ಸಾರಾಂಶ
ಹೊನ್ನಾವರದ ಚಿಕ್ಕನಕೋಡಿನ ಕೆಂಚಗಾರ ಗ್ರಾಮದಲ್ಲಿನ ಅರಣ್ಯವಾಸಿ ರಾಜು ತಿಪ್ಪಯ್ಯ ನಾಯ್ಕ ಅವರ ಮೇಲೆ ದೌರ್ಜನ್ಯವೆಸಗಿದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಕಾನೂನು ಜರುಗಿಸಬೇಕು ಎಂದು ಅರಣ್ಯ ಹಕ್ಕು ಹೋರಾಟ ವೇದಿಕೆಯಿಂದ ಭಟ್ಕಳದಲ್ಲಿ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಭಟ್ಕಳ: ಹೊನ್ನಾವರದ ಚಿಕ್ಕನಕೋಡಿನ ಕೆಂಚಗಾರ ಗ್ರಾಮದಲ್ಲಿನ ಅರಣ್ಯವಾಸಿ ರಾಜು ತಿಪ್ಪಯ್ಯ ನಾಯ್ಕ ಅವರ ಮೇಲೆ ದೌರ್ಜನ್ಯವೆಸಗಿದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಕಾನೂನು ಜರುಗಿಸಬೇಕು ಎಂದು ಅರಣ್ಯ ಹಕ್ಕು ಹೋರಾಟ ವೇದಿಕೆಯಿಂದ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಕ್ಲೇಮನ್ನು ಪ್ರತಿಪಾದಿಸುವ ಅರಣ್ಯವಾಸಿ ಅನುಸೂಚಿತ ಬುಡಕಟ್ಟಿನ ವ್ಯಕ್ತಿಯನ್ನು ಅಥವಾ ಇತರೆ ಪಾರಂಪರಿಕ ಅರಣ್ಯವಾಸಿಯ ಮಾನ್ಯತೆ ಮತ್ತು ಪರಿಶೀಲನಾ ಪ್ರಕ್ರಿಯೆ ಪೂರ್ಣ ಆಗುವ ವರೆಗೆ ಅಧಿಭೋಗದಲ್ಲಿರುವ ಅರಣ್ಯಭೂಮಿಯಿಂದ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸತಕ್ಕದಲ್ಲ ಅಥವಾ ಹೊರಹಾಕತಕ್ಕದ್ದಲ್ಲ ಎಂಬ ಅಂಶ ಉಲ್ಲೇಖಿಸಿದ್ದರೂ ಕಾನೂನಿಗೆ ವ್ಯತಿರಿಕ್ತವಾಗಿ ಹೊನ್ನಾವರದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಅನಾದಿಕಾಲದಿಂದಲೂ ಸಾಗುವಳಿ ಮಾಡಿಕೊಂಡು ಬರುತ್ತಿದ್ದ ರಾಜು ತಿಪ್ಪಯ್ಯ ನಾಯ್ಕ ಅವರ ಬೆಲೆಬಾಳುವ ಬೆಳೆಯನ್ನು ನಷ್ಟಪಡಿಸಿ, ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿರುವುದು ಖಂಡನೀಯ. ಅರಣ್ಯವಾಸಿ ಮೇಲೆ ಕಾನೂನುಬಾಹಿರ ಕೃತ್ಯವೆಸಗಿದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ಸಹಾಯಕ ಕಚೇರಿಯ ತಹಸೀಲ್ದಾರ್ ಸಂತೋಷ ಭಂಡಾರಿ ಮನವಿ ಸ್ವೀಕರಿಸಿದರು.ಅರಣ್ಯ ಹಕ್ಕು ಹೋರಾಟಗಾರರ ವೇದಿಕೆಯ ಜಿಲ್ಲಾ ಸಂಚಾಲಕ ದೇವರಾಜ ಗೊಂಡ, ಪ್ರಮುಖರಾದ ಚಂದ್ರು ನಾಯ್ಕ, ರತ್ನಾ ನಾಯ್ಕ, ಶ್ರೀಧರ ನಾಯ್ಕ, ಚಂದ್ರು ನಾಯ್ಕ ಬೆಳಕೆ, ಸಂತೋಷ ನಾಯ್ಕ ಮುಂತಾದವರಿದ್ದರು.