ಸಾಲಗಾರರ ಕಾಟಕ್ಕೆ ಬೇಸತ್ತ ವ್ಯಕ್ತಿಯೊಬ್ಬ ಡೆತ್ನೋಟ್ ಬರೆದಿಟ್ಟು ನಿರ್ಮಾಣ ಹಂತದ ಕಟ್ಟಡದ 17ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಾಲಗಾರರ ಕಾಟಕ್ಕೆ ಬೇಸತ್ತ ವ್ಯಕ್ತಿಯೊಬ್ಬ ಡೆತ್ನೋಟ್ ಬರೆದಿಟ್ಟು ನಿರ್ಮಾಣ ಹಂತದ ಕಟ್ಟಡದ 17ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಸಂಪಿಗೆಹಳ್ಳಿ ನಿವಾಸಿ ವಿವೇಕಾನಂದ (45) ಆತ್ಮಹತ್ಯೆ ಮಾಡಿಕೊಂಡವರು. ಏ.22ರಂದು ಸಂಪಿಗೆಹಳ್ಳಿಯ ನಿರ್ಮಾಣ ಹಂತದ ಅಪಾರ್ಟ್ಮೆಂಟ್ನಲ್ಲಿ ಈ ದುರ್ಘಟನೆ ನಡೆದಿದೆ. ಮೃತನ ಪತ್ನಿ ಸಿಸಿಬಿ ವಿಚಾರಣೆ ಹಾಗೂ ಹೂಡಿಕೆದಾರರ ಒತ್ತಡದಿಂದಲೇ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ವಿವೇಕಾನಂದ ಇನ್ವಿಷನ್ ಬೆಂಗಳೂರು ಎಂಬ ಟ್ರೇಡಿಂಗ್ ಕಂಪನಿ ನಡೆಸುತ್ತಿದ್ದು, ಕಳೆದ ಕೆಲ ವರ್ಷಗಳಿಂದ ಪರಿಚಯಸ್ಥ ಸಾರ್ವಜನಿಕರಿಗೆ ಟ್ರೇಡಿಂಗ್ನಲ್ಲಿ ಹೂಡಿಕೆ ಮಾಡಿದರೆ, ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿ ಲಕ್ಷಾಂತರ ರು. ಹೂಡಿಕೆ ಮಾಡಿಸಿ, ತಿಂಗಳಿಗೆ ಶೇ.5-6 ರಷ್ಟು ಲಾಭಾಂಶ ನೀಡುತ್ತೇನೆ ಎಂದು ನಂಬಿಸಿದ್ದರು. ಆದರೆ, ಸರಿಯಾದ ಸಮಯಕ್ಕೆ ಹಣ ವಾಪಸ್ ಕೊಟ್ಟಿಲ್ಲ ಎನ್ನಲಾಗಿದೆ.ಹೀಗಾಗಿ ಇತ್ತೀಚೆಗೆ ಹಣ ವಾಪಸ್ ನೀಡುವಂತೆ ಹೂಡಿಕೆದಾರರು ಒತ್ತಡ ಹೇರುತ್ತಿದ್ದರು. ಜತೆಗೆ ಈತನ ವಿರುದ್ಧ ಪೊಲೀಸ್ ಠಾಣೆಯಲ್ಲೂ ಹಲವರು ದೂರು ನೀಡಿದ್ದರು. ಆದರೆ, ತನ್ನ ಖಾತೆಯಲ್ಲಿ ಕೋಟ್ಯಂತರ ರು. ಇದ್ದು, ಅದನ್ನು ಬಿಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಬೂಬು ಹೇಳುತ್ತಿದ್ದ. ಅಲ್ಲದೆ, ಹೂಡಿಕೆದಾರರ ಹಣ ಹಿಂದಿರುಗಿಸಲು ಕೋಟ್ಯಂತರ ರು. ಸಾಲ ಕೂಡ ಮಾಡಿಕೊಂಡಿದ್ದ ಎಂದು ಹೇಳಲಾಗಿದೆ.
ತನಿಖೆಗೆ ಬೆದರಿ ಆತ್ಮಹತ್ಯೆ!ಮತ್ತೊಂದೆಡೆ ಕೋಟ್ಯಂತರ ರು. ವಂಚನೆ ಆರೋಪ ಸಂಬಂಧ ಸಿಸಿಬಿ ತನಿಖೆ ಆರಂಭಿಸಿತ್ತು. ಅದರಂತೆ ಸಿಸಿಬಿ ಅಧಿಕಾರಿಗಳು ವಿವೇಕಾನಂದನ ವಿಚಾರಣೆ ನಡೆಸಿದ್ದರು. ಈ ವೇಳೆ ಪೊಲೀಸರು ಕಿರುಕುಳ ನೀಡಿದ್ದಾರೆ ಎಂದು ಆರೋಪ ಕೇಳಿ ಬಂದಿತ್ತು. ಇದೇ ಕಾರಣಕ್ಕೆ ವಿವೇಕಾನಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆತನ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ವಿವೇಕಾನಂದ ಬರೆದಿರುವ ಡೆತ್ನೋಟ್ನಲ್ಲಿ ಸಿಸಿಬಿ ಪೊಲೀಸರು ಹಾಗೂ ಹೂಡಿಕೆದಾರರ ಒತ್ತಡಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.