ಸಾರಾಂಶ
ಕುಷ್ಟಗಿ:
ರಸ್ತೆ ಅಪಘಾತ ಪ್ರಕರಣದಲ್ಲಿ ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡುವಲ್ಲಿ ವಿಳಂಬ ಧೋರಣೆ ತೋರಿದ ಹಿನ್ನೆಲೆ ಸ್ಥಳೀಯ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಗಜೇಂದ್ರಗಡ ಘಟಕಕ್ಕೆ ಸೇರಿದ್ದ ಸಾರಿಗೆ ಸಂಸ್ಥೆಯ ಬಸ್ನ್ನು ಪಟ್ಟಣದಲ್ಲಿ ಬುಧವಾರ ಜಪ್ತಿ ಮಾಡಿದೆ.ಹುನಗುಂದ ತಾಲೂಕಿನ ಕೆನಗಲ್ಲ ಗ್ರಾಮದ ಸಿದ್ದಪ್ಪ ಅಂಗಡಿ 2015ರಲ್ಲಿ ಗ್ರಾಮದ ಇಳಕಲ್ ರಸ್ತೆಯಲ್ಲಿ ತೆರಳುತ್ತಿದ್ದಾಗ ಗಜೇಂದ್ರಗಡ ಘಟಕದ ಬಸ್ ಡಿಕ್ಕಿ ಹೊಡೆದು, ಮೃತಪಟ್ಟಿದ್ದರು. ಘಟನೆಗೆ ಸಂಬಂಧಿಸಿದಂತೆ ಇಲಕಲ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಕುಷ್ಟಗಿ ಸ್ಥಳೀಯ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸ್ಥಳೀಯ ನ್ಯಾಯಾಲಯ ₹ 6.96 ಲಕ್ಷ ಪರಿಹಾರ ನೀಡುವಂತೆ ಆದೇಶಿತ್ತು.
ಹೈಕೋರ್ಟ್ ಮೇಲ್ಮನವಿ:ಈ ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ಹೆಚ್ಚಿನ ಪರಿಹಾರ ನೀಡುವಂತೆ ಅರ್ಜಿದಾರರು ಮೇಲ್ಮನವಿ ಸಲ್ಲಿಸಿದ್ದರು. ಸ್ಥಳೀಯ ನ್ಯಾಯಾಲಯ ನೀಡಿದ್ದ ಪರಿಹಾರದ ₹ 6.98 ಲಕ್ಷವನ್ನು ಹೈಕೋರ್ಟ್ ₹ 13.60 ಲಕ್ಷಕ್ಕೆ ಹೆಚ್ಚಿಸಿ ಆದೇಶಿಸಿತ್ತು. ಪರಿಹಾರ ಭರಿಸಲು ವಿಳಂಬ ಮಾಡಿದ ಬಸ್ ಡಿಪೋ ಬಡ್ಡಿ ಹಾಗೂ ಇತರೆ ವೆಚ್ಚ ₹ 6.39 ಲಕ್ಷ ಒಳಗೊಂಡು ₹ 19.99 ಲಕ್ಷ ಪರಿಹಾರ ನೀಡುವಂತೆ ಗಜೇಂದ್ರಗಡ ಸಾರಿಗೆ ಘಟಕಕ್ಕೆ ಆದೇಶಿಸಿತ್ತು. ಪರಿಹಾರ ನೀಡಲು ಸಾರಿಗೆ ಸಂಸ್ಥೆ ವಿಳಂಬ ತೋರಿದ್ದರಿಂದ ಕೋರ್ಟ್ ವಾರಂಟ್ ಹೊರಡಿಸಿ ಬಸ್ ಜಪ್ತಿ ಮಾಡಲು ಆದೇಶಿಸಿದ ಹಿನ್ನೆಲೆಯಲ್ಲಿ ಬುಧವಾರ ಕುಷ್ಟಗಿ ಮಾರ್ಗವಾಗಿ ಸಿಂಧನೂರಗೆ ತೆರಳುತ್ತಿದ್ದ ಬಸ್ನ್ನು ಕೋರ್ಟ್ ಸಿಬ್ಬಂದಿ ಜಪ್ತಿ ಮಾಡಿದ್ದಾರೆ.