ಸೌಲಭ್ಯ ವಿತರಿಸುವಲ್ಲಿ ವಿಳಂಬ: ಕಟ್ಟಡ ಕಾರ್ಮಿಕರ ಪ್ರತಿಭಟನೆ

| Published : Jun 25 2025, 11:47 PM IST

ಸೌಲಭ್ಯ ವಿತರಿಸುವಲ್ಲಿ ವಿಳಂಬ: ಕಟ್ಟಡ ಕಾರ್ಮಿಕರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಕಾರ್ಮಿಕರ ಸ್ವಾಭಾವಿಕ ಮರಣ ಮತ್ತು ಮದುವೆ ಧನಸಹಾಯ ವಿತರಣೆಯಲ್ಲಿ ಆಗುತ್ತಿರುವ ವಿಳಂಬ ನೀತಿಯನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಮುಖಂಡರು ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

- ತಾಲೂಕು ಕಟ್ಟಡ ಕಾರ್ಮಿಕರ ಸಂಘದಿಂದ ಚಿಕ್ಕಮಗಳೂರಿನಲ್ಲಿ ಹೋರಾಟ

--

- ನೋಂದಾಯಿತ ಫಲಾನುಭವಿಗಳು ಎದುರಿಸುತ್ತಿದ್ದಾರೆ ಹತ್ತಾರು ಸಮಸ್ಯೆ

- ಸೌಲಭ್ಯ ವಿತರಣೆಯಲ್ಲಿ ಕಲ್ಯಾಣ ಮಂಡಳಿ ವಿಳಂಬ ನೀತಿ

- ನೈಜ ಕಾರ್ಮಿಕರು ಸೌಲಭ್ಯಗಳಿಂದ ವಂಚಿತ

- ಕಾರ್ಮಿಕರಿಗೆ ಕೆಲಸಕ್ಕೆ ಬಾರದ ಕಳಪೆ ಗುಣಮಟ್ಟದ ಕಿಟ್‌ ವಿತರಣೆ

- ದುಸ್ಥಿತಿಯಲ್ಲಿದೆ ನಿವೃತ್ತ ಕಾರ್ಮಿಕರ ಬದುಕುಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಾರ್ಮಿಕರ ಸ್ವಾಭಾವಿಕ ಮರಣ ಮತ್ತು ಮದುವೆ ಧನಸಹಾಯ ವಿತರಣೆಯಲ್ಲಿ ಆಗುತ್ತಿರುವ ವಿಳಂಬ ನೀತಿಯನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಮುಖಂಡರು ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ಸಿ.ವಸಂತ್‌ಕುಮಾರ್ ಅವರು, ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಫಲಾನುಭವಿಗಳು ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸ್ವಾಭಾವಿಕ ಮರಣ, ಮದುವೆ ಧನಸಹಾಯ, ವಿದ್ಯಾರ್ಥಿ ವೇತನ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡುವಲ್ಲಿ ಕಲ್ಯಾಣ ಮಂಡಳಿ ವಿಳಂಬನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.