- ಪ್ರಿಯಾಂಕ್, ಪ್ರಸಾದ ಅಬ್ಬಯ್ಯಗೂ ಸಂಪುಟದಲ್ಲಿ ಅವಕಾಶಕ್ಕೆ ಛಲವಾದಿ ಮಹಾಸಭಾ ಆಗ್ರಹ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯ ಸರ್ಕಾರದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಡಾ. ಜಿ.ಪರಮೇಶ್ವರ್‌ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ, ಡಾ. ಎಚ್.ಸಿ. ಮಹದೇವಪ್ಪ ಅವರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡುವಂತೆ ಜಿಲ್ಲಾ ಛಲವಾದಿ ಮಹಾಸಭಾ ಎಐಸಿಸಿ ವರಿಷ್ಠರಿಗೆ ಒತ್ತಾಯಿಸಿದೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾ ಜಿಲ್ಲಾಧ್ಯಕ್ಷ, ನಿವೃತ್ತ ಪೊಲೀಸ್ ಅಧೀಕ್ಷಕ ಎನ್.ರುದ್ರಮುನಿ, ಸಿದ್ದರಾಮಯ್ಯ ಅವಧಿಯಲ್ಲಿ ಡಾ. ಜಿ.ಪರಮೇಶ್ವರ, ಡಾ. ಎಚ್.ಸಿ. ಮಹದೇವಪ್ಪ ತಮ್ಮ ಇಲಾಖೆಗಳಲ್ಲಿ ಅತ್ಯಂತ ದಕ್ಷತೆಯಿಂದ ಅತ್ಯುತ್ತಮ ಆಡಳಿತ ನೀಡಿದ್ದಾರೆ. ಇನ್ನೂ ಪರಿಣಾಮಕಾರಿಯಗಿ ಕೆಲಸ ಮಾಡಲು ಅನುವು ಮಾಡಿಕೊಡಬೇಕು ಎಂದರು.

ಸಮುದಾಯದ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಡಾ.ಪರಮೇಶ್ವರ, ಡಾ.ಮಹದೇವಪ್ಪ ಈ ಇಬ್ಬರೂ ನಾಯಕರ ಅವಶ್ಯಕತೆ ಸಮಾಜಕ್ಕೆ ಹೆಚ್ಚಾಗಿದೆ. ಸಮಾಜದ ಸಮಗ್ರ ಅಭಿವೃದ್ಧಿಯ ಹಿತದೃಷ್ಟಿಯಿಂದ ಇಬ್ಬರೂ ಡಿ.ಕೆ. ಶಿವಕುಮಾರ ನೇತೃತ್ವದ ಸಂಪುಟದಲ್ಲಿ ಇರಬೇಕಾಗಿರುವುದು ಅತ್ಯಂತ ಅಗತ್ಯವಾಗಿದೆ. ಡಾ.ಪರಮೇಶ್ವರ ಅವರನ್ನು ಉಪ ಮುಖ್ಯಮಂತ್ರಿ ಹಾಗೂ ಡಾ.ಮಹದೇವಪ್ಪ ಅವರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಲಿ ಎಂದು ಆಗ್ರಹಿಸಿದರು.


ಛಲವಾದಿ ಸಮುದಾಯದ ಭಾವನೆಗಳು ಹಾಗೂ ಡಾ.ಪರಮೇಶ್ವರ, ಡಾ.ಮಹದೇವಪ್ಪ ಸೇವೆ, ಹಿರಿತನ, ಅರ್ಹತೆಯನ್ನು ಪರಿಗಣಿಸಿ ಎಐಸಿಸಿ ಸೂಕ್ತ ಸ್ಥಾನಮಾನ, ಅ‍ವಕಾಶ ನೀಡಬೇಕು. ಡಾ.ಪರಮೇಶ್ವರ ಅವರನ್ನು ಉಪ ಮುಖ್ಯಮಂತ್ರಿಯಾಗಿ, ಡಾ.ಮಹದೇವಪ್ಪ ಅವರಿಗೆ ಸಂಪುಟ ದರ್ಜೆ ಸಚಿವರಾಗಿ ಮಾಡಬೇಕು. ಪ್ರಿಯಾಂಕ ಖರ್ಗೆ, ಪ್ರಸಾದ್ ಅಬ್ಬಯ್ಯಗ ಸಚಿವರಾಗಿ ಮಾಡಬೇಕು ಎಂದು ಒತ್ತಾಯಿಸಿದರು.

ಮಹಾಸಭಾದ ಗೌರವಾಧ್ಯಕ್ಷ ಎಸ್.ಶೇಖರಪ್ಪ, ಕಾರ್ಯಾಧ್ಯಕ್ಷ ಟಿ.ಎಸ್.ರಾಮಯ್ಯ, ಪ್ರಧಾನ ಕಾರ್ಯದರ್ಶಿ ಎ.ಡಿ. ಕೊಟ್ರಬಸಪ್ಪ, ಡಾ.ಜಗನ್ನಾಥ, ಸಾರಥಿ ಬಸವರಾಜ, ಎನ್.ಸಿ. ಓಂಕಾರಪ್ಪ, ಎಚ್.ಗಿರೀಶ, ಹಾಲೇಶ ಬಸವನಾಳು, ಮಧುಸೂಧನ ಹಾಗೂ ಜಯಣ್ಣ ಇದ್ದರು.

- - -

-31ಕೆಡಿವಿಜಿ6: ದಾವಣಗೆರೆಯಲ್ಲಿ ಭಾನುವಾರ ಜಿಲ್ಲಾ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಎನ್.ರುದ್ರಮುನಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.