ಸಾರಾಂಶ
ಶಿರಸಿ: ಕಾಂಗ್ರೆಸ್ಗೆ ಸೇರ್ಪಡೆಯಾಗುತ್ತೇನೆ ಎಂದು ಅವರಿಗೆ ಅರ್ಜಿ ನೀಡಲು ಹೋಗಿಲ್ಲ. ಸೇರ್ಪಡೆಗೊಳ್ಳುತ್ತೇನೋ, ಇಲ್ಲವೋ ಎಂಬುದನ್ನು ನಾನು ಹೇಳುತ್ತೇನೆ. ನನ್ನ ಬೆಂಬಲಿಗರು ಕಾಂಗ್ರೆಸ್ ಸೇರುವ ನಿರ್ಣಯ ಶೀಘ್ರದಲ್ಲಿ ಆಗಲಿದೆ ಎಂದು ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.ಮಂಗಳವಾರ ನಗರದ ಬಿಡ್ಕಿಬೈಲ್ನ ಗದ್ದುಗೆಯಲ್ಲಿ ಮಾರಿಕಾಂಬಾ ದೇವಿಯ ದರ್ಶನ ಪಡೆದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುವ ಸಂದರ್ಭ ಬಂದಾಗ ಕಾಯ್ದುಕೊಳ್ಳಲೇಬೇಕು. ಯಾವ ರಾಜಕೀಯ ಪಕ್ಷಗಳನ್ನು ಯಾರಿಗೂ ಗುತ್ತಿಗೆ ಕೊಟ್ಟಿಲ್ಲ. ಎಲ್ಲ ರಾಜಕೀಯ ಪಕ್ಷಗಳಿಗೂ ಹೋಗುತ್ತಾರೆ. ಅಲ್ಲಿಯವರು ಇಲ್ಲಿಗೆ ಬರುತ್ತಾರೆ. ಕಾಂಗ್ರೆಸ್ನವರು ಬಿಜೆಪಿಗೆ ಬರುತ್ತಾರೆ. ಬಿಜೆಪಿಯವರು ಕಾಂಗ್ರೆಸ್ಗೆ ಬರುತ್ತಾರೆ. ಗುಜರಾತ್, ಹಿಮಾಚಲಪ್ರದೇಶದಲ್ಲಿ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ನಾನು ಒಂದು ಮತ ಹಾಕದಿದ್ದಕ್ಕೆ ಮಾತನಾಡುತ್ತಾರೆ, ಅವರು ೬ ವೋಟು ಹಾಕಿ ಸಸ್ಪೆಂಡ್ ಆಗಿದ್ದಾರೆ. ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ನೀತಿ ಎಂದರೆ ಕರ್ನಾಟಕಕ್ಕೂ ಒಂದೇ ಇರಬೇಕು. ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶಕ್ಕೂ ಒಂದೇ ಇರಬೇಕು ಎಂದರು.
ಬಿಜೆಪಿ ಲೋಕಸಭಾ ಅಭ್ಯರ್ಥಿ ಕಾಗೇರಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅಭ್ಯರ್ಥಿ ಆಗಿದ್ದಾರೆ, ಕೆಲಸ ಮಾಡುತ್ತಾರೆ. ನಾನು ಯಾರ ಪರ ಕೆಲಸ ಮಾಡಬೇಕು ಎಂಬ ನಿರ್ಣಯ ಮಾಡಿ ಹೇಳುತ್ತೇನೆ. ಯಾರ ಸಮಾಧಾನ, ಅಸಮಾಧಾನ ಎಂದು ಹೈಕಮಾಂಡ್ ಕೇಳುವುದಿಲ್ಲ. ಅವರ ಸಮಾಧಾನ ಹೇಗಿದೆಯೋ ಹಾಗೆ ನಿರ್ಣಯ ಮಾಡುತ್ತಾರೆ. ನನಗೆ ಸಮಾಧಾನ ಆಗಿಲ್ಲ ಎಂದರೆ ಅವರು ಅಭ್ಯರ್ಥಿ ಬದಲಿಸುತ್ತಾರಾ? ಅವರ ಸಮಾಧಾನಕ್ಕೆ ಮಾಡಿಕೊಳ್ಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.