ವಾಸ ಪಟ್ಟಣದಲ್ಲಿ ಕೋತಿಗಳ ಮಾರಣ ಹೋಮ
KannadaprabhaNewsNetwork | Published : Oct 31 2023, 01:17 AM IST
ವಾಸ ಪಟ್ಟಣದಲ್ಲಿ ಕೋತಿಗಳ ಮಾರಣ ಹೋಮ
ಸಾರಾಂಶ
ಹಾರೋಹಳ್ಳಿ: ತೆಂಗಿನ ಫಸಲು ನಾಶ ಮಾಡುತ್ತವೆ ಎಂಬ ಕಾರಣಕ್ಕೆ ಏಳು ಕೋತಿಗಳನ್ನು ಕೊಂದು ಚೀಲದಲ್ಲಿ ಕಟ್ಟಿ ಬಿಸಾಡಿರುವ ಅಮಾನವೀಯ ಘಟನೆ ತಾಲೂಕಿನ ಯಲಚವಾಡಿ ಬಳಿಯ ವಾಸ ಪಟ್ಟಣದಲ್ಲಿ ನಡೆದಿದೆ. ಕೋತಿಗಳು ಸಾಮಾನ್ಯವಾಗಿ ತೆಂಗಿನ ಮರದಲ್ಲಿ ಎಳನೀರು, ಸೀಬೆಕಾಯಿ, ಕಡಲೆಕಾಯಿ ಇತ್ಯಾದಿ ಕೃಷಿ ಬೆಳೆಗಳ ಮೇಲು ದಾಳಿ ಮಾಡುತ್ತವೆ. ಇದೇ ಕಾರಣಕ್ಕೆ ಕೋತಿಗಳ ಉಪಟಳದಿಂದ ಬೇಸತ್ತ ಕಿಡಿಗೇಡಿಗಳು ಕೋತಿ ಮರಿಗಳನ್ನ ಸಾಯಿಸಿ ತಂದು ಹಾಕಿದ್ದಾರೆ.
ಹಾರೋಹಳ್ಳಿ: ತೆಂಗಿನ ಫಸಲು ನಾಶ ಮಾಡುತ್ತವೆ ಎಂಬ ಕಾರಣಕ್ಕೆ ಏಳು ಕೋತಿಗಳನ್ನು ಕೊಂದು ಚೀಲದಲ್ಲಿ ಕಟ್ಟಿ ಬಿಸಾಡಿರುವ ಅಮಾನವೀಯ ಘಟನೆ ತಾಲೂಕಿನ ಯಲಚವಾಡಿ ಬಳಿಯ ವಾಸ ಪಟ್ಟಣದಲ್ಲಿ ನಡೆದಿದೆ. ಕೋತಿಗಳು ಸಾಮಾನ್ಯವಾಗಿ ತೆಂಗಿನ ಮರದಲ್ಲಿ ಎಳನೀರು, ಸೀಬೆಕಾಯಿ, ಕಡಲೆಕಾಯಿ ಇತ್ಯಾದಿ ಕೃಷಿ ಬೆಳೆಗಳ ಮೇಲು ದಾಳಿ ಮಾಡುತ್ತವೆ. ಇದೇ ಕಾರಣಕ್ಕೆ ಕೋತಿಗಳ ಉಪಟಳದಿಂದ ಬೇಸತ್ತ ಕಿಡಿಗೇಡಿಗಳು ಕೋತಿ ಮರಿಗಳನ್ನ ಸಾಯಿಸಿ ತಂದು ಹಾಕಿದ್ದಾರೆ. ಒಂದು ಕೋತಿ ಮರಿ ಸೇರಿ ಒಟ್ಟು ಏಳು ಕೋತಿಗಳು ಸಾವನ್ನಪ್ಪಿದ್ದು ಕೋತಿಯ ಕುತ್ತಿಗೆ ಭಾಗದಲ್ಲಿ ರಕ್ತದ ಕಲೆ ಇರುವುದು ಕಂಡು ಬಂದಿದೆ. ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ. ಸ್ಥಳಕ್ಕೆ ಬಂದು ಏನಾಗಿದೆ ಎಂದು ಪರಿಶೀಲನೆ ಮಾಡುವ ಸೌಜನ್ಯವನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತೋರದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯ ಗ್ರಾಮಸ್ಥರು ಮೃತಪಟ್ಟಿರುವ ಏಳು ಕೋತಿಗಳನ್ನು ಪೂಜಿ ಸಲ್ಲಿಸಿ ರಸ್ತೆ ಪಕ್ಕದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಮಂಗಗಳು ವನ್ಯಜೀವಿ ರಕ್ಷಣೆ ಕಾಯ್ದೆ 1972ರ ಸಂರಕ್ಷಿತ ಕಾಯ್ದೆ ಅಡಿಯಲ್ಲಿದ್ದರೂ ಇದು ನಮ್ಮ ವ್ಯಾಪ್ತಿಗೆ ಬರೋದಿಲ್ಲ ಎಂದು ವನ್ಯಜೀವಿ ವಲಯ ಅರಣ್ಯ ಅಧಿಕಾರಿಗಳು ಮತ್ತು ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿಗಳು ಒಬ್ಬರ ಮೇಲೊಬ್ಬರು ಜವಾಬ್ದಾರಿ ಹಾಕಿದ್ದಾರೆ. ಹಾಗಾದರೆ ಕೋತಿಗಳ ಸಾವಿಗೆ ಕಾರಣರಾದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವವರು ಯಾರು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಉದ್ಭವಿಸಿದೆ. ಕೂಡಲೇ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಮಂಗಗಳ ಸಾವಿಗೆ ಕಾರಣರಾದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಾಣಿ ಪ್ರಿಯರು ಆಗ್ರಹಿಸಿದ್ದಾರೆ. 30ಕೆಆರ್ ಎಂಎನ್ 5.ಜೆಪಿಜಿ ಸಾವನ್ನಪ್ಪಿರುವ ಕೋತಿಗಳು.