ಸಾರಾಂಶ
ಯಲ್ಲಾಪುರದಲ್ಲಿ ಕಿಸಾನ್ ಸಂಘದ ಸದಸ್ಯತ್ವ ಅಭಿಯಾನ ಹಾಗೂ ಉತ್ತರ ಕನ್ನಡ ಜಿಲ್ಲಾ ಘಟಕದ ಯೋಜನಾ ಬೈಠಕ್ ನಡೆಯಿತು. ರೈತರ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
ಯಲ್ಲಾಪುರ: ಭಾರತೀಯ ಕಿಸಾನ್ ಸಂಘದ ಉತ್ತರ ಕನ್ನಡ ಜಿಲ್ಲಾ ಘಟಕದ ಯೋಜನಾ ಬೈಠಕ್ ಹಾಗೂ ಸದಸ್ಯತಾ ಅಭಿಯಾನದ ಸಭೆ ಜಿಲ್ಲಾಧ್ಯಕ್ಷ ಶಿವರಾಮ ಗಾಂವ್ಕಾರ್ ಕನಕನಹಳ್ಳಿ ಅವರ ಅಧ್ಯಕ್ಷತೆಯಲ್ಲಿ ಕಲ್ಲೇಶ್ವರದ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಸದಸ್ಯತಾ ಅಭಿಯಾನಕ್ಕೆ ಚಾಲನೆ ನೀಡಿದ ಉತ್ತರ ಪ್ರಾಂತ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ ಮಾರ್ಗದರ್ಶನ ಮಾಡಿ, ಕಿಸಾನ್ ಚಟುವಟಿಕೆ ಬಲಗೊಳಿಸಲಾಗುತ್ತಿದೆ. ಸಾರ್ವತ್ರಿಕವಾದ ಸಮಸ್ಯೆಗಳಿಗೆ ಸಂಘಟನೆ ಮೂಲಕ ಸರ್ಕಾರದ ಗಮನ ಸೆಳೆದು ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುತ್ತಿದ್ದು, ಕಿಸಾನ್ ಸಂಘಟನಾತ್ಮಕವಾಗಿ ಬಲಗೊಳಿಸಲು ಜಿಲ್ಲೆ, ತಾಲೂಕು ಗ್ರಾಮಗಳಲ್ಲಿ ಸದಸ್ಯತ್ವವನ್ನು ಹೆಚ್ಚೆಚ್ಚು ಮಾಡಬೇಕು. ಗ್ರಾಮ ಸಮಿತಿಗಳನ್ನು ಮಾಡಬೇಕು. ಜಿಲ್ಲೆಯಲ್ಲಿ ಹತ್ತು ಸಾವಿರಕ್ಕೂ ಅಧಿಕ ಸದಸ್ಯತ್ವ ಮಾಡುವ ಮೂಲಕ ಜಿಲ್ಲೆಯಲ್ಲಿ ಸಂಘಟನೆ ಬಲಗೊಳಿಸಿ ಎಂದರು.ಉತ್ತರ ಪ್ರಾಂತ ಅಧ್ಯಕ್ಷ ವಿವೇಕ ಮೋರೆ ಮಾತನಾಡಿ, ಸಂಘಟನೆಗೆ ಶ್ರಮ ಬೇಕು. ಸಮಯ ಕೊಡಬೇಕು. ರೈತರ ಜ್ವಲಂತ ಸಮಸ್ಯೆಗಳಿಗೆ ಬೆಳಕು ಚೆಲ್ಲಿ ನ್ಯಾಯ ಒದಗಿಸುವಲ್ಲಿ ಕಿಸಾನ್ ಸಂಘಟನೆ ಶಿಸ್ತುಬದ್ಧವಾಗಿ ಕೆಲಸ ಮಾಡುತ್ತಿದೆ. ದೇಶಮಟ್ಟದಲ್ಲಿ ಗುರುತಿಸಿಕೊಂಡ ಕಿಸಾನ್ ಸಂಘ ಗ್ರಾಮಮಟ್ಟದಲ್ಲಿ ಪ್ರತಿ ಮನೆಯಲ್ಲಿ ಸದಸ್ಯರನ್ನು ಹೊಂದಬೇಕು ಎಂದರು. ಜಿಲ್ಲಾ ಉಪಾಧ್ಯಕ್ಷ ನರಸಿಂಹ ಸಾತೊಡ್ಡಿ ಮಾತನಾಡಿ, ರೈತರಿಗೆ ಮುಂಬರುವ ದಿನಗಳು ಕಷ್ಟದ ದಿನಗಳಾಗಿದ್ದು, ರೈತರ ವಿಷಯದಲ್ಲಿ ಸರ್ಕಾರ ಯಾವುದೇ ತಪ್ಪು ನಿರ್ಧಾರ ತೆಗೆದುಕೊಂಡರೂ ಪ್ರತಿಭಟಿಸುತ್ತೇವೆ. ಕೆಲವು ತಾಲೂಕುಗಳಲ್ಲಿ ಜೆಸಿಬಿ ಸಂಘಟನೆ ಮಾಡಿಕೊಂಡಿದ್ದು, ಅವರು ಹೊರಗಡೆಯಿಂದ ಬರುವ ಜೆಸಿಬಿಯವರಿಗೆ ತೊಂದರೆ ನೀಡುವ ಮೂಲಕ ರೈತರಿಗೂ ಹಾನಿಯಾಗುವುದಕ್ಕೆ ಕಾರಣವಾಗಿದ್ದು, ಈ ಬಗ್ಗೆ ವ್ಯಾಪಕ ದೂರುಗಳು ಬಂದಿವೆ. ಈ ಬಗ್ಗೆ ತಹಸೀಲ್ದಾರ್ಗಳು ಗಮನ ಹರಿಸಬೇಕು ಎಂದರು.