ಸರಗೂರು ತಾಲೂಕು ಆಡಳಿತದ ವಿರುದ್ಧ ಜನಕ್ರೋಶ

| Published : Oct 26 2025, 02:00 AM IST

ಸಾರಾಂಶ

ಕರ್ನಾಟಕ ಸರ್ಕಾರ ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ಬಿಜಾಪುರದಲ್ಲಿ ನಡೆದ ಸಮಾವೇಶ

ಕನ್ನಡಪ್ರಭ ವಾರ್ತೆ ಸರಗೂರು

ತಾಲೂಕಿನ ಹೊಸ ಬೀರ್ವಾಳು ಗ್ರಾಮಸ್ಥರು ಹಕ್ಕುಪತ್ರ ವಿತರಣೆ ಮಾಡಲು ತಡವಾಗಿರುವುದನ್ನು ಖಂಡಿಸಿ ಸರಗೂರು ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಸಾಮಾಜಿಕ ಹೋರಾಟಗಾರ ಮಹೇಶ್ ಮಾತನಾಡಿ, ಕರ್ನಾಟಕ ಸರ್ಕಾರ ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ಬಿಜಾಪುರದಲ್ಲಿ ನಡೆದ ಸಮಾವೇಶದಲ್ಲಿ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಮುತುವರ್ಜಿ ವಹಿಸಿ 1,11,111 ಹಕ್ಕು ಪತ್ರಗಳನ್ನು ವಿತರಿಸಿದೆ. ಅದರಲ್ಲಿ ಸರಗೂರು ತಾಲೂಕು ಹೊಸಬೀರ್ವಾಳು ಗ್ರಾಮದ 120 ಹಕ್ಕುಪತ್ರಗಳು ಸಹ ಒಳಗೊಂಡಿದೆ. ಸರ್ಕಾರಿ ಲೆಕ್ಕದಲ್ಲಿ ಈಗಾಗಲೇ ನಮಗೂ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಆದರೆ ಹಕ್ಕು ಪತ್ರಗಳು ಹೊಸಬೀರ್ವಾಳು ಗ್ರಾಮದ ಜನರಿಗೆ ತಲುಪಿಲ್ಲ ಎಂದರು.

ಬಿಜಾಪುರದಲ್ಲಿ ವಿತರಿಸಲಾಗುತ್ತದೆ ಫಲಾನುಭವಿಗಳು ಸಿದ್ದರಾಗಿ ಎಂದು ತಾಲೂಕು ಆಡಳಿತ ಹೇಳಿತು ಅದರಂತೆ ಸಾರ್ವಜನಿಕರು ಸಹ ಸಿದ್ಧವಾಗಿದ್ದರು, ಆದರೆ ತಾಲೂಕು ಆಡಳಿತ ವ್ಯವಸ್ಥೆಯನ್ನು ಮಾಡಲಿಲ್ಲ. ನಂತರ ಕಳೆದ ಆಗಸ್ಟ್ 15 ಸ್ವತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಹಕ್ಕುಪತ್ರ ವಿತರಿಸುತ್ತೇವೆ ಗ್ರಾಮಸ್ಥರೆಲ್ಲ ಬನ್ನಿ ಎಂದು ಕರೆದಿದ್ದರು, ಅಂದೂ ವಿತರಣೆ ಮಾಡಲಿಲ್ಲ. ಕಳೆದ ತಿಂಗಳು 13 ರಂದು ಶಾಸಕರ ನೇತೃತ್ವದಲ್ಲಿ ಹಕ್ಕುಪತ್ರ ನೀಡುತ್ತೇವೆ, ಬನ್ನಿ ಎಂದಿದ್ದರು ಅಂದು ಸಹ ನಿರಾಶೆಯಾಯಿತು.

ಅ. 24 ರಂದು ಶಾಸಕರ ಜನಸ್ಪಂದನ ಕಾರ್ಯಕ್ರಮವಿದೆ ಎಲ್ಲರೂ ಬನ್ನಿ ಹಕ್ಕುಪತ್ರಗಳನ್ನ ವಿತರಿಸುತ್ತೇವೆ ಎಂದಿದ್ದರು. ಅಲ್ಲೂ ಸಹ ನಮಗೆ ನಿರಾಸೆಯಾಗಿದೆ. ಶಾಸಕರು ಜನ ಸ್ಪಂದನ ಕಾರ್ಯಕ್ರಮವನ್ನು ಮುಂದೂಡುತ್ತಿರುವ ಕಾರಣದಿಂದ ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿಲ್ಲ ಎಂದು ತಹಸೀಲ್ದಾರ್ ಅವರು ಶಾಸಕರ ಕಡೆ ಬೆಟ್ಟು ಮಾಡಿ ತೋರಿಸುತ್ತಾ, ನ. 1ರಂದು ಎಲ್ಲರೂ ಬನ್ನಿ ತಪ್ಪದೇ ವಿತರಿಸುತ್ತೇವೆ ಎಂದು ತಹಸಿಲ್ದಾರ್ ಹೇಳುತ್ತಿದ್ದಾರೆ.

ಇವರ ಮಾತನ್ನು ನಂಬುವುದು ಹೇಗೆ ? ದೇವರು ಕೊಟ್ಟರು ಪೂಜಾರಿ ಕೊಡುವುದಕ್ಕೆ ಹಿಂದೆ, ಮುಂದೆ ನೋಡುತ್ತಾನೆ ಎಂಬಂತಾಗಿದ್ದು, ಇಲ್ಲಿ ಪೂಜಾರಿ ಯಾರು ಎಂಬುದೇ ಅರ್ಥವಾಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.