಳು ತಿಳಿಸಿದರು. ಇದಕ್ಕೆ ಸಂಬಂಧಿಸಿದಂತೆ ವಿಜ್ಞಾನಿಗಳು ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ರೀತಿಯಲ್ಲಿ ಬೆಳೆ ವೀಕ್ಷಿಸಿ ಮುಂಬರುವ ದಿನಗಳಲ್ಲಿ ರೈತರಿಗೆ ಅವಶ್ಯವಿರುವ ಮಾಹಿತಿ ನೀಡಲು ತಿಳಿಸಿದರು. ಈಗಾಗಲೇ ಹಾನಿಗೊಳಗಾದ ಬೆಳೆಗಳ ಕುರಿತು ಸಮಗ್ರ ಮಾಹಿತಿ ನೀಡಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಬೇವಿನಮಟ್ಟಿ ಗ್ರಾಮದ ಚಂದ್ರಶೇಖರ ಹಳ್ಳೂರ, ಬಸಪ್ಪ ಸೂಳೇಭಾವಿ, ಮಹಾಂತಗೌಡ ದೊಡಮನಿ, ರಮೇಶ ಸುಂಕದ, ಪ್ರಶಾಂತ ತನಹಳ್ಳಿ, ಹಿರೇಬಾದವಾಡಗಿ ಗ್ರಾಮದ ಬಸವಣೆಪ್ಪ ಹಳ್ಳೂರ, ಸಾವಿತ್ರಮ್ಮ ತುಂಬರಮಟ್ಟಿ, ಹುನಗುಂದ ಅಮರಪ್ಪ ಹಕಾರಿ, ಗಂಗಮ್ಮ ತೋಟಗೇರ ಬೆಳೆದ ತೊಗರಿ ಬೆಳೆಹಾನಿ ವೀಕ್ಷಣೆ ಮಾಡಿದರು. ಈಗಾಗಲೇ ಕ್ಷೇತ್ರ ಮಟ್ಟದಲ್ಲಿ ಕೃಷಿ, ತೋಟಗಾರಿಕೆ, ಕಂದಾಯ ಹಾಗೂ ಗ್ರಾಮ ಅಭಿವೃದ್ದಿ ಅಧಿಕಾರಿಗಳ ಜಂಟಿ ಸಮೀಕ್ಷೆ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಭೇಟಿ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ, ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟಿ, ಕೃಷಿ ಉಪನಿರ್ದೇಶಕ ಎಲ್.ಐ. ರೂಢಗಿ, ಸಹಾಯಕ ಕೃಷಿ ನಿರ್ದೇಶಕ ಸೋಮಲಿಂಗಪ್ಪ, ತೋಟಗಾರಿಕೆ ಹಿರಿಯ ಸಹಾಯಕನಿರ್ದೇಶಕ ಸುಭಾಷ ಸುಲ್ಪಿ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವಿಜ್ಞಾನಿಗಳಾದ ಡಾ.ಶಶಿಕಾಂತ, ಡಾ.ಸತ್ಯನಾರಾಯಣ ಸಿ, ನೂರುಲ್ಲ ಹಾವೇರಿ ಸೇರಿ ಇತರರು ಇದ್ದರು.----ಕೋಟ್

ರೈತರ ಜಮೀನುಗಳಿಗೆ ಭೇಟಿ

ಹಿರೇಬಾದವಾಡಗಿ ಗ್ರಾಮದ ಮಹಾಂತವ್ವ ಮೇಟಿ ಸ.ನಂ. 36/2ರಲ್ಲಿ ಬೆಳೆದ ಮೆಣಸಿನಕಾಯಿ ಬೆಳೆ ಹಾನಿ ವೀಕ್ಷಿಸಿದರು. ಶರಣಪ್ಪ ರೇವಡಿ ಜಮೀನಿನಲ್ಲಿ ಬೆಳೆದ ಈರುಳ್ಳಿ, ಮೆಣಸಿನಕಾಯಿ, ಬೇವಿನಮಟ್ಟಿ ಗ್ರಾಮದ ಸಂಗಪ್ಪ ಮಹಾಂತಪ್ಪನವ, ವೀರಭದ್ರಪ್ಪ ಅಕ್ಕಿ, ಶಿವುಪುತ್ರಪ್ಪ ಹೊನವಾಡ, ಹಿರೇಯರನಕೇರಿ ಗ್ರಾಮದ ಸಿದ್ದಲಿಂಗಪ್ಪ ಹಡಗಲಿ ಅವರ ಜಮೀನಲ್ಲಿ ಬೆಳೆದ ಈರುಳ್ಳಿ, ರಾಮಥಾಳ ಗ್ರಾಮದ ಕಸ್ತೂರೆವ್ವ ಸೀಮಿಕೇರಿ, ಭೀಮರಾಯಪ್ಪ ಹುಗ್ಗಿ ಅವರ ಜಮೀನಿನಲ್ಲಿ ಬೆಳೆದ ತೊಗರಿ, ಬಸವರಾಜ ಕೊಪ್ಪದ ಬೆಳೆದ ಸೂರ್ಯಕ್ರಾಂತಿ ಬೆಳೆ ಹಾನಿ ವೀಕ್ಷಿಸಲಾಯಿತು.