ನಗರದ ಎಪಿಎಂಸಿಯಲ್ಲಿ ರಾಗಿ ಖರೀದಿ ಕೇಂದ್ರ ಉದ್ಘಾಟಿಸಿದ ಶಾಸಕಕನ್ನಡಪ್ರಭ ವಾರ್ತೆ ತುಮಕೂರು
ರಾಗಿ ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ ಈಗ ರಾಗಿಗೆ ನೀಡುತ್ತಿರುವ ಬೆಂಬಲ ಬೆಲೆ ಕಡಿಮೆಯೇ. ಆದರೂ ಮುಂದಿನ ದಿನಗಳಲ್ಲಿ ರಾಗಿ ಬೇಡಿಕೆ ಹೆಚ್ಚಾಗಿ ಬೆಳೆಗಾರರಿಗೆ ಉತ್ತಮ ಬೆಲೆ ಸಿಗುತ್ತದೆ ಎಂದು ಗ್ರಾಮಾಂತರ ಶಾಸಕ ಬಿ.ಸುರೇಶ್ಗೌಡ ವಿಶ್ವಾಸ ವ್ಯಕ್ತಪಡಿಸಿದರು.ಬುಧವಾರ ನಗರದ ಎಪಿಎಂಸಿ ಆವರಣದಲ್ಲಿ ರಾಗಿ ಖರೀದಿ ಕೇಂದ್ರ ಉದ್ಘಾಟಿಸಿ ರಾಗಿ ರಾಶಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ದೇಶಕ್ಕೆ ಅನ್ನ ನೀಡುವ ರೈತರ ಬದುಕು ಕಷ್ಟದಾಯಕ. ಬೆವರು ಸುರಿಸಿ ಬೆಳೆಬೆಳೆಯಬೇಕು. ಆದರೆ ತಮ್ಮ ಬೆಳೆಗೆ ವೈಜ್ಞಾನಿಕ ಬೆಲೆ ಸಿಗುವುದಿಲ್ಲ ಎಂಬ ಕೊರಗು ರೈತರಿಗೆ ಇದೆ. ಈ ಪರಿಸ್ಥಿತಿಯಲ್ಲಿ ರಾಗಿ ಬೆಳೆಗಾರರಿಗೆ ನೆರವಾಗಲು ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್ ರಾಗಿಗೆ 4886 ರು. ಬೆಂಬಲ ಬೆಲೆ ನಿಗದಿಮಾಡಿ ಖರೀದಿಗೆ ಅವಕಾಶ ಮಾಡಿದೆ ಎಂದು ಹೇಳಿದರು.
ಕ್ವಿಂಟಲ್ ರಾಗಿ ಬೆಳೆಯಲು ರೈತನಿಗೆ ಕನಿಷ್ಠ ೧೫ ಸಾವಿರ ರು. ಖರ್ಚು ಬರುತ್ತದೆ. ಆದರೂ ಕೃಷಿ ಬಿಡಬಾರದು ಎಂದು ರೈತರು ಕಷ್ಟದಲ್ಲೂ ಬೆಳೆಯುತ್ತಿದ್ದಾರೆ. ರಾಗಿ ಬೆಳೆ ಲಾಭದಾಯಕವಲ್ಲ ಎಂದು ಬಹುತೇಕ ರೈತರು ಈಗ ಅಡಿಕೆ, ತೆಂಗು ಬೆಳೆಯಲು ಶುರುಮಾಡಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ರಾಗಿಗೆ ಬೇಡಿಕೆ ಇದೆ. ಮುಂದಿನ ದಿನಗಳಲ್ಲಿ ಕ್ವಿಂಟಲ್ ರಾಗಿ 15 ಸಾವಿರ ರು. ದಾಟಬಹುದು. ರೈತರು ನಿರಾಶರಾಗಬೇಕಾಗಿಲ್ಲ ಎಂದು ಸುರೇಶ್ಗೌಡ ಹೇಳಿದರು.ರಾಗಿ ಖರೀದಿ ಕೇಂದ್ರದಲ್ಲಿ ರೈತರಿಗೆ ಯಾವುದೇ ರೀತಿ ತೊಂದರೆ, ವಂಚನೆ ಆಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು. ರೈತರು ಕೂಡಾ ಗುಣಮಟ್ಟದ ರಾಗಿ ತಂದು ಮಾರಾಟ ಮಾಡಬೇಕು ಎಂದು ಮನವಿ ಮಾಡಿದರು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕಿ ಸೌಮ್ಯ, ಎಪಿಎಂಸಿ ಕಾರ್ಯದರ್ಶಿ ಕೃಷ್ಣಪ್ಪ, ಅಧಿಕಾರಿಗಳಾದ ನಾಗರಾಜು, ಹೇಮಲತಾ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಶಿವಕುಮಾರ್ ಹಾಗೂ ರೈತ ಮುಖಂಡರು ಭಾಗವಹಿಸಿದ್ದರು.