ಸೇವಾಲಾಲ್‌ ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರ

| Published : Feb 15 2024, 01:31 AM IST

ಸಾರಾಂಶ

ಬಂಜಾರ ಸಮುದಾಯದ ಮುಖಂಡರ ಕೋರಿಕೆಯಂತೆ ಫೆ.೧೫ರ ಬದಲು ಸ್ಥಳೀಯ ಶಾಸಕರಾದ ಬಸವರಾಜ ರಾಯರಡ್ಡಿ ಜತೆ ಚರ್ಚಿಸಿ ಅವರು ಸೂಚಿಸುವ ದಿನಾಂಕದಂದು ನಮ್ಮ ಸಮಾಜ ಬಾಂಧವರ ಜತೆಗೂಡಿ ತಾಲೂಕು ಮಟ್ಟದ ಸೇವಾಲಾಲರ ಜಯಂತಿಯನ್ನು ಅದ್ಧೂರಿಯಿಂದ ಪಟ್ಟಣದಲ್ಲಿ ನಡೆಸಲಾಗುವುದು

ಯಲಬುರ್ಗಾ: ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಫೆ. ೧೫ರಂದು ಸೇವಾಲಾಲ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಹಸೀಲ್ದಾರ್ ಬಸವರಾಜ ತೆನ್ನೆಳ್ಳಿ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಸಂತ ಸೇವಾಲಾಲ ಜಯಂತಿ ನಿಮಿತ್ತ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದೇ ಫೆ.೧೫ರಂದು ಎಲ್ಲ ಶಾಲಾ, ಕಾಲೇಜು, ಅಂಗನವಾಡಿ ಕೇಂದ್ರಗಳಲ್ಲಿ ಹಾಗೂ ವಿವಿಧ ಇಲಾಖೆ ಕಚೇರಿಗಳಲ್ಲಿ ಕಡ್ಡಾಯವಾಗಿ ಭಾವಚಿತ್ರಯೊಂದಿಗೆ ಜಯಂತಿ ಆಚರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಆಲ್ ಇಂಡಿಯಾ ಬಂಜಾರ ಸೇವಾ ಸಂಘ ತಾಲೂಕಾಧ್ಯಕ್ಷ ಸೀನಪ್ಪ ನಾಯಕ ಹಾಗೂ ಗೋರಸೇನಾ ತಾಲೂಕಾಧ್ಯಕ್ಷ ಶಿವಮೂರ್ತಿ ರಾಠೋಡ ಮಾತನಾಡಿ, ಬಂಜಾರ ಸಮುದಾಯದ ಮುಖಂಡರ ಕೋರಿಕೆಯಂತೆ ಫೆ.೧೫ರ ಬದಲು ಸ್ಥಳೀಯ ಶಾಸಕರಾದ ಬಸವರಾಜ ರಾಯರಡ್ಡಿ ಜತೆ ಚರ್ಚಿಸಿ ಅವರು ಸೂಚಿಸುವ ದಿನಾಂಕದಂದು ನಮ್ಮ ಸಮಾಜ ಬಾಂಧವರ ಜತೆಗೂಡಿ ತಾಲೂಕು ಮಟ್ಟದ ಸೇವಾಲಾಲರ ಜಯಂತಿಯನ್ನು ಅದ್ಧೂರಿಯಿಂದ ಪಟ್ಟಣದಲ್ಲಿ ನಡೆಸಲಾಗುವುದು ಎಂದು ಹೇಳಿದರು.

ತಾಪಂ ಇಒ ಸಂತೋಷ ಪಾಟೀಲ್ ಬಿರಾದಾರ, ಗ್ರೇಡ್-೨ ತಹಸೀಲ್ದಾರ್ ನಾಗಪ್ಪ ಸಜ್ಜನ್, ಸಿಡಿಪಿಒ ಬಿ.ಎಂ. ಮಾಳೆಕೊಪ್ಪ, ಬಂಜಾರ ಸಮುದಾಯದ ಮುಖಂಡರಾದ ಅಚ್ಚಪ್ಪ ನಾಯಕ, ಲೋಕಪ್ಪ ನಾಯಕ, ಪರಸಪ್ಪ ನಾಯಕ, ದೇವಪ್ಪ ಪೂಜಾರ್, ಚನ್ನಪ್ಪ ಜಾಧವ, ಶೇಖರಪ್ಪ ಕೋಳಿಹಾಳ, ಇಂದ್ರಪ್ಪ ಕಾರಬಾರ, ಶಾಂತಪ್ಪ ಪ್ರಜಾರ, ರಾಮಪ್ಪ ರಾಠೋಡ, ರಮೇಶ ನಾಯಕ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಇದ್ದರು.