ಹೊಸಪೇಟೆ: ನಗರದ ಔಷಧಿ ಅಂಗಡಿಗಳಿಗೆ ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ, ಎಸ್ಪಿ ಎಸ್‌. ಜಾಹ್ನವಿ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಔಷಧಿ ವಹಿವಾಟನ್ನು ಕಂಫ್ಯೂಟರ್, ರಿಜಿಸ್ಟರ್ ಬುಕ್ ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು. ವೈದ್ಯರ ಚೀಟಿ ಇಲ್ಲದೇ ಯಾರಿಗೂ ಯಾವುದೇ ಬಗೆಯ ಔಷಧ ನೀಡದಂತೆ ಸೂಚಿಸಿದರು. ಅಂಗಡಿಗಳ ಮುಂದೆ ಗ್ರಾಹಕರಿಗೆ ಕಾಣುವ ರೀತಿಯಲ್ಲಿ ವೈದ್ಯದ ಚೀಟಿ ಇಲ್ಲದೇ ಔಷಧಿ ನೀಡುವಂತಿಲ್ಲ. ಒಂದು ವೇಳೆ ವೈದ್ಯರ ರಸೀದಿ ಇಲ್ಲದೇ ಮಾತ್ರೆಗಳನ್ನು ನೀಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ವೈದ್ಯರ ಚೀಟಿ ಇಲ್ಲದೇ ಔಷಧಿ ಕೊಡುವುದಿಲ್ಲ ಎಂಬ ಫಲಕ ಅಳವಡಿಸುವಂತೆ ಸೂಚಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಕೆಲವರು ಮಾದಕ ವಸ್ತು ಸಿಗಲಿಲ್ಲ ಎಂಬ ಕಾರಣಕ್ಕೆ ನಿದ್ದೆ ಮಾತ್ರೆಯಂತಹ ಔಷಧವನ್ನು ಅತಿಯಾಗಿ ಸೇವಿಸಿ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುವ ಸಾಧ್ಯತೆ ಇದೆ. 1940ರ ಔಷಧ ಮತ್ತು ಕಾಂತಿವರ್ಧಕ ಕಾಯ್ದೆಯಂತೆ (ಡ್ರಗ್ಸ್ ಆ್ಯಂಡ್‌ ಕಾಸ್ಮೆಟಿಕ್ಸ್‌ ಆ್ಯಕ್ಟ್‌) ಔಷಧ ಅಂಗಡಿಯವರು ನಿಯಮ ರೂಪಿಸಿ ತಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂಬುದೇ ಜಿಲ್ಲಾಡಳಿತದ ಉದ್ದೇಶ ಎಂದರು.

ಎಸ್‌ಪಿ ಎಸ್.ಜಾಹ್ನವಿ ಮಾತನಾಡಿದರು. ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಇಲಾಖೆಯ ಸಹಾಯಕ ಔಷಧಿ ನಿಯಂತ್ರಕ ಜಿ.ವಿ. ನಾರಾಯಣರೆಡ್ಡಿ, ಅಡಿಷನಲ್‌ ಎಸ್ಪಿ ಜಿ. ಮಂಜುನಾಥ, ಹೊಸಪೇಟೆ ಡಿವೈಎಸ್‌ಪಿ ಡಾ. ಟಿ. ಮಂಜುನಾಥ, ಸಂಚಾರಿ ಪೊಲೀಸ್ ಠಾಣೆ ಪಿಐ ಡಿ. ಹುಲುಗಪ್ಪ ಇದ್ದರು.

ಹೊಸಪೇಟೆ ನಗರದ ಔಷಧಿ ಅಂಗಡಿಗಳಿಗೆ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ಎಸ್ಪಿ ಎಸ್‌. ಜಾಹ್ನವಿ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.