ಅರಸೀಕೆರೆ: ನಗರದ ಶ್ರೀನಿವಾಸನಗರ ಬಡಾವಣೆಯಲ್ಲಿ ಸರ್ಕಾರಿ ಸೇಂದಿವನ ಹಾಗೂ ಸ್ಮಶಾನ ಆವರಣದಲ್ಲಿದ್ದ ಬೃಹತ್ ನೆರಳಿನ ಮರಗಳನ್ನು ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಕಡಿದು ಸಾಗಿಸಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.

ಸಾರ್ವಜನಿಕ ಆಸ್ತಿಯಾಗಿರುವ ಮರಗಳನ್ನು ಹಗಲು ಹೊತ್ತಿನಲ್ಲೇ ಆಧುನಿಕ ಯಂತ್ರೋಪಕರಣಗಳ ಮೂಲಕ ಕಡಿದು ಹಾಕಿರುವುದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಸರ್ಕಾರಿ ಜಾಗಗಳ ಸಂರಕ್ಷಣೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.ಮಾಹಿತಿಯ ಪ್ರಕಾರ, ಜನಸಂಚಾರ ಕಡಿಮೆ ಇರುವ ಸಮಯವನ್ನು ಬಳಸಿಕೊಂಡು ಕೆಲವರು ಮರಗಳನ್ನು ಕತ್ತರಿಸಿ ದಿಮ್ಮಿಗಳನ್ನಾಗಿ ಮಾಡಿ ಟ್ರ್ಯಾಕ್ಟರ್ ಮೂಲಕ ಬೇರೆಡೆ ಸಾಗಿಸಲು ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ. ಅನುಮಾನಗೊಂಡ ಸ್ಥಳೀಯರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಕುರಿತು ವಲಯ ಅರಣ್ಯಾಧಿಕಾರಿ ಹೇಮಂತ್ ಮಾತನಾಡಿ, ಸರ್ಕಾರಿ ಸೇಂದಿವನ ಹಾಗೂ ಸ್ಮಶಾನ ಆವರಣದಲ್ಲಿನ ಮರಗಳನ್ನು ಅಕ್ರಮವಾಗಿ ಕತ್ತರಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ವಶಪಡಿಸಿಕೊಂಡ ಮರದ ದಿಮ್ಮಿಗಳನ್ನು ಇಲಾಖೆಯ ಸುಪರ್ದಿಗೆ ತೆಗೆದುಕೊಳ್ಳಲಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಅರಣ್ಯ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.ಸಾರ್ವಜನಿಕರ ಹಿತಕ್ಕಾಗಿ ಬೆಳೆಸಲಾಗಿರುವ ಮರಗಳನ್ನು ನಿರ್ದಯವಾಗಿ ಕಡಿದು ಪರಿಸರ ಹಾನಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಅಲ್ಲದೆ, ನಗರ ವ್ಯಾಪ್ತಿಯ ಸರ್ಕಾರಿ ಜಾಗಗಳಲ್ಲಿ ಇಂತಹ ಅಕ್ರಮ ಚಟುವಟಿಕೆಗಳು ಮರುಕಳಿಸದಂತೆ ನಿರಂತರ ನಿಗಾ ವಹಿಸುವಂತೆ ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.