ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಹಸಿ ಶುಂಠಿ ಬೆಳೆಗಳಲ್ಲಿ "ಅಂಗಮಾರಿ " ರೋಗ ಮತ್ತು ವೈರಸ್ ಹಾವಳಿಯಿಂದ ಉಂಟಾದ ಸಂಪೂರ್ಣ ನಾಶಕ್ಕೆ ತುರ್ತು ಪರಿಹಾರ ನೀಡುವ ಜತೆಗೆ ಇತ್ತೀಚಿನ ದಿನಗಳಲ್ಲಿ ನಕಲಿ ಬಿತ್ತನೆ ಬೀಜ, ಔಷಧಿ, ರಸಗೊಬ್ಬರ ಮಾರಾಟದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ಹಸಿ ಶುಂಠಿ ವರ್ತಕರ ಮತ್ತು ಬೆಳೆಗಾರರ ಸಂಘದಿಂದ ಗುರುವಾರ ಮೌನ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ನಗರದ ಹೇಮಾವತಿ ಪ್ರತಿಮೆಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂತು. ಇದೇ ವೇಳೆ ಬೆಳೆಗಾರರ ಸಂಘದ ಕಾರ್ಯದರ್ಶಿ ಸಯ್ಯದ್ ಅಬೀಜ್ ಮಾತನಾಡಿ, ರೈತರ ಬದುಕಿಗೆ ಸಂಬಂಧಿಸಿದ ಒಂದು ಗಂಭೀರ ಮತ್ತು ತುರ್ತು ವಿಷಯವಿದ್ದು, ಹಾಸನ ಜಿಲ್ಲೆಯಾದ್ಯಂತ ಹಸಿ ಶುಂಠಿ ಬೆಳೆ ಅಂಗಮಾರಿ ರೋಗ ಮತ್ತು ತೀವ್ರ ವೈರಸ್ ಹಾವಳಿಯಿಂದ ಸಂಪೂರ್ಣವಾಗಿ ನಾಶವಾಗುತ್ತಿದೆ ಎಂದು ದೂರಿದರು. ಈ ರೋಗವು ವೇಗವಾಗಿ ಹರಡುತ್ತಿದ್ದು, ಯಾವುದೇ ಔಷಧಿಗಳಿಂದ ನಿಯಂತ್ರಣಕ್ಕೆ ಒಳಪಡದಿರುವುದರಿಂದ ರೈತರು ತಮ್ಮ ಸಂಪೂರ್ಣ ಹೂಡಿಕೆಯನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು. ಇದರ ಜೊತೆಗೆ, ಜಿಲ್ಲೆಯ ಹಲವು ಕೃಷಿ ಔಷಧ ಮತ್ತು ರಸಗೊಬ್ಬರ ಅಂಗಡಿಗಳು ನಕಲಿ ಅಥವಾ ಕಡಿಮೆ ಗುಣಮಟ್ಟದ ಉತ್ಪನ್ನಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡುತ್ತಿವೆ. ಈ ಗುಣಮಟ್ಟರಹಿತ ಉತ್ಪನ್ನಗಳಿಂದ ರೋಗ ನಿಯಂತ್ರಣ ಸಾಧ್ಯವಾಗದೆ, ಬೆಳೆ ನಾಶವಾಗಿದ್ದು, ರೈತರ ಆರ್ಥಿಕ ನಷ್ಟವು ತೀವ್ರಗೊಂಡಿದೆ. ಇದು ಕೇವಲ ಆರ್ಥಿಕ ಸಮಸ್ಯೆಯಾಗಿ ಉಳಿಯದೆ, ರೈತರನ್ನು ಆತ್ಮಹತ್ಯೆಯಂತಹ ಗಂಭೀರ ಸಾಮಾಜಿಕ ಸಂಕಷ್ಟ ಸೃಷ್ಟಿಸಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಬೆಳೆ ನಾಶದ ಪರಿಶೀಲನೆಗಾಗಿ ಜಿಲ್ಲಾ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿ, ನಷ್ಟದ ಅಂದಾಜು ನಡೆಸಿ, ರೈತರಿಗೆ ತ್ವರಿತ ಆರ್ಥಿಕ ಪರಿಹಾರ ಘೋಷಿಸಬೇಕು. ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು, ರೋಗ ತಜ್ಞರು ಮತ್ತು ಕೀಟನಿಯಂತ್ರಣ ತಜ್ಞರ ತಂಡವು ರೈತರು ಬೆಳೆದಿರುವ ಬೆಳೆಯನ್ನು ಪರಿಶೀಲಿಸಿ, ಉಳಿದ ಬೆಳೆಯನ್ನು ರಕ್ಷಿಸಲು ತಕ್ಷಣದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ನಕಲಿ ಮತ್ತು ಕಡಿಮೆ ಗುಣಮಟ್ಟದ ಔಷಧಿ ಹಾಗೂ ರಸಗೊಬ್ಬರ ಮಾರಾಟಗಾರರ ವಿರುದ್ಧ ಕಾನೂನು ಕ್ರಮ, ಲೈಸೆನ್ಸ್ ರದ್ದತಿ ಮತ್ತು ದಂಡ ವಿಧಿಸುವ ಕಟ್ಟುನಿಟ್ಟಿನ ವ್ಯವಸ್ಥೆ ಜಾರಿಗೆ ತರಬೇಕು. ಕೃಷಿ ಉತ್ಪನ್ನ ಅಂಗಡಿಗಳಿಗೆ ಸರ್ಕಾರಿ ಸೂಚನೆ ನೀಡಿ, ರೈತರಿಗೆ ಪ್ರಮಾಣಿತ ಉತ್ಪನ್ನಗಳನ್ನು ಸಮಂಜಸ ದರದಲ್ಲಿ ಒದಗಿಸುವಂತೆ ಖಾತರಿಪಡಿಸಬೇಕು. ರೈತರಿಗೆ ಶಿಬಿರಗಳ ಮೂಲಕ ನಿಜವಾದ ಔಷಧಿಗಳ ಗುರುತಿಸುವಿಕೆ ಮತ್ತು ರೋಗ ನಿಯಂತ್ರಣದ ಕುರಿತು ತರಬೇತಿ ನೀಡಬೇಕು. ರೈತರ ಅಜ್ಞಾನವನ್ನು ದುರ್ಬಳಕೆ ಮಾಡುವ ದಂಧೆಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು. ಕರ್ನಾಟಕ ರಾಜ್ಯ ಹಸಿ ಶುಂಠಿ ವರ್ತಕರು ಮತ್ತು ಬೆಳೆಗಾರರ ಸಂಘ ಈ ಸಂಕಷ್ಟವನ್ನು ರೈತರ ಬದುಕಿಗೆ ಸಂಬಂಧಿಸಿದ ತುರ್ತು ವಿಷಯವೆಂದು ಪರಿಗಣಿಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಎಲ್ಲ ಇಲಾಖೆಗಳನ್ನು ಕಾರ್ಯಪ್ರವೃತ್ತಗೊಳಿಸಲು ಕೋರುತ್ತೇವೆ. ಈ ಸಮಸ್ಯೆ ಕಾಲಹರಣಕ್ಕೆ ಒಳಪಡದ ವಿಷಯವಲ್ಲ. ಪ್ರತಿದಿನ ರೈತರು ಹಸಿವು, ನೋವು ಮತ್ತು ನಷ್ಟವನ್ನು ಎದುರಿಸುತ್ತಿದ್ದಾರೆ. ಅವರ ಜೀವನ ಮತ್ತು ಕುಟುಂಬಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು. ಮೌನ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಹಸಿ ಶುಂಠಿ ವರ್ತಕರ ಮತ್ತು ಬೆಳೆಗಾರರ ಸಂಘದ ಅಧ್ಯಕ್ಷ ಸಯ್ಯದ್ ಜಾಫರ್, ಉಪಾಧ್ಯಕ್ಷ ಎಂ.ಐ. ವಿಶ್ವನಾಥ್, ಮೊಹಮ್ಮದ್ ಅನೀಶ್, ಖಜಾಂಚಿ ಆಲಿ ಪಾಶ, ಇತರರು ಉಪಸ್ಥಿತರಿದ್ದರು.ಪಾಯಿಂಟ್ಸ್:*ಬೆಳೆ ನಾಶದ ಪರಿಶೀಲನೆಗೆ ತಜ್ಞರ ಸಮಿತಿ ನೇಮಿಸಿ
* ನಕಲಿ ಉತ್ಪನ್ನ ಅಧಿಕ ಬೆಲೆ ಮಾರಾಟ ಆರೋಪ*ರೈತರಿಗೆ ಪ್ರಮಾಣಿತ ಉತ್ಪನ್ನಗಳನ್ನು ನೀಡಲು ಮನವಿ