ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಡಿ.ಕೆ.ಶಿವಕುಮಾರ ನಾಯಕತ್ವದ ಸರ್ಕಾರದಲ್ಲಿ ಹಿರಿಯ ನಾಯಕ, ದಾವಣಗೆರೆ ಉತ್ತರ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ್‌ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಎಸ್‌.ಎಸ್‌. ಮಲ್ಲಿಕಾರ್ಜುನ ಅಭಿಮಾನಿ ಬಳಗದ ಮುಖಂಡ, ಕನ್ನಡಪರ ಹಿರಿಯ ಹೋರಾಟಗಾರ ನಾಗೇಂದ್ರ ಬಂಡೀಕರ್ ಒತ್ತಾಯಿಸಿದ್ದಾರೆ.

- ಜನಪರ, ಅಭಿವೃದ್ಧಿಪರ, ದೂರದೃಷ್ಟಿ ನಾಯಕತ್ವದ ಮಲ್ಲಿಕಾರ್ಜುನ್‌ಗೆ ಅವಕಾಶ ನೀಡಲು ಬಂಡೀಕರ್ ಆಗ್ರಹ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಡಿ.ಕೆ.ಶಿವಕುಮಾರ ನಾಯಕತ್ವದ ಸರ್ಕಾರದಲ್ಲಿ ಹಿರಿಯ ನಾಯಕ, ದಾವಣಗೆರೆ ಉತ್ತರ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ್‌ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಎಸ್‌.ಎಸ್‌. ಮಲ್ಲಿಕಾರ್ಜುನ ಅಭಿಮಾನಿ ಬಳಗದ ಮುಖಂಡ, ಕನ್ನಡಪರ ಹಿರಿಯ ಹೋರಾಟಗಾರ ನಾಗೇಂದ್ರ ಬಂಡೀಕರ್ ಒತ್ತಾಯಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಕ್ಷೇತ್ರದಿಂದ 4 ಸಲ ಸಚಿವರಾಗಿ, ಮೂರು ಸಲ ಸಚಿವರಾಗಿ, ಇಡೀ ದೇಶದಲ್ಲೇ ದಾಖಲೆ ಆಶ್ರಯ ಮನೆಗಳ ನಿರ್ಮಿಸಿ, ಸೂರುರಹಿತ ಕುಟುಂಬಗಳಿಗೆ ಹಂಚಿಕೆ ಮಾಡುವ ಮೂಲಕ ಎಸ್ಸೆಸ್ಸೆಂ ಐತಿಹಾಸಿಕ ದಾಖಲೆಗೆ ಕಾರಣರಾಗಿದ್ದಾರೆ ಎಂದರು.

ಮಧ್ಯ ಕರ್ನಾಟಕದ ದಾವಣಗೆರೆಗೆ ಹೈಟೆಕ್ ಸ್ಪರ್ಶ ನೀಡಿ, ಮಾದರಿ ನಗರವಾಗಿ ರೂಪಿಸಲು ಅನೇಕ ಯೋಜನೆ, ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ಅವರ ದೂರದೃಷ್ಟಿ, ಪರಿಶ್ರಮದಿಂದ ಅವೆಲ್ಲಾ ಈಗ ಕಾರ್ಯರೂಪಕ್ಕೆ ಬರುತ್ತಿವೆ. ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಡಿ.ಕೆ.ಶಿವಕುಮಾರ ನಾಯಕತ್ವದಲ್ಲಿ ಸರ್ಕಾರ ಬರಲಿದೆ. ಇಂತಹ ಜನಪರ, ಅಭಿವೃದ್ಧಿ ಪರ, ದೂರದೃಷ್ಟಿಯ ಎಸ್‌.ಎಸ್‌. ಮಲ್ಲಿಕಾರ್ಜುನ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ಎಸ್‌.ಎಸ್‌. ಮಲ್ಲಿಕಾರ್ಜುನ ಉಪ ಮುಖ್ಯಮಂತ್ರಿಯಾದರೆ ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಬಲವರ್ಧನೆಗೂ ಸಹಾಯಕವಾಗುತ್ತದೆ. ಸರ್ಕಾರದ ಆಶಯದಂತೆ ಸಾರ್ವಜನಿಕರಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದಕ್ಕೂ ಸಹಕಾರಿ ಆಗುತ್ತದೆ. ಸಂಘಟನೆ ಮೂಲಕ ಪಕ್ಷಕ್ಕೆ ಮತ್ತಷ್ಟು ಚೈತನ್ಯವನ್ನೂ ತುಂಬಿದಂತಾಗುತ್ತದೆ. ಎಲ್ಲ ಜಾತಿ, ಧರ್ಮೀಯರನ್ನು ಒಟ್ಟೊಟ್ಟಿಗೆ ಕೊಂಡೊಯ್ಯುವ ಎಸ್ಸೆಸ್ಸೆಂ ಸಾಮರ್ಥ್ಯಕ್ಕೆ ತಕ್ಕಂತೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿ, ಹೈಕಮಾಂಡ್ ಸ್ಪಂದಿಸಲಿ ಎಂದು ತಿಳಿಸಿದರು.

