ಸಾರಾಂಶ
ಕೆ.ಆರ್.ಪೇಟೆ: ಸಾಲಬಾಧೆಯಿಂದ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಹೊರವಲಯದ ಸಾಧುಗೋಪನಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ತಾಲೂಕಿನ ಮರಟೀಕೊಪ್ಪಲು ಗ್ರಾಮದ ನಾಗರಾಜೇಗೌಡರ ಪುತ್ರ ರೈತ ಮಂಜೇಗೌಡ(46) ಆತ್ಮಹತ್ಯೆ ಮಾಡಿಕೊಂಡವರು. ರೈತ ಮಂಜೇಗೌಡ ತಮ್ಮ ಜಮೀನು ಅಭಿವೃದ್ಧಿ ಮತ್ತು ಕೃಷಿ ಚಟುವಟಿಕೆಗಳಿಗಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಚಿನ್ನದ ಮೇಲೆ ಸಾಲ ಪಡೆದಿದ್ದರು. ಇದರೊಂದಿಗೆ ಕೆಲವು ವ್ಯಕ್ತಿಗಳ ಮೂಲಕ ಒಂದಷ್ಟು ಕೈಸಾಲ ಸೇರಿ ಸುಮಾರು ಐದು ಲಕ್ಷಕ್ಕೂ ಅಧಿಕ ಸಾಲದ ಬಾಧೆಯಿಂದ ಒತ್ತಡಕ್ಕೆ ಸಿಲುಕಿದ್ದರೆನ್ನಲಾಗಿದೆ. ಪತ್ನಿ ಶೃತಿಗೆ ನೆರೆಯ ಗ್ರಾಮಕ್ಕೆ ಹೋಗಿ ಬರುವುದಾಗಿ ತಿಳಿಸಿ, ಮನೆಯಿಂದ ಹೊರಗೆ ಹೋಗಿ ನಂತರ ಸಾಧುಗೋಪನಹಳ್ಳಿ ಅರಣ್ಯ ಪ್ರದೇಶದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ರೈತರಿಗೆ ಪತ್ನಿ ಶೃತಿ ಸೇರಿದಂತೆ ಇಬ್ಬರು ಪುತ್ರಿಯರಿದ್ದಾರೆ. ಘಟನೆ ಕುರಿತು ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.