ಸಾರಾಂಶ
ಕನ್ನಡಪ್ರಭ ವಾರ್ತೆ ಘಟಪ್ರಭಾ
ಪುರಸಭೆ ವ್ಯಾಪ್ತಿಯ ಇ-ಸ್ವತ್ತು ಉತಾರೆ ನೀಡುವಲ್ಲಿ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿರುವ ಕಾರಣ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಗೋಕಾಕ ತಾಲೂಕು ಘಟಕದ ಮುಖಂಡರು ಹಾಗೂ ಪದಾಧಿಕಾರಿಗಳು, ಪ್ರತಿಭಟಿಸಿ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.ಪ್ರತಿಭಟನಾ ಮೆರವಣಿಗೆ ಮೂಲಕ ಪುರಸಭೆ ಕಾರ್ಯಾಲಯಕ್ಕೆ ಆಗಮಿಸಿದ ಪ್ರತಿಭಟನಾಕಾರರು, ರಾಜ್ಯದಲ್ಲಿ ಈಗಾಗಲೇ ಇ-ಸ್ವತ್ತು ಉತಾರ ನೀಡುವ ಕಾರ್ಯ ಚಾಲ್ತಿಯಲ್ಲಿದೆ. ಕಾರಣ ನೂರಾರು ಜನರು ತಮ್ಮ ಆಸ್ತಿಗಳಿಗಾಗಿ ಇ-ಸ್ವತ್ತು ಉತಾರಗಳಿಗಾಗಿ ಘಟಪ್ರಭಾ ಪುರಸಭೆ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿ ತಿಂಗಳುಗಳಾದರೂ ಸಹ ಪುರಸಭೆ ಅಧಿಕಾರಿಗಳು ಅರ್ಜಿದಾರರಿಗೆ ಉತಾರೆ ಪೂರೈಸದೆ ಸತಾಯಿಸುತ್ತಿದ್ದಾರೆ. ಇಲ್ಲ ಸಲ್ಲದ ನಿಯಮ ಹೇಳಿ ಸಾರ್ವಜನಿಕರು ಪುರಸಭೆ ಕಾರ್ಯಾಲಯಕ್ಕೆ ಅಲೆದಾಡುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರದ ಮಾರ್ಗಸೂಚಿ ಪ್ರಕಾರ ನಿಗದಿತ ಕಾಲಾವಕಾಶವಿದ್ದು ಅಧಿಕಾರಿಗಳು ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳ ವಿಲೆವಾರಿಗೆ ವಿಳಂಬ ನೀತಿ ಅನುಸರಿಸಿದರೆ ಸಾವಿರಾರು ಜನರು ಇದರಿಂದ ತೊಂದರೆ ಅನುಭವಿಸಬೆಕಾಗುತ್ತದೆ. ಅನಧಿಕೃತ ಬಡಾವಣೆ ಅಥವಾ ಕಂದಾಯ ಭೂಮಿಯಲ್ಲಿ ನಿರ್ಮಿಸಿರುವ ಮನೆಗೆಳ ಉತಾರಗಳ ಪೂರೈಸುವ ಸರ್ಕಾರದ ಗಡುವು ಮುಕ್ತಾಯದ ಹಂತದಲ್ಲಿದ್ದು, ಘಟಪ್ರಭಾ ಪುರಸಭೆಯಲ್ಲಿ ಸಾವಿರಾರು ಅರ್ಜಿಗಳು ಬಾಕಿ ಉಳಿದಿವೆ. ಆದ್ದರಿಂದ ಮುಖ್ಯಾಧಿಕಾರಿಗಳು ಪುರಸಭೆ ಆಸ್ತಿ ರಿಜಿಸ್ಟರ್ದಲ್ಲಿ ದಾಖಲು ಇರುವ ಪ್ರಕಾರ ಉತಾರೆ ಪೂರೈಸುವ ಕಾರ್ಯ ಮಾಡಬೇಕು. ಮತ್ತು ಒಂದು ವರ್ಷಗಳ ಹಿಂದೆ ಸಲ್ಲಿರುವ ಅರ್ಜಿಗಳು ಕೂಡಾ ವಿಲೇವಾರಿ ಆಗಿಲ್ಲ. ನಿಯಮಾವಳಿಗಳಲ್ಲಿ ಉತಾರೆ ಪೂರೈಸಲು ಅವಕಾಶ ಇದ್ದರೂ ಸಹ ಘಟಪ್ರಭಾ ಪುರಸಭೆಯಲ್ಲಿ ಬಡ ಜನರಿಗೆ ಇ-ಸ್ವತ್ತು ಉತಾರೆ ಪೂರೈಸದೇ ಕಾಲಹರಣ ಮಾಡುತ್ತಿರುವ ಕಂದಾಯ ವಿಭಾಗದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಿ, ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಿ ಜನರಿಗೆ ಉತಾರೆ ಪೂರೈಸುವ ಕಾರ್ಯ ತ್ವರಿತಗತಿಯಲ್ಲಿ ಆಗಬೇಕೆಂಬುದು ಮನವಿ ಮಾಡಿದ್ದಾರೆ.