ಸಾರಾಂಶ
- ವಿಪ ಮುಖ್ಯ ಸಚೇತಕ ರವಿಕುಮಾರ ನೇತೃತ್ವದಲ್ಲಿ ಬಿಜೆಪಿ ನಿಯೋಗದಿಂದ ಬೆಂಗಳೂರಲ್ಲಿ ನಗರಾಭಿವೃದ್ಧಿ ಸಚಿವರಿಗೆ ಮನವಿ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯದಲ್ಲಿ ಕಂದಾಯ ನಿವೇಶನಗಳನ್ನು ನಮೂನೆ-2ರಲ್ಲಿ ಅಧಿಕೃತವೆಂದು ನಮೂದಿಸಿ, ಸಕ್ರಮಗೊಳಿಸುವುದು, ಬ್ಯಾಂಕ್ ಸಾಲ ಸಿಗುವಂತೆ ಅವಕಾಶ ಮಾಡಿಕೊಡಲು ಪರಿಷ್ಕೃತ ಆದೇಶ ಹೊರಡಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ವಿಧಾನ ಪರಿಷತ್ತು ಮುಖ್ಯ ಸಚೇತಕ ಎನ್.ರವಿಕುಮಾರ ನೇತೃತ್ವದಲ್ಲಿ ದಾವಣಗೆರೆ ಪಾಲಿಕೆ ಮಾಜಿ ವಿಪಕ್ಷ ನಾಯಕ, ಮಾಜಿ ಮೇಯರ್, ಮಾಜಿ ಸದಸ್ಯರು ನಗರಾಭಿವೃದ್ಧಿ ಸಚಿವರಿಗೆ ಮಂಗಳವಾರ ಮನವಿ ಅರ್ಪಿಸಲಾಯಿತು.ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರನ್ನು ಭೇಟಿ ಮಾಡಿದ್ದ ದಾವಣಗೆರೆ ಜಿಲ್ಲಾ ಬಿಜೆಪಿ ಯುವ ಮುಖಂಡ, ಪಾಲಿಕೆ ವಿಪಕ್ಷದ ಮಾಜಿ ನಾಯಕ ಕೆ.ಪ್ರಸನ್ನಕುಮಾರ, ಮಾಜಿ ಮೇಯರ್ ಎಸ್.ಟಿ.ವೀರೇಶ, ಮಾಜಿ ಸದಸ್ಯರಾದ ಆರ್.ಶಿವಾನಂದ ಹಾಗೂ ಕೆ.ಎಂ.ವೀರೇಶ ಇತರರ ನಿಯೋಗ ಸಚಿವರನ್ನು ಭೇಟಿಯಾಯಿತು.
ಬಿಜೆಪಿ ಜಿಲ್ಲಾ ಯುವ ಮುಖಂಡರು ಇದೇ ವೇಳೆ ಮಾತನಾಡಿ, ಕಂದಾಯ ನಿವೇಶನಗಳನ್ನು ನಮೂನೆ-2ರಲ್ಲಿ ಅಧಿಕೃತವೆಂದು ನಮೂದಿಸಲು ಸಕ್ರಮಗೊಳಿಸಬೇಕು. ಬಿ ಖಾತಾ ನಿವೇಶನಗಳಿಗೆ ಕಟ್ಟಡ ಪರವಾನಿಗೆಯನ್ನು ನೀಡಬೇಕು. ನೀರಿನ ಕಂದಾಯ ಬಾಕಿ ಇದ್ದವರಿಗೂ ಬಿ ಖಾತೆ ನೀಡಬೇಕು. ಬ್ಯಾಂಕ್ ಸಾಲ ನೀಡುವುದಕ್ಕೆ ಅವಕಾಶ ಮಾಡಿಕೊಡಲು ಪರಿಷ್ಕೃತ ಆದೇಶವನ್ನು ಸರ್ಕಾರದಿಂದ ಹೊರಡಿಸಬೇಕು. ಈ ಮೂಲಕ ಕಂದಾಯ ನಿವೇಶನದಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.ದುಪ್ಪಟ್ಟು ತೆರಿಗೆ ಸಲ್ಲದು:
ರೆವಿನ್ಯೂ ನಿವೇಶನಗಳನ್ನು ಬಿ ಖಾತಾ ರಿಜಿಸ್ಟರ್ನಲ್ಲಿ ನಮೂದಿಸಿ, ನಮೂನೆ-2 ಎ ಅಥವಾ ನಮೂನೆ-3 ಎ ನೀಡುತ್ತಿದ್ದು, ಇದರಲ್ಲಿ ಸ್ವತ್ತಿನ ವರ್ಗೀಕರಣ ಕಾಲಂನಲ್ಲಿ ಅನಧಿಕೃತ ಎಂಬುದಾಗಿ ನಮೂದಿಸಲಾಗುತ್ತಿದೆ. ಇದರಿಂದ ಕಂದಾಯ ನಿವೇಶನದಲ್ಲಿರುವ ಆಸ್ತಿಗಳಿಗೆ ಕಟ್ಟಡ ಪರವಾನಿಯಾಗಲೀ, ಬ್ಯಾಂಕ್ಗಳಿಂದ ಸಾಲವಾಗಲೀ ಸಿಗುವುದಿಲ್ಲ. ಈಗ ದುಪ್ಪಟ್ಟು ತೆರಿಗೆ ಪಾವತಿಸಿ, ಬಿ ಖಾತಾ ನಮೂನೆ-2 ಎ ಅಥವಾ ನಮೂನೆ-3 ಎ ಪಡೆದ ಕಂದಾಯ ನಿವೇಶನದಾರರಿಗೆ ಕಟ್ಟಡ ಪರವಾನಗಿ ನೀಡುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿರುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.