ಅಳ್ನಾವರ:

ಈ ಹಿಂದೆ ಹೆಸ್ಕಾಂ ಇಲಾಖೆಗೆ ಸಂಬಂಧಿಸಿದ ಅನೇಕ ದೂರುಗಳು ಬಂದ ಹಿನ್ನೆಲೆ ಮೇಲಾಧಿಕಾರಿಗಳ ಗಮನಕ್ಕೆ ವಿಷಯ ತಂದು ₹ ೩ ಕೋಟಿ ವೆಚ್ಚದ ಹೊಸ ವಿದ್ಯುತ್ ತಂತಿ ಹಾಗೂ ಹೊಸ ಕಂಬ ಅಳವಡಿಕೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ವಿನಾಯಕ ಕುರುಬರ ಹೇಳಿದರು.

ತಾಲೂಕಿನ ಕಡಬಗಟ್ಟಿ ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಗುರುವಾರ ನಡೆದ ಪಂಚ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಪಂಚ ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡಿದೆ. ಗೃಹಲಕ್ಷ್ಮೀ ಯೋಜನೆಯಡಿ ಎಲ್ಲರಿಗೂ ಪ್ರತಿ ತಿಂಗಳು ಹಣ ಪಾವತಿ ಆಗಿದ್ದು. ಜಿಲ್ಲೆಯಲ್ಲಿಯೇ ನಮ್ಮ ತಾಲೂಕು ಉತ್ತಮ ಪ್ರಗತಿ ಸಾಧಿಸಿದೆ. ಜತೆಗೆ ಪ್ರತಿ ಗ್ರಾಮ ಪಂಚಾಯಿತಿ ಮತ್ತು ಅಲ್ಲಿನ ಹಳ್ಳಿಗಳಲ್ಲಿಯೂ ಸಹ ಸಭೆ ನಡೆಸುವ ಮೂಲಕ ಗ್ರಾಮದ ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಶ್ರಮಿಸಲಾಗಿದೆ, ಹಳ್ಳಿಗಳಲ್ಲಿ ನಡೆದ ಸಭೆಗಳು ಫಲಪ್ರದವಾಗುತ್ತಿವೆ ಎಂದರು.

ತಾಪಂ ಇಒ ಪ್ರಶಾಂತ ತುರ್ಕಾಣಿ ಮಾತನಾಡಿ, ಫಲಾನುಭವಿಗಳು ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆ ಲಾಭ ಪಡೆದುಕೊಳ್ಳಬೇಕು. ಗ್ರಾಮಕ್ಕೆ ಕುಡಿಯುವ ನೀರಿನ ತೊಂದರೆ ಆಗದ ಹಾಗೆ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ನರೇಗಾ ಯೋಜನೆ, ಪಶು ಆಸ್ಪತ್ರೆ ಸೌಲಭ್ಯ, ಗ್ರಾಮದ ಸಾರಿಗೆ ಬಸ್ ಸಂಚಾರ, ಕುಡಿಯುವ ನೀರು, ರೇಶನ ಕಾರ್ಡ್‌ ಸಮಸ್ಯೆ, ಅಳ್ನಾವರದ ಸರ್ಕಾರಿ ಡಿಗ್ರಿ ಕಾಲೇಜಿಗೆ ಬಸ್ ಓಡಿಸುವ ಬಗ್ಗೆ ಚರ್ಚೆ ನಡೆಯಿತು. ಗ್ರಾಮದಲ್ಲಿನ ಗ್ರಾಮ ಒನ್ ಕೇಂದ್ರ ಬಂದ ಆಗಿದ್ದು ಆರಂಭಿಸಲು ಕ್ರಮಕೈಗೊಳ್ಳಿ ಎಂದು ಸಾರ್ವಜನಿಕರು ಅಧಿಕಾರಿಗಳಿಗೆ ವಿನಂತಿಸಿದರು.


ಪಶುವೈದ್ಯಾಧಿಕಾರಿ ಮತ್ತು ಗ್ರಾಪಂ ಆಡಳಿತಾಧಿಕಾರಿಯಾದ ಸುನಿಲ್ ಬನ್ನಿಗೋಳ, ಪಿಡಿಒ ಆನಂದ ಪಾಟೀಲ, ಶಿಲ್ಪಾ ತರಗಾರ, ಷಣ್ಮುಖ ಸುಳಗೇಕರ, ಹಿರಿಯರಾದ ನಿಂಗಪ್ಪ ಬೇಕ್ವಾಡಕರ, ಸಲೀಂ ತಡಕೋಡ, ಆಸಂಬಿ ಹೊಲ್ತಿಕೋಟಿ, ಕಲ್ಮೇಶ ಬಡಿಗೇರ, ಎಂ.ಕೆ. ಬಾಗವಾನ್, ರಾಜು ಪನ್ನಾಳಕರ, ಶಿವಾನಂದ ಗೋವಿನಕೊಪ್ಪ, ಲಲಿತಾ ಬಡಿಗೇರ ಇದ್ದರು.