ಧಾರವಾಡ ಪ್ರತ್ಯೇಕ ಪಾಲಿಕೆಗೆ ಅಡ್ಡಿಪಡಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಶಾಸಕ ಅರವಿಂದ ಬೆಲ್ಲದ ಮನೆ ಎದುರು ಧರಣಿ ನಡೆಸಿ ಒತ್ತಡ ಹೇರುವುದು, ಧಾರವಾಡ ಪ್ರತ್ಯೇಕ ಪಾಲಿಕೆ ಏಕೆ? ಎಂಬ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ಗೆ ಮನವರಿಕೆ ಮಾಡಿ, ಸರ್ಕಾರದ ಮಟ್ಟದಲ್ಲಿ ಈ ಪ್ರಸ್ತಾವನೆಗೆ ವೇಗ ನೀಡಲು ಯತ್ನಿಸಲು ತೀರ್ಮಾನಿಸಲಾಯಿತು.
ಧಾರವಾಡ:
ಪ್ರತ್ಯೇಕ ಪಾಲಿಕೆ ವಿಚಾರವಾಗಿ ರಾಜ್ಯಪಾಲರ ಕಚೇರಿಯಿಂದ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಧಾರವಾಡದ ಸ್ವಾಭಿಮಾನಿ ಹೋರಾಟಗಾರರು ಹೋರಾಟವನ್ನು ತೀವ್ರಗೊಳಿಸಲು ಸೋಮವಾರ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.ಇತ್ತೀಚೆಗೆ ವಿದ್ಯಾವರ್ಧಕ ಸಂಘದಲ್ಲಿ ನಡೆದ ಚಿಂತನ-ಮಂಥನದಲ್ಲಿ ಮೂರು ದಿನ ಗಡುವು ನೀಡಿ ರಾಜ್ಯಪಾಲರ ಕಚೇರಿಯಿಂದ ಸ್ಪಂದನೆ ಬರದೇ ಇದ್ದಲ್ಲಿ ಮುಂದಿನ ಹೋರಾಟ ಮಾಡುವುದಾಗಿ ಹೇಳಿದ್ದರು. ಅಂತೆಯೇ ಸೋಮವಾರ ನಡೆದ ಸಭೆಯಲ್ಲಿ, ಮಹಾನಗರ ಪಾಲಿಕೆ ಪ್ರತ್ಯೇಕತೆ ಬೇಡಿಕೆ ಬಲವಾಗಿ ಒತ್ತಾಯಿಸಲು ಮೇ 15ರಿಂದ 30ರ ವರೆಗೆ ಧಾರವಾಡ ಪಾಲಿಕೆ ಕಚೇರಿ ಮುಂಭಾಗ ನಿರಂತರ ಧರಣಿ ಸತ್ಯಾಗ್ರಹ ನಡೆಸಲು ನಿರ್ಣಯಿಸಲಾಯಿತು.
ಬೆಲ್ಲದ-ಜೋಶಿಗೆ ಒತ್ತಾಯ:ಧಾರವಾಡ ಪ್ರತ್ಯೇಕ ಪಾಲಿಕೆಗೆ ಅಡ್ಡಿಪಡಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಶಾಸಕ ಅರವಿಂದ ಬೆಲ್ಲದ ಮನೆ ಎದುರು ಧರಣಿ ನಡೆಸಿ ಒತ್ತಡ ಹೇರುವುದು, ಧಾರವಾಡ ಪ್ರತ್ಯೇಕ ಪಾಲಿಕೆ ಏಕೆ? ಎಂಬ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ಗೆ ಮನವರಿಕೆ ಮಾಡಿ, ಸರ್ಕಾರದ ಮಟ್ಟದಲ್ಲಿ ಈ ಪ್ರಸ್ತಾವನೆಗೆ ವೇಗ ನೀಡಲು ಯತ್ನಿಸಲು ತೀರ್ಮಾನಿಸಲಾಯಿತು. ಅಲ್ಲದೇ, ಈ ಹೋರಾಟ ಕೇವಲ ನಾಗರಿಕರ ಹೋರಾಟವಲ್ಲ, ರಾಜಕೀಯವಾಗಿಯೂ ಬಲಪಡಿಸಲು ನಿರ್ಧರಿಸಿದೆ. ಪಾಲಿಕೆಯ ಬಿಜೆಪಿ ಸದಸ್ಯರಿಗೂ ಹೋರಾಟದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಾಜಿ ಸಭಾಪತಿ ಡಾ. ವೀರಣ್ಣ ಮತ್ತಿಕಟ್ಟಿ, ಗುರುರಾಜ ಹುಣಸಿಮರದ, ಸಿ.ಎಸ್. ನೇಗಿನಹಾಳ, ಮನೋಜ ಪಾಟೀಲ, ವೆಂಕಟೇಶ ಮಾಚಕನೂರ, ವಿಠ್ಠಲ ಕಮ್ಮಾರ, ಗೌರಮ್ಮ ಬಲೋಗಿ, ಕವಿತಾ ಕಬ್ಬೇರ ಮತ್ತು ಈಶ್ವರ ಶಿವಳ್ಳಿ ಸೇರಿದಂತೆ 50ಕ್ಕೂ ಹೆಚ್ಚು ಮುಖಂಡರು ಇದ್ದರು. ಧಾರವಾಡ ಬಂದ್ ಎಚ್ಚರಿಕೆ..ಒಂದು ವೇಳೆ ನಿಗದಿತ ಧರಣಿ ಸತ್ಯಾಗ್ರಹದ ನಂತರವೂ ಸರ್ಕಾರ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ಸಂಪೂರ್ಣ ''''''''ಧಾರವಾಡ ಬಂದ್'''''''' ಮಾಡುವ ಮೂಲಕ ಕಠಿಣ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಈ ಹೋರಾಟಗಾರರು ಎಚ್ಚರಿಸಿದರು.