ಸರ್ಕಾರದ ಆದೇಶದಲ್ಲಿ ಬಡವರಿಗೆ ನೆರವಾಗುವ ಬದಲಿಗೆ, ಕಂದಾಯ ನಿವೇಶನಗಳನ್ನು ಅನಧಿಕೃತ ಆಸ್ತಿಗಳೆಂದು ಪ್ರತ್ಯೇಕ ಬಿ ರಿಜಿಸ್ಟರ್ನಲ್ಲಿ ನಮೂದಿಸಿ, ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಮಾತ್ರ ತಿದ್ದುಪಡಿ ತಂದಿದ್ದು, ಅನಧಿಕೃತ ಆಸ್ತಿಯೆಂದು ಇ-ಖಾತಾ ನೀಡಿ, ಆಸ್ತಿ ಸಕ್ರಮಗೊಳಿಸದೇ ಇರುವುದು ಸರಿಯಲ್ಲ. ತಕ್ಷಣವೇ ಸರ್ಕಾರ ನಮೂನೆ-2 ಎ ಮತ್ತು ನಮೂನೆ-3 ಎ ನಲ್ಲಿ ಆಸ್ತಿ ವರ್ಗೀಕರಣ ಕಾಲಂನಲ್ಲಿ ಅಧಿಕೃತವೆಂದೇ ನಮೂದಿಸಬೇಕು. ನಿವೇಶನಗಳಿಗೆ ಕಟ್ಟಡ ಪರವಾನಿಗೆ ನೀಡಲು ಅಗತ್ಯ ತಿದ್ದುಪಡಿ ತರಬೇಕು. ಮನೆ ಕಟ್ಟಿಕೊಳ್ಳಲು ಕಂದಾಯ ನಿವೇಶನಗಳನ್ನು ಅಧಿಕೃತವೆಂದು ಘೋಷಿಸಿ, ಬ್ಯಾಂಕ್ ಸಾಲ ನೀಡಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಬಡ, ಮಧ್ಯಮ ವರ್ಗದ ಜನರಿಗೆ ನೆರವಾಗುವ ದೃಷ್ಟಿಯಿಂದ ಸರ್ಕಾರ ನಮ್ಮ ಮನವಿ ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತಂದು, ಕಂದಾಯ ನಿವೇಶನಗಳನ್ನು ನಮೂನೆ-2ರಲ್ಲಿ ಅಧಿಕೃತವೆಂದು ನಮೂದಿಸಿ, ಸಕ್ರಮಗೊಳಿಸಲು ಅಗತ್ಯ ಕ್ರಮ ಕೈಗೊಂಡು, ಪರಿಷ್ಕೃತ ಆದೇಶ ಹೊರಡಿಸಬೇಕು ಎಂದು ಸಚಿವರಿಗೆ ಮನವಿ ಮಾಡಲಾಯಿತು.ಈ ಸಂದರ್ಭ ದಾವಣಗೆರೆ ಜಿಲ್ಲಾ ಬಿಜೆಪಿ ಯುವ ಮುಖಂಡರಾದ ಕೆ.ಪ್ರಸನ್ನಕುಮಾರ, ಎಸ್.ಟಿ.ವೀರೇಶ, ಆರ್.ಶಿವಾನಂದ, ಕೆ.ಎಂ.ವೀರೇಶ ಇತರರು ಮನವಿ ಮಾಡಿದರು.
- - --18ಕೆಡಿವಿಜಿ1, 2, 3.ಜೆಪಿಜಿ:
ರಾಜ್ಯದಲ್ಲಿ ಕಂದಾಯ ನಿವೇಶನಗಳನ್ನು ನಮೂನೆ-2ರಲ್ಲಿ ಅಧಿಕೃತವೆಂದು ನಮೂದಿಸಿ, ಸಕ್ರಮಗೊಳಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಮಂಗಳವಾರ ನಗರಾಭಿವೃದ್ಧಿ ಸಚಿವರಿಗೆ ವಿಪ ಮುಖ್ಯ ಸಚೇತಕ ಎನ್.ರವಿಕುಮಾರ ನೇತೃತ್ವದಲ್ಲಿ ದಾವಣಗೆರೆ ಬಿಜೆಪಿ ಯುವ ಮುಖಂಡರ ನಿಯೋಗದಿಂದ ಮನವಿ ಸಲ್ಲಿಸಲಾಯಿತು.