ಸಾರಾಂಶ
ದೀವರು ಜಾತಿ ಸಮೀಕ್ಷೆಯ ಸಂದರ್ಭದಲ್ಲಿ ದೀವರು ಎಂದು ಮುಖ್ಯ ಜಾತಿಯನ್ನಾಗಿ ನಮೂದಿಸಬೇಕು ಎಂದು ದೀವರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ನಾಗರಾಜ್ ಹೇಳಿದರು.
ಶಿವಮೊಗ್ಗ: ದೀವರು ಜಾತಿ ಸಮೀಕ್ಷೆಯ ಸಂದರ್ಭದಲ್ಲಿ ದೀವರು ಎಂದು ಮುಖ್ಯ ಜಾತಿಯನ್ನಾಗಿ ನಮೂದಿಸಬೇಕು ಎಂದು ದೀವರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ನಾಗರಾಜ್ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮೂಲತಃ ದೀವರು ರಾಜ್ಯದಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ಆದರೆ ಬಹುತೇಕ ದೀವರು ಇತಿಹಾಸದ ಅರಿವಿನ ಕೊರತೆಯಿಂದ ಅಥವಾ ಕೀಳರಿಮೆಯಿಂದ ತಮ್ಮ ಜಾತಿಯನ್ನು ಈಡಿಗ ಎಂದು ನಮೂದಿಸಿಕೊಳ್ಳುತ್ತಿದ್ದಾರೆ. ಇದರಿಂದ ದೀವರು ಎಂಬ ಒಂದು ಪರಂಪರೆ ಕಣ್ಮರೆಯಾಗುವ ಸ್ಥಿತಿಗೆ ಬಂದಿದೆ. ಬಹುತೇಕ ದೀವರು ಸಾಂದರ್ಭಿಕವಾಗಿ ಈಡಿಗ ಎಂದು ಮುಖ್ಯ ಜಾತಿಯನ್ನಾಗಿ ಗುರುತಿಸಿಕೊಂಡಿದ್ದಾರೆ ಎಂದರು.ಹಿಂದುಳಿದ ವರ್ಗಗಳ ಆಯೋಗ ತಿಳಿಸಿರುವ 1400 ಜಾತಿಗಳ ಪಟ್ಟಿಯಲ್ಲಿ ದೀವರು ಎಂಬ ಜಾತಿಯೂ ಇದ್ದು, ಜಾತಿ ಗಣತಿ ಸಂದರ್ಭದಲ್ಲಿ ಮೂಲ ದೀವರು ಜಾತಿಯಿಂದ ಈಡಿಗ ಜಾತಿಗೆ ಜಾತ್ಯಾಂತರ ಹೊಂದಿದವರು ಹಾಗೂ ಈಡಿಗ ಜಾತಿಯ ಅಡಿಯಲ್ಲಿ ದೀವರು ಎಂದು ಉಪ ಜಾತಿಯಾಗಿ ಗುರುತಿಸಿಕೊಂಡವರು ತಮ್ಮ ಮೂಲ ಜಾತಿಯಾದ ದೀವರು ಜಾತಿಯನ್ನು ದೀವರು ಎಂದೇ ನಮೂದಿಸಬೇಕು ಎಂದು ದೀವರ ಸಮುದಾಯಕ್ಕೆ ಮನವಿ ಮಾಡಿದರು.
ಮೂಲತಃ ದೀವರ ಜಾತಿಯವರಾಗಿ ಈಗ ಈಡಿಗ ಜಾತಿಯಲ್ಲಿ ಗುರುತಿಸಿಕೊಂಡು ಸರ್ಕಾರಿ ದಾಖಲೆಗಳಲ್ಲಿ ಈಡಿಗ ಎಂದು ನಮೂದಾಗಿರುವ ದೀವರ ಸಮುದಾಯದವರಿಗೆ ಈಡಿಗ ಜಾತಿಯಿಂದ ಪುನಃ ದೀವರು ಜಾತಿಗೆ ಜಾತ್ಯಾಂತರ ಹೊಂದಲು ಸರ್ಕಾರಿ ದಾಖಲೆಗಳಲ್ಲಿ ಈಡಿಗ ಜಾತಿಗೆ ಬದಲಾಗಿ ದೀವರು ಜಾತಿಯನ್ನು ನಮೂದಿಸಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಗೋಷ್ಠಿಯಲ್ಲಿ ಪ್ರಮುಖರಾದ ಕೆ.ಎಸ್. ಮಂಜಪ್ಪ, ಕುಪ್ಪಯ್ಯ, ಉದಯಕುಮಾರ್, ದೇವರಾಜ್, ಬಸವಣ್ಣಪ್ಪ, ಮಹಂತೇಶ್ ಇದ್ದರು.