ಮಲ್ಪೆ ಬಂದರಿನಲ್ಲಿರುವ ಬಾಲ ಕಾರ್ಮಿಕತೆ ಕಡಿವಾಣಕ್ಕೆ ಡಿಸಿ ಕಟ್ಟುನಿಟ್ಟು ಸೂಚನೆ

| Published : Oct 10 2024, 02:17 AM IST

ಮಲ್ಪೆ ಬಂದರಿನಲ್ಲಿರುವ ಬಾಲ ಕಾರ್ಮಿಕತೆ ಕಡಿವಾಣಕ್ಕೆ ಡಿಸಿ ಕಟ್ಟುನಿಟ್ಟು ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

14 ವರ್ಷದೊಳಗಿನ ಬಾಲ ಕಾರ್ಮಿಕರು ಮಲ್ಪೆಯ ಮೀನುಗಾರಿಕಾ ಬಂದರಿನಲ್ಲಿ ಮೀನು ಹೆಕ್ಕುವ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಕಾರ್ಯಪಡೆಯ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದರು.ಅವರು ಬುಧವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಲ್ಪೆ ಬಂದರಿನಲ್ಲಿ ಬೆಳಗಿನ ಜಾವ ನಡೆಯುವ ಮೀನಿನ ಹರಾಜು ಕೇಂದ್ರಗಳಲ್ಲಿ ಮಕ್ಕಳು ಮೀನು ಹೆಕ್ಕುವ ಕಾರ್ಯದಲ್ಲಿ ತೊಡಗುತ್ತಿದ್ದಾರೆ. ಈ ಹಿಂದೆ ದಾಳಿ ನಡೆಸಿದರೂ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಕಾರ್ಯಪಡೆಯ ಸದಸ್ಯರು ಆಗಿಂದಾಗ್ಗೆ ನಿರಂತರ ಅನಿರೀಕ್ಷಿತ ದಾಳಿ ಹಾಗೂ ಭೇಟಿಗಳನ್ನು ಮಾಡುವುದರೊಂದಿಗೆ ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಸೂಚನೆ ನೀಡಿದರು.

ಬಾಲ ಕಾರ್ಮಿಕತೆ ಮಕ್ಕಳ ಬಾಲ್ಯ, ಅವರ ಸಾಮರ್ಥ್ಯ, ಘನತೆ ಕಸಿದುಕೊಳ್ಳುವ ಹಾಗೂ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ನೈತಿಕವಾಗಿ ಹಾನಿಕಾರವಾಗುತ್ತದೆ. ಆದ್ದರಿಂದ ಅವರು ಶಿಕ್ಷಣವಂತರಾಗಬೇಕು. ಉತ್ತಮ ವಿದ್ಯಾವಂತರಾಗಿ ಭವಿಷ್ಯ ರೂಪಿಸಿಕೊಳ್ಳಬೇಕು. ಆದರೆ ವಿವಿಧ ಕಾರಣಗಳಿಂದಾಗಿ ಮಕ್ಕಳು ಶಾಲೆಯನ್ನು ಬಿಟ್ಟು ದುಡಿಮೆಗೆ ಮುಂದಾಗುತ್ತಾರೆ. ಇದನ್ನು ತಪ್ಪಿಸಬೇಕಿದೆ ಎಂದರು.ಬಾಲ ಕಾರ್ಮಿಕ ವೃತ್ತಿಯಲ್ಲಿ ತೊಡಗಿಸಿಕೊಂಡ ಯಾವುದೇ ಒಬ್ಬ ವ್ಯಾಪಾರಿ ಅಥವಾ ಉದ್ಯಮಿ ವಿರುದ್ಧ ಕಾನೂನಿನ ಅನ್ವಯ ತಪ್ಪದೇ ಪ್ರಕರಣ ದಾಖಲಿಸಿ, ಅವರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಅವರ ವಿರುದ್ಧ ಪ್ರಕರಣ ದಾಖಲಿಸುವುದರ ಜೊತೆಗೆ ಅವರ ಪರವಾನಗಿಯನ್ನು ಸ್ಥಳೀಯ ಸಂಸ್ಥೆಗಳು ರದ್ದುಗೊಳೀಸಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮ್ಮದ್, ಪೌರಾಯುಕ್ತ ರಾಯಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಐ.ಪಿ. ಗಡಾದ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ನಿರ್ದೇಶಕಿ ಅಮೃತ, ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

----------111 ಮಕ್ಕಳು ಶಾಲೆಯಿಂದ ಹೊರಗಿದ್ದಾರೆ

ಶಾಲೆಗೆ ಹೋಗದೇ ಕೆಲವು ಮಕ್ಕಳು ಪೋಷಕರ ಜೊತೆಯಲ್ಲಿ ಕೆಲಸ ಮಾಡುವ ಸ್ಥಳಕ್ಕೆ ಹೋಗಿ ಬೆಳಗ್ಗಿನಿಂದ ಸಂಜೆ ವರೆಗೆ ಕಾಲ ಕಳೆಯುತ್ತಾರೆ. ಅಂಥವರು ಕಂಡು ಬಂದಲ್ಲಿ ಪೋಷಕರಿಗೆ ಮಕ್ಕಳನ್ನು ಶಾಲೆಗೆ ಸೇರಿಸಲು ತಿಳಿ ಹೇಳಬೇಕು. ಕಳೆದ ಒಂದು ವರ್ಷದಲ್ಲಿ 111 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಇವರಲ್ಲಿ ಕೆಲವರು ಹೊರ ರಾಜ್ಯ, ಹೊರ ಜಿಲ್ಲೆಯಿಂದ ಬಂದವರಾಗಿದ್ದು, ಅವರು ಶಾಲೆಗೆ ಹೋಗುವಂತೆ ನಿಗಾ ವಹಿಸಬೇಕು ಎಂದು ಡಿಸಿ ಸೂಚಿಸಿದರು.