ಪ್ರಸ್ತುತ ಸಂಕಷ್ಟದಿಂದ ಜೀವನ ನಡೆಸುತ್ತಿರುವ ಕಾರ್ಮಿಕ ಫಲಾನುಭವಿಗಳಿಗೆ ಮದುವೆ ಸೇರಿದಂತೆ ಹಲವಾರು ಸೌಲಭ್ಯದ ಧನಸಹಾಯದ ಹಣ ಖಾತೆಗೆ ಜಮೆವಾಗಿಲ್ಲ, ಕಾರ್ಮಿಕರಲ್ಲದವರನ್ನು ನೋಂದಾಯಿಸಿಕೊಂಡ ಕಾರಣ, ನೈಜ ಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಕೂಡಲೇ ಇದನ್ನು ತಡೆಗಟ್ಟಿ ಅನಧಿಕೃತರನ್ನು ಕಾನೂನಿನ ವ್ಯಾಪ್ತಿಯಲ್ಲಿ ಶಿಕ್ಷೆಗೆ ಒಳಪಡಿಸಬೇಕು ಎಂದರು.ರಾಜ್ಯ ಸರ್ಕಾರ ಕಾರ್ಮಿಕರ ದುಡಿಮೆಗೆ ಅನುಕೂಲವಾಗಲು ಕಾರ್ಮಿಕ ಕಿಟ್‌ಗಳನ್ನು ನೀಡಲಾಗುತ್ತಿದೆ. ಆದರೆ, ಕಾರ್ಮಿಕರಿಗೆ ಸಾವಿರಾರು ಬೆಲೆ ಗುಣಮಟ್ಟದ ಕಿಟ್‌ಗಳನ್ನು ವಿತರಿಸುವ ಬದಲು ಕೆಲಸಕ್ಕೆ ಬಾರದ ಕಳಪೆ ಗುಣಮಟ್ಟದ ಕಿಟ್‌ ಗಳನ್ನು ಕಾರ್ಮಿಕ ಮಂಡಳಿ ವಿತರಿಸುವ ಮೂಲಕ ದ್ರೋಹವೆಸಗುತ್ತಿದೆ ಎಂದು ದೂರಿದರು.ಇತ್ತೀಚೆಗೆ ಕಾರ್ಮಿಕರ ಕಿಟ್‌ಗಳನ್ನು ರಾಜಧಾನಿಯಲ್ಲಿ ಮಾರಾಟ ಮಾಡಿ ಅಧಿಕಾರಿಗಳು ಸಿಲುಕಿಕೊಂಡಿದ್ದಾರೆ. ಕಾರ್ಮಿಕರಿಗೆ ಕಿಟ್ ಪಡೆಯಲು ಆಧಾರ್, ಲೇಬರ್, ರೇಷನ್, ಸಿಆರ್‌ ನಂಬರ್ ಸೇರಿದಂತೆ ಅನೇಕ ದಾಖಲೆಗಳನ್ನು ಪಡೆಯುತ್ತಾರೆ. ಈ ನಡುವೆ ಬೆಂಗಳೂರಿನಲ್ಲಿ ನೂರಾರು ಕಿಟ್‌ಗಳು ಅಂಗಡಿಗಳಲ್ಲಿ ಮಾರಾಟವಾಗುತ್ತಿರಲು ಅಧಿಕಾರಿಗಳ ಭ್ರಷ್ಟಚಾರವೇ ನೇರ ಕಾರಣವಾಗಿದೆ ಎಂದರು.ಕಾರ್ಮಿಕರ ನಿವೃತ್ತಿ ನಂತರ ಔಷಧಿ ಹಾಗೂ ಜೀನೋಪಾಯಕ್ಕೆ ಸರಿಯಾಗಿ ಮೂರು ಸಾವಿರ ಪಿಂಚಣಿ ವ್ಯವಸ್ಥೆಯನ್ನು ನೀಡುತ್ತಿಲ್ಲ. ಇದರಿಂದ ನಿವೃತ್ತ ಕಾರ್ಮಿಕರು ಬದುಕು ದುಸ್ಥಿತಿಗೆ ತಲುಪಿದೆ. ಮಕ್ಕಳ ಮದುವೆಗೆ ಕಾರ್ಮಿಕರು ಸಾಲ ಮಾಡಿ ಪೂರೈಸಿದರೂ ಸಮಯಕ್ಕೆ ಸರಿಯಾಗಿ ಮಂಡಳಿ ಧನಸಹಾಯದ ಹಣ ನೀಡದೇ ಸತಾಯಿಸುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಕಟ್ಟಡ ಕಾರ್ಮಿಕರು ಭಾಗವಹಿಸಿದ್ದರು.

25 ಕೆಸಿಕೆಎಂ 2ಕಾರ್ಮಿಕರ ಸ್ವಾಭಾವಿಕ ಮರಣ ಮತ್ತು ಮದುವೆ ಧನಸಹಾಯ ವಿತರಣೆಯಲ್ಲಿ ಆಗುತ್ತಿರುವ ವಿಳಂಬ ಸರಿಪಡಿಸಲು ಆಗ್ರಹಿಸಿ ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಮುಖಂಡರು ಚಿಕ್ಕಮಗಳೂರಿನ ಆಜಾದ್‌ಪಾರ್ಕ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.