ಕನ್ನಡಪ್ರಭ ವಾರ್ತೆ ಮೈಸೂರುಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಮೈಸೂರು ತೋಟಗಾರಿಕೆ ಕಾಲೇಜು ಆವರಣದಲ್ಲಿ ಶುಕ್ರವಾರ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಹಾಗೂ ಕೊಡಗು ಜಿಲ್ಲೆಗಳ ರೈತರಿಗೆ ಬೆಣ್ಣೆ ಹಣ್ಣು (ಬಟರ್ ಫ್ರೂಟ್) ಬೆಳೆಯ ಸುಧಾರಿತ ಉತ್ಪಾದನಾ ತಾಂತ್ರಿಕತೆ ಕುರಿತು ತರಬೇತಿ ಆಯೋಜಿಸಿತ್ತು.ಕೊರೋನ ನಂತರದ ದಿನಗಳಲ್ಲಿ ಬೆಣ್ಣೆ ಹಣ್ಣಿಗೆ ಬೇಡಿಕೆ ಹೆಚ್ಚಾಗಲು ಕಾರಣ ಆರೋಗ್ಯದ ಕಡೆಗೆ ಜನರಲ್ಲಿ ಮೂಡಿದಂತಹ ಅರಿವು-ಕಾಳಜಿ. ಮಾರುಕಟ್ಟೆಯಲ್ಲಿ ಈ ಹಣ್ಣಿನ ಬೇಡಿಕೆ ಹಾಗೂ ಬೆಲೆ ದಿನ ಕಳೆದಂತೆ ಹೆಚ್ಚುತ್ತಲೆ ಇದೆ. ಹಾಗಾಗಿ ಬೆಣ್ಣೆ ಹಣ್ಣು ಬೆಳೆಯಲು ರೈತರು ಒಲವು ತೋರಬೇಕು ಎಂದು ತೋಟಗಾರಿಕೆ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ. ತನ್ವೀರ್ ಅಹ್ಮದ್ ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು.ಅಧ್ಯಕ್ಷತೆವಹಿಸಿದ್ದ ತೋಟಗಾರಿಕೆ ಕಾಲೇಜಿನ ಡೀನ್ ಡಾ.ಸಿ.ಎನ್. ಹಂಚಿನಮನಿ ಮಾತನಾಡಿ, ರೈತರು ಒಂದೇ ಬೆಳೆ ಮೇಲೆ ಅವಲಂಬಿತರಾಗದೆ, ಬಹು ಬೆಳೆ ಪದ್ಧತಿ ಹಾಗೂ ಕೃಷಿ ಉಪಕಸುಬುಗಳಲ್ಲಿ ತೊಡಗಿದರೆ ಸುಸ್ಥಿರತೆ ಹಾಗೂ ಲಾಭ ಗಳಿಸಬಹುದು ಎಂದು ಹೇಳಿದರು.ಹೆಸರುಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಪ್ರಧಾನ ಸಂಶೋಧಕ ಡಾ.ಜಿ. ಕರುಣಾಕರನ್ ಅವರು ಬೆಣ್ಣೆ ಹಣ್ಣಿನ ಪ್ರಸ್ತುತ ಸ್ಥಿತಿ, ಸೂಕ್ತ ವಾತಾವರಣ, ಮಣ್ಣು, ಸಸಿ ಉತ್ಪಾದನೆ, ಬೇಸಾಯ ಕ್ರಮ ಹಾಗೂ ಮಾರುಕಟ್ಟೆ ಬೇಡಿಕೆ - ಬೆಲೆ ಕುರಿತು ಮಾಹಿತಿ ನೀಡಿದರು.ಬಟರ್ ಫ್ರೂಟ್ ಬೆಳೆಯಲ್ಲಿ ಜೈವಿಕ ಉತ್ಪನ್ನಗಳ ಬಳಕೆ ಹಾಗೂ ಉಪಯೋಗ ಕುರಿತು ಡಾ.ಜಿ. ಮಂಜುನಾಥ್ ತಿಳಿಸಿದರು. ಡಾ.ಕೆ. ಚಂದನ್ ಅವರು ಸಂಸ್ಕರಣೆ, ಶೇಖರಣೆ ಹಾಗೂ ಮೌಲ್ಯವರ್ಧನೆ ಅವಕಾಶಗಳ ಬಗ್ಗೆ ತಿಳಿಸಿದರು.ವಿಷಯ ತಜ್ಞರಾದ ಡಾ.ಜೆ.ಎಸ್‌. ಅರವಿಂದ ಕುಮಾರ್, ಡಾ.ಕೆ.ಎಂ. ಶಿವಕುಮಾರ್, ಡಾ.ಎಚ್‌.ಆರ್. ಮನು ಕುಮಾರ್, ಡಾ.ಎನ್. ಮಮತಾ ಲಕ್ಷ್ಮೀ, ಡಾ.ಆರ್‌. ಸಿದ್ದಪ್ಪ, ಮತ್ತು ಡಾ.ಜಿ.ಪಿ. ಮುತ್ತುರಾಜು ಅವರು ರೈತರೊಂದಿಗೆ ನಡೆಸಿದ ಸಂವಾದದಲ್ಲಿ ಬೆಣ್ಣೆ ಹಣ್ಣು ಕೃಷಿಯ ಸಂಪೂರ್ಣ ಮಾಹಿತಿ ಚರ್ಚಿಸಿದರು.