ಸಾರಾಂಶ
ಚಿಕ್ಕಮಗಳೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಇತ್ತೀಚೆಗೆ ಆನೆ ದಾಳಿಯಿಂದ ಸಾವು ನೋವುಗಳು ಸಂಭವಿಸುತ್ತಿದ್ದು, ಇದನ್ನು ಶಾಶ್ವತವಾಗಿ ತಡೆಯಲು ಈ ಜಿಲ್ಲೆಯಲ್ಲಿ ಆನೆದೊಡ್ಡಿಗಳನ್ನು ನಿರ್ಮಾಣ ಮಾಡಬೇಕು ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ
ಉಡುಪಿ : ಚಿಕ್ಕಮಗಳೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಇತ್ತೀಚೆಗೆ ಆನೆ ದಾಳಿಯಿಂದ ಸಾವು ನೋವುಗಳು ಸಂಭವಿಸುತ್ತಿದ್ದು, ಇದನ್ನು ಶಾಶ್ವತವಾಗಿ ತಡೆಯಲು ಈ ಜಿಲ್ಲೆಯಲ್ಲಿ ಆನೆದೊಡ್ಡಿಗಳನ್ನು ನಿರ್ಮಾಣ ಮಾಡಬೇಕು ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆಯಲ್ಲಿ ಇತ್ತೀಚೆಗೆ ೫ಕ್ಕೂ ಹೆಚ್ಚು ಮಂದಿ ಆನೆ ದಾಳಿಯಿಂದ ಸಾವನಪ್ಪಿದ್ದಾರೆ. ಕಳೆದ ಒಂದು ವಾರದಲ್ಲಿ ಬನ್ನೂರಿನ ಅನಿತಾ, ಶೃಂಗೇರಿಯ ಸುಬ್ಬೇಗೌಡರು ಆನೆಗಳ ದಾಳಿಗೆ ಬಲಿಯಾಗಿದ್ದಾರೆ. ಈ ಭಾಗಗಳಲ್ಲಿ ದಿನನಿತ್ಯ ಮಾನವ ಪ್ರಾಣಿ ಸಂಘರ್ಷದಿಂದ ಜನ ಜೀವನಕ್ಕೆ ಬೆದರಿಕೆ ಉಂಟಾಗಿದೆ. ಆದ್ದರಿಂದ ಕಾಡುಪ್ರಾಣಿಗಳ ಅದರಲ್ಲೂ ಆನೆ ದಾಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಎಂದು ಅವರು ಮನವಿಯಲ್ಲಿ ಹೇಳಿದ್ದಾರೆ.
ಈ ಭಾಗದಲ್ಲಿ ಆನೆಗಳ ಸಂತತಿ ವೇಗವಾಗಿ ಬೆಳೆಯುತ್ತಿದ್ದು, ಅವುಗಳು ರೈತಾಪಿ ವರ್ಗದ ಬೆಳೆ ಮಾತ್ರವಲ್ಲ, ಕೃಷಿ ಕಾರ್ಯದಲ್ಲಿ ನಿರತರಾದ ರೈತರನ್ನೂ ಹತ್ಯೆ ಮಾಡುತ್ತಿವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಟ್ಟಾಗಿ ಆನೆಗಳ ನಿಯಂತ್ರಣ ಮತ್ತು ಆನೆ ದೊಡ್ಡಿಗಳ ನಿರ್ಮಾಣದಂತಹ ಶಾಶ್ವತ ಪರಿಹಾರದ ಯೋಜನೆ ರೂಪಿಸಬೇಕು, ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿಯವರಿಗೆ ಸಲಹೆ ನೀಡಿ ಸೂಕ್ತ ವರದಿ ಪಡೆದು ಜಂಟಿ ಕಾರ್ಯಯೋಜನೆ ತಯಾರಿಸಿ, ಕಾಡಾನೆಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಕಾರ್ಯಯೋಜನೆ ರೂಪಿಸಬೇಕು ಎಂದು ಸಂಸದ ಕೋಟ ಮನವಿ ಮಾಡಿದ್ದಾರೆ.