ರುದ್ರಭೂಮಿಗೆ ಹೆಚ್ಚುವರಿ ಭೂ ಮಂಜೂರು ಮಾಡಲು ಒತ್ತಾಯ

| Published : Dec 08 2024, 01:16 AM IST

ರುದ್ರಭೂಮಿಗೆ ಹೆಚ್ಚುವರಿ ಭೂ ಮಂಜೂರು ಮಾಡಲು ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ತಾಲೂಕು ಕಚೇರಿಗೆ ತೆರಳಿ ಗ್ರೇಡ್-2 ತಹಸೀಲ್ದಾರ್ ಸಿ. ಪುಷ್ಪವತಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹರಿಹರ

ಹರಿಹರ: ನಗರದಲ್ಲಿರುವ ಹಿಂದೂ ರುದ್ರಭೂಮಿಗೆ ಹೆಚ್ಚುವರಿ ಭೂಮಿ ಮಂಜೂರು ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ಪದಾಧಿಕಾರಿಗಳು ಶನಿವಾರ ತಾಲೂಕು ಕಚೇರಿಗೆ ತೆರಳಿ ಗ್ರೇಡ್-2 ತಹಸಿಲ್ದಾರ್ ಸಿ.ಪುಷ್ಪವತಿ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ವೇದಿಕೆ ತಾಲೂಕು ಅಧ್ಯಕ್ಷ ವೈ.ರಮೇಶ್‍ ಮಾನೆ ಮಾತನಾಡಿ, ಕಳೆದ ಆರೇಳು ದಶಕದಿಂದ ಹರಿಹರ ರುದ್ರಭೂಮಿಯಲ್ಲಿಯೇ ಅಂತ್ಯಕ್ರಿಯೆ ನಡೆಸುತ್ತಾ ಬರಲಾಗಿದೆ. ಆದರೆ ಹರಿಹರ ನಗರ ವ್ಯಾಪ್ತಿ ಹೆಚ್ಚಳವಾಗಿದ್ದು, ಜನಸಂಖ್ಯೆ ಕೂಡಾ ಎಂಟ್ಹತ್ತು ಪಟ್ಟು ಹೆಚ್ಚಾಗಿದೆ. ಆದರೆ ರುದ್ರಭೂಮಿಯ ವ್ಯಾಪ್ತಿ ಚಿಕ್ಕದಾಗಿದ್ದು, ಅಂತ್ಯಕ್ರಿಯೆ ನಡೆಸುವುದು ತೊಂದರೆಯಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಪ್ರಸ್ತುತ ಮರಣಗಳ ಸಂಖ್ಯೆ ಹೆಚ್ಚಾಗಿದ್ದು, ಇರುವ ಜಾಗದಲ್ಲಿಯೇ ಶವ ಸಂಸ್ಕಾರ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಇದರಿಂದ ಶವ ಸಂಸ್ಕಾರ ಮಾಡಿದ ಕೆಲ ದಿನಗಳಲ್ಲಿಯೇ ಅದೇ ಜಾಗ ತೆರವು ಮಾಡಿ ಮತ್ತೊಂದು ಶವ ಸಂಸ್ಕಾರ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಇದರಿಂದ ಅರೆ ಮರೆ ಸಂಸ್ಕಾರಗೊಂಡ ದೇಹಗಳು ಎಲೆಂದರಲ್ಲಿ ಬೇಕಾಬಿಟ್ಟಿ ಬೀಳುವ ಪರಿಸ್ಥಿತಿ ಬಂದಿದೆ.

ಹಲವು ಬಾರಿ ಹೂತಿರುವ ಶವದ ಮೇಲೆ ಮತ್ತೊಂದು ಶವ ತಂದು ಅಂತ್ಯಕ್ರಿಯೆ ನಡೆಸುತ್ತಿರುವುದು ಕಂಡು ಬರುತ್ತಿದೆ. ಸಾರ್ವಜನಿಕರು ಎಲ್ಲೆಂದರಲ್ಲಿ ಶವ ಶವಸಂಸ್ಕಾರ ಮಾಡುತ್ತಿದ್ದಾರೆ. ಇದರಿಂದ ನಾಯಿಗಳು ರುದ್ರಭೂಮಿಯಲ್ಲಿ ಹೋಗಿ ಹೂತಾಗಿರುವ ಶವಗಳನ್ನು ಹೊರಗೆಳೆದು ಹಾಕುತ್ತಿವೆ ಎಂದರು.

ಭದ್ರತೆ ಇಲ್ಲದಿರುವ ಕಾರಣ ಸದರಿ ರುದ್ರಭೂಮಿ ಬಹಳಷ್ಟು ಅವ್ಯವಸ್ಥೆಯ ಗುಡಾಗಿದೆ. ಬೃಹತ್ ಪ್ರಮಾಣದಲ್ಲಿ ಮರಗಿಡಗಳು ಬೆಳೆದು ನಿಂತಿದ್ದು. ಅವುಗಳ ಮೇಲೆ ಹೈ ಟೆನ್ಷನ್ ವಿದ್ಯುತ್ ವೈರ್‌ಗಳು ಹಾದು ಹೋಗಿವೆ. ಅಂತ್ಯಕ್ರಿಯೆಗೆ ಹೋದಂತಹ ಸಾರ್ವಜನಿಕರು ಮರವನ್ನು ಮುಟ್ಟಿದಾಗ ವಿದ್ಯುತ್ ಸ್ಪರ್ಶವಾಗುವ ಸಾದ್ಯತೆ ಇದೆ ಎಂದು ಹೇಳಿದರು.

ತಹಸೀಲ್ದಾರರು ಈ ಕುರಿತು ಖುದ್ದು ಸ್ಥಳ ತನಿಖೆ ಕೈಗೊಂಡು ಈಗಿರುವ ರುದ್ರಭೂಮಿ ಪಕ್ಕದಲ್ಲೇ ಖಾಲಿ ಜಾಗವಿದ್ದು, ಸದರಿ ಜಾಗವನ್ನು ಸರ್ಕಾರ ಖರೀದಿಸಿ ರೂದ್ರಭೂಮಿ ಪ್ರದೇಶವನ್ನು ವಿಸ್ತಾರಗೊಳಿಸಿ ಸಾರ್ವಜನಿಕರಿಗೆ ಶವ ಸಂಸ್ಕಾರ ಮಾಡಲು ಅನುಕೂಲ ಮಾಡಿಕೊಡಬೇಕು ಎಂದಿ ವಿನಂತಿಸಿದರು.

ಈ ವೇಳೆ ವೇದಿಕೆಯ ನಗರ ಘಟಕದ ಅಧ್ಯಕ್ಷ ಪ್ರೀತಮ್‍ಬಾಬು, ಗೌರವ ಸಲಹೆಗಾರ ಬಿ.ಮುಗ್ದುಮ್, ವಕೀಲ ಹಾಲೇಶ್, ಅಲಿ ಅಕ್ಬರ್, ರಾಜು, ರುದ್ರೇಶ್, ಮಹೇಶ್, ಅಕ್ರಂ ಹಾಗೂ ಇತರರು ಭಾಗವಹಿಸಿದ್ದರು.