ಸಾರಾಂಶ
. ಸಮಾಜ ಮತ್ತು ದೇಶದ ಹಿತದೃಷ್ಟಿಯಿಂದ ಉತ್ತಮ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು
ಕನ್ನಡಪ್ರಭ ವಾರ್ತೆ ಮೈಸೂರು
ಆರೋಗ್ಯಕರ ದೇಶವನ್ನು ನಿರ್ಮಿಸಬೇಕಾದರೆ ಆರೋಗ್ಯವಂತ ಜನರು ಬೇಕು. ಹೀಗಾಗಿ, ಯುವಕರು ತಂಬಾಕು ಪದಾರ್ಥಗಳನ್ನು ಬಳಸುವುದನ್ನು ಬಿಡಬೇಕು ಎಂದು ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಎಂ. ಮುತ್ತುರಾಜು ಕರೆ ನೀಡಿದರು.ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ತಂಬಾಕು ವಿರೋಧಿ ದಿನದ ಅಂಗವಾಗಿ ಭಾರತ್ ಕ್ಯಾನ್ಸರ್ ಆಸ್ಪತ್ರೆಯು ಶನಿವಾರ ಆಯೋಜಿಸಿದ್ದ ಸೈಕ್ಲೋಥಾನ್- ತಂಬಾಕು ವಿರೋಧಿ ಸೈಕಲ್ ರ್ಯಾಲಿಯಲ್ಲಿ ಅವರು ಮಾತನಾಡಿದರು.
ಯುವಕರು ಆರೋಗ್ಯವಂತರಾಗಿಲ್ಲದಿದ್ದರೆ ಸಮಾಜವು ಆರೋಗ್ಯವಾಗಿರುವುದನ್ನು ನಿರೀಕ್ಷಿಸಲು ಹೇಗೆ ಸಾಧ್ಯ?. ಸಮಾಜ ಮತ್ತು ದೇಶದ ಹಿತದೃಷ್ಟಿಯಿಂದ ಉತ್ತಮ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.ಶಿಲ್ಪ ಕಲಾವಿದ ಅರುಣ್ ಯೋಗಿರಾಜ್ ಮಾತನಾಡಿ, ತಂಬಾಕಿನಿಂದಾಗಿ ನಾನು ನನ್ನ ತಂದೆಯನ್ನು ಕಳೆದುಕೊಂಡಿದ್ದೇನೆ. ಆದ್ದರಿಂದ ಯುವಕರು ಸೇರಿದಂತೆ ಎಲ್ಲರೂ ಆರೋಗ್ಯಕರ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಯಾವುದೇ ತಂಬಾಕು ಸಂಬಂಧಿತ ಉತ್ಪನ್ನಗಳಿಗೆ ದಸರಾಗಬಾರದು ಎಂದು ಮನವಿ ಮಾಡಿದರು.
ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭವಾದ ಸೈಕಲ್ ರ್ಯಾಲಿಯು ಚಾಮರಾಜ ವೃತ್ತ, ಗನ್ ಹೌಸ್, ಪಾಲಿಕೆ ವೃತ್ತದ ಮೂಲಕ ಸಾಗಿ ಅದೇ ಮಾರ್ಗದಲ್ಲಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಅಂತ್ಯವಾಯಿತು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.ಆಸ್ಪತ್ರೆಯ ಹಿರಿಯ ಸಲಹೆಗಾರ ವೈದ್ಯಕೀಯ ಆಂಕೊಲಾಜಿಸ್ಟ್ ಡಾ.ಕೆ.ಜಿ. ಶ್ರೀನಿವಾಸ್, ಡಾ. ಸೌಮ್ಯ, ಡಾ.ಎಂ. ವಿಜಯ್ ಕುಮಾರ್, ಗೌತಮ್ ಧಮೇರ್ಲಾ, ಡಾ. ಅಗ್ನಿಕಾ ಅಜಯ್ ಕುಮಾರ್, ಆನಂದ್, ವಸಂತಕುಮಾರ್ ಇದ್ದರು.