ಜಿಲ್ಲಾಧ್ಯಕ್ಷ ಶಿವರಾಮ ಗಾಂವ್ಕಾರ್ ಮಾತನಾಡಿ, ಜಿಲ್ಲೆಯ ಸಮಸ್ಯೆಗಳ ಪಟ್ಟಿ ಮಾಡಿ ಜಿಲ್ಲಾಧಿಕಾರಿ ಗಮನಕ್ಕೆ ತರೋಣ. ಕುಮಟಾದ ಸಿಹಿ ಈರುಳ್ಳಿ ಪ್ರದೇಶದ ಭೂಕಬಳಿಕೆ, ಜೆಸಿಬಿ ಸಂಘಗಳ ಕಿರುಕುಳ, ಅರಣ್ಯ ಇಲಾಖೆಯವರ ಅವೈಜ್ಞಾನಿಕ ತಂತಿಬೇಲಿ ನಿರ್ಮಾಣ, ಕೆರೆ, ಹಳ್ಳಗಳ ಅತಿಕ್ರಮಣ ಸೇರಿದಂತೆ ಸಮಸ್ಯೆಗಳ ಬಗ್ಗೆ ಚರ್ಚಿಸೋಣ ಎಂದರು.
ಜಿಲ್ಲಾ ಸಮಿತಿಯ ಸದಸ್ಯ ನಾರಾಯಣ ಭಟ್ ಭಟ್ಕಳ, ಗಣಪತಿ ಪಟಗಾರ್ ಕುಮಟಾ, ಯಲ್ಲಾಪುರ ತಾಲೂಲಾಧ್ಯಕ್ಷ ವಿಘ್ನೇಶ್ವರ ಭಟ್ಟ ಮಲವಳ್ಳಿ, ಜಿಲ್ಲಾ ಕೋಶಾಧ್ಯಕ್ಷ ಗೋಪಾಲಕೃಷ್ಣ ರಾ. ಬಾಳೆಗದ್ದೆ, ಜಿಲ್ಲಾ ಸಮಿತಿಯ ಮಾಬ್ಲೇಶ್ವರ ಕೊಡ್ಲಗದ್ದೆ, ಧಾರವಾಡ ಜಿಲ್ಲಾ ಕಾರ್ಯದರ್ಶಿ ಗುರು, ಸ್ಥಳೀಯ ಯುವಕ ಸಂಘದ ಅಧ್ಯಕ್ಷ ಮಂಜುನಾಥ ವಿ. ಕಲ್ಲೇಶ್ವರ ಉಪಸ್ಥಿತರಿದ್ದರು. ಅಂಕೋಲಾ ತಾಲೂಕಾಧ್ಯಕ್ಷ ರಾಘವೇಂದ್ರ ಗಾಂವ್ಕಾರ್ ಸ್ವಾಗತಿಸಿದರು.ಪ್ರಾಂತ ಕಾರ್ಯದರ್ಶಿ ಬಾ.ನಾ. ಮಾಧವ ಹೆಗಡೆ ಪ್ರಾಸ್ತಾವಿಕಗೈದು ನಿರ್ವಹಿಸಿದರು.
ನಿರ್ಣಯ: ರೈತರ ಸಪ್ಪಿನ ಬೆಟ್ಟವನ್ನು ಬ ಕರಾಬ ಗೊಳಿಸುವ ಕ್ರಮವನ್ನು ಕೈಬಿಡುವಂತೆ ಸರ್ಕಾರವನ್ನು ಒತ್ತಾಯಿಸಲು ಜಿಲ್ಲಾಧಿಕಾರಿ ಅವರಿಗೆ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಕುಮಟಾ ಹಂದಿಗೋಣದಲ್ಲಿ ರೆಸಾರ್ಟ್ ಸಲುವಾಗಿ ರಾಜಕಾಲುವೆ ಮುಚ್ಚಿ ರೈತರ ಜಮೀನಿಗೆ ಹಾನಿ ಮಾಡಿದ ವ್ಯಕ್ತಿಯ ವಿರುದ್ಧ ಹೋರಾಟ ಮುಂದುವರಿಸಲು ಮತ್ತು ಸಿಹಿ ಈರುಳ್ಳಿ ಬೆಳೆಗೆ ಧಕ್ಕೆಪಡಿಸಿದ ಬಗ್ಗೆ ರೈತರಿಗೆ ನ್ಯಾಯ ಒದಗಿಸಲು ನಿರ್ಧರಿಸಲಾಯಿತು.ಜೆಸಿಬಿ ಸಂಘಗಳನ್ನು ಮಾಡಿಕೊಂಡು ಹೊರಗಿನವರಿಗೆ ಕೆಲಸಕ್ಕೆ ತೊಂದರೆ ಕೊಟ್ಟು ರೈತರಿಗಾಗುವ ಅನ್ಯಾಯವನ್ನು ತಡೆಯುವ ಬಗ್ಗೆ ಆಯಾ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿ ಕ್ರಮ ಜರುಗಿಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.