ಹಾವೇರಿ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವವನ್ನು ವಿವಿ ಆವರಣದಲ್ಲಿಯೇ ನಡೆಸಬೇಕು ಎಂದು ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಮುಖಂಡರು ಒತ್ತಾಯಿಸಿದರು.
ಹಾವೇರಿ:ಹಾವೇರಿ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವವನ್ನು ವಿವಿ ಆವರಣದಲ್ಲಿಯೇ ನಡೆಸಬೇಕು ಎಂದು ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಮುಖಂಡರು ಒತ್ತಾಯಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯು ಆಯೋಜಿಸಿದ್ದ ಸಮಾಲೋಚನೆ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಮುಖಂಡರು ವಿಶ್ವವಿದ್ಯಾಲಯದಲ್ಲಿಯೇ ಘಟಿಕೋತ್ಸವ ನಡೆಸಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.ವಿವಿ ಉಳಿಸಿ ಹೋರಾಟ ಸಮಿತಿ ಸಂಚಾಲಕ ಬಸವರಾಜ ಪೂಜಾರ ಮಾತನಾಡಿ, ಹಾವೇರಿ ವಿಶ್ವವಿದ್ಯಾಲಯದ ಬೆಳವಣಿಗೆಯ ದೃಷ್ಟಿಯಿಂದ ವಿವಿ ಆಡಳಿತ ಮಂಡಳಿಯು ಘಟಿಕೋತ್ಸವ ಕಾರ್ಯಕ್ರಮ ನಡೆಸಲು ಕ್ಯಾಂಪಸ್ನಲ್ಲಿ ಸಭಾಂಗಣವಿಲ್ಲ ಎಂಬ ಕಾರಣ ನೀಡುತ್ತಿರುವುದು ಸಮಂಜಸವಲ್ಲ. ಇದೀಗ ಮಳೆ, ಗಾಳಿಗಳಿಂದ ರಕ್ಷಿಸುವಂತಹ ಅತ್ಯಾಧುನಿಕ ಜರ್ಮನ್ ಟೆಂಟ್ ಸೌಲಭ್ಯಗಳಿವೆ. ಇಂತಹ ಸೌಕರ್ಯಗಳನ್ನು ಬಳಸಿಕೊಂಡು ಪ್ರಥಮ ಘಟಿಕೋತ್ಸವ ಕಾರ್ಯಕ್ರಮವನ್ನು ಸೂಕ್ತ ತಯಾರಿಯೊಂದಿಗೆ ಕ್ಯಾಂಪಸ್ನಲ್ಲಿಯೇ ನಡೆಸಬೇಕು ಎಂದರು.ವಿವಿ ಆವರಣದಲ್ಲಿಯೇ ಘಟಿಕೋತ್ಸವ ಕಾರ್ಯಕ್ರಮ ನಡೆಸುವುದರಿಂದ, ಕಾರ್ಯಕ್ರಮಕ್ಕೆ ರಾಜ್ಯಪಾಲರು, ಶಿಕ್ಷಣ ಸಚಿವರು ಸೇರಿದಂತೆ ಸರ್ಕಾರದ ಗಣ್ಯರು ಆಗಮಿಸುತ್ತಿರುವ ಮಾಹಿತಿಯಿದೆ. ಈ ಗಣ್ಯರಿಗೆ ವಿ.ವಿಯ ರಸ್ತೆ ರೀಪೇರಿ, ಅನುದಾನ ಸೇರಿದಂತೆ ಮೂಲಭೂತ ಸೌಲಭ್ಯಗಳಿಗಾಗಿ ಸರ್ಕಾರದ ಗಮನ ಸೆಳೆಯಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದರು.ಸಮಿತಿಯ ಮುಖಂಡರಾದ ಪರಿಮಳ ಜೈನ್ ಮಾತನಾಡಿ, ನಮ್ಮ ಭಾಗದ ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಅಧ್ಯಯನ ಮಾಡಲು ಅನುಕೂಲವಾಗಲು, ಸಾಕಷ್ಟು ಹೋರಾಟ ಮಾಡಿ ಹಾವೇರಿ ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳಲಾಗಿದೆ. ಸರ್ಕಾರಿ ಸಂಸ್ಥೆಯಾಗಿರುವ ವಿವಿ ಕ್ಯಾಂಪಸ್ನಲ್ಲಿಯೆ ಘಟಿಕೋತ್ಸವ ಕಾರ್ಯಕ್ರಮ ಆಯೋಜಿಸಬೇಕು ಎಂದರು. ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್., ಡಿಎಸ್ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಉಡಚಪ್ಪ ಮಾಳಗಿ, ಕರ್ನಾಟಕ ರಾಜ್ಯ ರೈತ ಸಂಘಟನೆ ಶಹರ ಘಟಕದ ಅಧ್ಯಕ್ಷ ಸುರೇಶ ಛಲವಾದಿ, ಮಂಜುಳಾ ಅಕ್ಕಿ, ಜಿಲ್ಲಾ ಕಲಾವಿದರ ಬಳಗದ ಅಧ್ಯಕ್ಷ ಡಾ. ತಿಪ್ಪೇಸ್ವಾಮಿ ಹೊಸಮನಿ, ಬಿಎಸ್ಪಿ ಜಿಲ್ಲಾಧ್ಯಕ್ಷ ಮಕಬುಲ್ ಎಂ.ಕೆ, ಅಲೆಮಾರಿ ಸಮುದಾಯ ಸಂಘಟನೆಯ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ ನಾಯಕ್, ಡಿವೈಎಫ್ಐ ಜಿಲ್ಲಾ ಮುಖಂಡ ಖಲಂದರ್ ಅಲ್ಲಿಗೌಡ್ರ, ಚಂದ್ರಶೇಖರ್ ಬಡಿಗೇರ, ವೆಂಕಟೇಶ ಬಿಜಾಪುರ, ಪುಟ್ಟಪ್ಪ ಹರವಿ ಮಾತನಾಡಿದರು.ನಿವೃತ್ತ ಡಿಡಿಪಿಯು ಎಂ.ಆಂಜನೇಯ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಮಲ್ಲಪ್ಪ ಕಾಟೇನಹಳ್ಳಿ, ಆಶಾ ಜೋಷಿ, ಚೈತ್ರಾ ಕೊರವರ, ಸಂಗೀತಾ ಮೋಟಳ್ಳಿ, ಧನುಷ್ ದೊಡ್ಮನಿ, ವಿಠ್ಠಲ ಗೌಳಿ ಸೇರಿದಂತೆ ಇತರರು ಇದ್ದರು.