ಮನವಿಗೆ ಸ್ಪಂದಿಸಿ 15 ದಿನಗಳೊಳಗಾಗಿ ಸಾರ್ವಜನಿಕರ ಇ-ಸ್ವತ್ತು ಉತಾರೆ ಸಮಸ್ಯೆ ಬಗೆಹರಿಸದೇ ಹೋದಲ್ಲಿ ಸಂಘಟನೆ ವತಿಯಿಂದ ಪುರಸಭೆ ಕಾರ್ಯಾಲಯ ಘಟಪ್ರಭಾ ಹಾಗೂ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯ ವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಮನವಿಗೆ ಸ್ಪಂದಿಸಿದ ಪುರಸಭೆ ಮುಖ್ಯಾಧಿಕಾರಿ ಎಂ.ಎಸ್.ಪಾಟೀಲ ಅವರು, ಖರೀದಿ ಪತ್ರ, ಸರ್ಕಾರದ ಹಕ್ಕು ಪತ್ರ, ಮಾಲೀಕತ್ವ ಇರುವ ದಾಖಲಾತಿಗಳನ್ನು, ಆಸ್ತಿಯ ನೀರಿನ ಕರ, ಆಸ್ತಿ ಕರ ಹಾಗೂ ಇ-ಸ್ವತ್ತಿಗಾಗಿ ಬೇಕಾದ ಅವಶ್ಯಕ ಕಾಗದ ಪತ್ರಗಳನ್ನೂ ಕಚೇರಿಗೆ ಸಲ್ಲಿಸಿದ ನಂತರ ಅವುಗಳ ಬಗ್ಗೆ ಪರಿಶೀಲನೆ ನಡೆಸಿ, ಸರದಿ ಪ್ರಕಾರ ಇ-ಸ್ವತ್ತುಗಳನ್ನು ಮಾಡಿಕೊಡಲಾಗುತ್ತಿದೆ. ಎಲ್ಲ ಆಸ್ತಿಗಳಿಗೆ ಏಕಕಾಲಕ್ಕೆ ಈ ಸ್ವತ್ತು ಪೂರೈಸಲು ಆಗುವುದಿಲ್ಲ. ಕೆಲವು ಸಮಯ ಬೇಕಾಗುತ್ತದೆ. ಕಾರಣ ಗ್ರಾಹಕರು ನಮ್ಮ ಸಿಬ್ಬಂದಿಯೊಂದಿಗೆ ಸಹಕರಿಸಬೇಕೆಂದು ಕೋರಿದ್ದಾರೆ.ಈ ವೇಳೆ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆಂಪಣ್ಣ ಚೌಕಶಿ, ಸಂತೋಷ ಅರಳಿಕಟ್ಟಿ ಬಣದ ರಾಜ್ಯಾಧ್ಯಕ್ಷ ಪ್ರಶಾಂತ ಅರಳಿಕಟ್ಟಿ, ಕನ್ನಡ ಸೇನೆ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಕೆಂಪಯ್ಯ ಪುರಾಣಿಕ, ಕನ್ನಡ ಸೇನೆ ಗೋಕಾಕ ತಾಲೂಕಾಧ್ಯಕ್ಷ ಅಪ್ಪಾಸಾಬ ಮುಲ್ಲಾ, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಮಹಾಜನ, ಕನ್ನಡ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಮಾರುತಿ ಚೌಕಶಿ, ಮೂಡಲಗಿ ತಾಲೂಕಾಧ್ಯಕ್ಷ ರಾಘವೇಂದ್ರ ಕುಡ್ಡೆಮ್ಮಿ, ಮಲ್ಲಿಕಾರ್ಜುನ ಅರಭಾವಿ, ಶಶಿಧರ ಚೌಕಶಿ, ರಾಜಕುಮಾರ ಹೊನಕೇರಿ, ನಾಗರಾಜ ಶಹಾಪುರ, ಶಿವರಾಜ ಚಿಗಡೊಳಿ, ನಾರಾಯಣ ಜಡಕಿನ, ವಿಠ್ಠಲ ಬೆಳಗಲಿ, ಕಾಶಪ್ಪ ನಿಂಗನ್ನವರ, ಮಲ್ಲಿಕಾರ್ಜುನ ಶಿಂಧೆ, ಬಸವರಾಜ ಹುಬ್ಬಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.