ಅಕ್ಕಿಆಲೂರು ಭಾಗಕ್ಕೆ ಹೆಸ್ಕಾಂ ಉಪವಿಭಾಗ ಹಾಗೂ ಹಾನಗಲ್ಲ ಪಟ್ಟಣದಲ್ಲೇ ವಿದ್ಯುತ್ ಟ್ರಾನ್ಸಫಾರ್ಮರ್ ಸರ್ವಿಸ್ ಸೆಂಟರ್ ಅಗತ್ಯವಿದ್ದು, ಕೂಡಲೇ ಮಂಜೂರು ಮಾಡಲು ಹೆಸ್ಕಾಂಗೆ ಮನವಿ ಮಾಡಿದ್ದು ಕೂಡಲೇ ಈಡೇರುವ ಭರವಸೆ ಇದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ಹಾನಗಲ್ಲ: ಅಕ್ಕಿಆಲೂರು ಭಾಗಕ್ಕೆ ಹೆಸ್ಕಾಂ ಉಪವಿಭಾಗ ಹಾಗೂ ಹಾನಗಲ್ಲ ಪಟ್ಟಣದಲ್ಲೇ ವಿದ್ಯುತ್ ಟ್ರಾನ್ಸಫಾರ್ಮರ್ ಸರ್ವಿಸ್ ಸೆಂಟರ್ ಅಗತ್ಯವಿದ್ದು, ಕೂಡಲೇ ಮಂಜೂರು ಮಾಡಲು ಹೆಸ್ಕಾಂಗೆ ಮನವಿ ಮಾಡಿದ್ದು ಕೂಡಲೇ ಈಡೇರುವ ಭರವಸೆ ಇದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ಸೋಮವಾರ ಹಾನಗಲ್ಲಿನಲ್ಲಿ ೨.೫ ಕೋಟಿ ರು. ವೆಚ್ಚದ ಹೆಸ್ಕಾಂ ಹಾನಗಲ್ಲ ಉಪವಿಭಾಗದ ನೂತನ ಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ವಸತಿ ಮನೆ, ಅಂಗಡಿಗಳು, ರೈತರ ಪಂಪಸೆಟ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ವ್ಯವಸ್ಥೆಯನ್ನೂ ಕೂಡ ಹೆಚ್ಚಿಸಬೇಕಾಗಿದೆ. ಹತ್ತಾರು ವರ್ಷಗಳಿಂದ ಈ ಕೆಲಸ ನಡೆದಿದ್ದರೆ ಈಗ ಸಮಸ್ಯೆಯಾಗುತ್ತಿರಲಿಲ್ಲ. ಆದಾಗ್ಯೂ ಈಗಾಗಲೇ ಬಹಳಷ್ಟು ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ ನೀಡಲಾಗಿದೆ. ಎರಡು ೧೧೦ ಕೆವಿ ಸ್ಟೇಶನ್‌ಗಳು ಈಗ ಟೆಂಡರ್ ಹಂತದಲ್ಲಿವೆ. ಲೈನ್‌ಮನ್‌ಗಳ ಕೊರತೆ ಇದ್ದು ಈಗ ತರಬೆತಿಯಲ್ಲಿರುವ ಲೈನಮನ್‌ಗಳು ಶೀಘ್ರ ಇಲ್ಲಿಗೆ ಬಂದು ಹಾಜರಾಗಲಿದ್ದಾರೆ. ತಿಳವಳ್ಳಿಯಲ್ಲಿ ಅಕೌಂಟಿಂಗ್ ವಿಭಾಗ ತೆರೆಯುವ ಸಿದ್ಧತೆಯೂ ನಡೆದಿದೆ. ಅಲ್ಲದೆ ತಾಲೂಕಿನ ೯೬ ಹಳ್ಳಿಗಳಲ್ಲಿ ಹಗಲು ಹೊತ್ತು ವಿದ್ಯುದ್ದೀಪಗಳು ಉರಿಯವುದನ್ನು ನಿಲ್ಲಿಸಲು ಗ್ರಾಪಂ ಹಾಗೂ ಹೆಸ್ಕಾಂ ಸಹಯೋಗದಲ್ಲಿ ಟೈಮರ್ ವಿಶೇಷ ಯೋಜನೆ ರೂಪಿಸಲಾಗಿದೆ. ರೈತರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸಲು ನಾವು ಬದ್ಧವಾಗಿದ್ದು ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಅಧ್ಯಕ್ಷ ಸೈಯದ ಅಜೀಮ್‌ಪೀರ ಎಸ್. ಖಾದ್ರಿ ಮುಖ್ಯ ಅತಿಥಿಯಾಗಿ ಮಾತನಾಡಿ, ಹೆಸ್ಕಾಂ ರೈತರು ಸಾರ್ವಜನಿಕರಿಗೆ ಒಳ್ಳೆಯ ಸೇವೆ ಕೊಡುವುದು ನಮ್ಮ ಮೊದಲ ಆದ್ಯತೆ. ಹೆಸ್ಕಾಂ ನೌಕರರು ಅಧಿಕಾರಿಗಳು ಸಾರ್ವಜನಿಕರ ಫೋನ್ ಕರೆಗಳನ್ನು ವಿಳಂಬವಿಲ್ಲದೆ ಪಡೆದು ಅಗತ್ಯ ಸಹಕಾರ ನೀಡಿರಿ. ಹೆಸ್ಕಾಂನ ೭ ಜಿಲ್ಲೆಗಳಲ್ಲಿ ೧ ಲಕ್ಷ ರೈತರು ಆಕ್ರಮ ಸಕ್ರಮದಲ್ಲಿ ಸಂಪರ್ಕ ಪಡೆದಿದ್ದಾರೆ. ಹೊಸದಾಗಿ ಕೊಳವೆ ಭಾವಿಗಳಿಗೆ ಶೀಘ್ರ ಸಂಪರ್ಕ ಯೋಜನೆ ಜಾರಿಯಲ್ಲಿದೆ. ಆದಷ್ಟು ಹೆಚ್ಚು ಪಾಲು ರೈತರು ಸೋಲಾರ ವಿದ್ಯುತ್ ಬಳಸುವುದು ಒಳ್ಳೆಯದು. ಅಕ್ಕಿಆಲೂರಿಗೆ ಸಬ್‌ಸ್ಟೇಶನ್ ಹಾಗೂ ಹಾನಗಲ್ಲಿನಲ್ಲಿ ಶೀಘ್ರ ಟ್ರಾನ್ಸಫಾರ್ಮರ ಸರ್ವೀಸ್‌ ಸೆಂಟರಗೆ ಅನುಮತಿ ನೀಡಲಾಗುತ್ತದೆ. ಇಡೀ ದೇಶದಲ್ಲಿ ಹಗಲು ಹೊತ್ತು ಬೀದಿ ದೀಪ ಉರಿಸುವುದು ಇದೆ. ಟೈಮರ್ ಯೋಜನೆಯಿಂದ ಈ ಎಲ್ಲವನ್ನೂ ನಿಲ್ಲಿಸಲು ಸಾಧ್ಯ. ಸಮಯಕ್ಕೆ ಸರಿಯಾಗಿ ವಿದ್ಯುತ್ ಬಿಲ್ ಪಾವತಿಸಿ. ಹೆಸ್ಕಾಂ ಅಭಿವೃದ್ಧಿಗೆ ಸಹಕರಿಸಿ ಎಂದರು.ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಸೋಲಾರ್ ವಿದ್ಯುತ್ ಈ ಭಾಗದಲ್ಲಿ ಯಶಸ್ವಿ ಯಾಗುವುದಿಲ್ಲ. ಸರ್ಕಾರ ಶೀಘ್ರ ಸಂಪರ್ಕ ಯೋಜನೆಯನ್ನು ಕೈಬಿಟ್ಟು ಹೊಸ ಪಂಪಸೆಟ್‌ಗಳಿಗೆ ಮೊದಲಿನಂತೆ ರೈತರಿಗೆ ಆರ್‌ಆರ್ ನಂಬರ ನೀಡಿ ವಿದ್ಯುತ್ ಪೂರೈಸಬೇಕು. ೧೮ ಸಾವಿರ ಹಣ ಪಡೆದು ಪಂಪಸೆಟ್‌ಗೆ ವಿದ್ಯುತ್ ಪೂರೈಸುವಂತಾಗಲಿ. ರೈತರ ಬಗೆಗೆ ಕಾಳಜಿ ತೋರಿದರೆ ಮಾತ್ರ ರೈತರು ಸರ್ಕಾರವನ್ನು ನಂಬುತ್ತಾರೆ ಎಂದರು.ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಮಾಜಿ ಪುರಸಭೆ ಅಧ್ಯಕ್ಷ ಯಲ್ಲಪ್ಪ ಕಿತ್ತೂರ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ವಿಜಯಕುಮರ ದೊಡ್ಡಮನಿ, ಹೆಸ್ಕಾಂ ಅಧೀಕ್ಷಕ ಎಂಜಿನಿಯರ್ ತಿಪ್ಪಣ್ಣ ಹಾಗೂ ನಾರಾಯಣ ಕಳ್ಳಿಮನಿ, ಅಧಿಕಾರಿಗಳಾದ ಸಿ.ಬಿ. ಹೊಸಮನಿ, ಶಿವರಾಜ ಸತ್ತಿಕರ, ವಿ.ಎಸ್. ಮರಿಗೌಡರ, ಸುರೇಶ ಆವಟಿ, ಆನಂದ ಸುಮಾಕರ, ಮಂಜುನಾಥ ಕೆ., ಸಾಗರ ಗಣೇಶಗುಡಿ, ಕೃಷ್ಣ ಕಲ್ಲೇರ, ಎ.ಡಿ. ಸೋಮಾಪುರ, ಪ್ರದೀಪ ಗುಡ್ಡದ, ಎಸ್.ಬಿ. ಮೂಲಿಮನಿ, ಎಂ.ಆರ್. ಸುಂಕದ, ಮಲ್ಲಿಕಾರ್ಜುನ, ಕೆ.ಚಾಮರಾಜ, ಎಚ್.ಡಿ. ಪ್ರಕಾಶ, ಎಂ.ಬಿ. ಕಾಕಸೆ, ಮಲ್ಲೇಶ ಒಗ್ಗಣ್ಣನವರ ಈ ಸಂದರ್ಭದಲ್ಲಿದ್ದರು.