ಅನೇಕ ಸಂದರ್ಭಗಳಲ್ಲಿ ಕಾಂಗ್ರೆಸ್ ಪಕ್ಷದ ಕಷ್ಟ ಕಾಲದಲ್ಲಿ ಸರ್ವ ಜನಾಂಗದ ಹಾಗೂ ಯುವಜನರ ಸಂಘಟನೆ ಮೂಲಕ ಪಕ್ಷಕ್ಕೆ ಚೈತನ್ಯ ತುಂಬಿದ, ಕಾಂಗ್ರೆಸ್ ಪಕ್ಷದ ಎಲ್ಲ ಸಭೆ, ಸಮಾರಂಭ, ಕಾರ್ಯಕ್ರಮಗಳ ನೇತೃತ್ವ ವಹಿಸಿ, ದಾವಣಗೆರೆಯಲ್ಲಿ ಅತ್ಯಂತ ಯಶಸ್ವಿಯಾಗಿ, ಐತಿಹಾಸಿಕವಾಗಿ ಯಶಸ್ವಿಯಾಗುವಂತೆ ಎಸ್ಸೆಸ್ಸೆಂ ಮುತುವರ್ಜಿ ವಹಿಸಿದ್ದಾರೆ. ಅವರ ಬದ್ಧತೆ, ಕಾಳಜಿ, ಪಕ್ಷನಿಷ್ಠೆಯನ್ನು ಗುರುತಿಸಿ, ಎಐಸಿಸಿ, ಕೆಪಿಸಿಸಿ ನಾಯಕರು ಉಪ ಮುಖ್ಯಮಂತ್ರಿ ಮಾಡಲಿ ಎಂದು ಒತ್ತಾಯಿಸಿದರು.

ಯುವ ಮುಖಂಡ ಕೇರಂ ವಿ.ಗಣೇಶ ಮಾತನಾಡಿ, ಸರ್ವಧರ್ಮೀಯರನ್ನು ಸಮಾನವಾಗಿ ಕಾಣುವ, ಎಲ್ಲರನ್ನೂ ಜೊತೆ ಜೊತೆಯಾಗಿ ಕೊಂಡೊಯ್ಯುವ ದಾವಣಗೆರೆ ಉತ್ತರ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಉಪ ಮುಖ್ಯಮಂತ್ರಿಯಾಗಿ ಮಾಡಬೇಕು. ಎಸ್ಸೆಸ್ಸೆಂ ಉಪ ಮುಖ್ಯಮಂತ್ರಿಯಾಗಲೆಂದು ಪ್ರಾರ್ಥಿಸಿ ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲೆ ವಿಶೇಷ ಪೂಜೆ ಸಲ್ಲಿಸಿ, 101 ತೆಂಗಿನಕಾಯಿ ಒಡೆಯುವ ಮೂಲಕ ಪ್ರಾರ್ಥಿಸಲಾಗುವುದು ಎಂದರು.

ಮೊದಲ ಪಟ್ಟಿಯಲ್ಲೇ ಎಸ್‌.ಎಸ್‌. ಮಲ್ಲಿಕಾರ್ಜುನ ಅವರಿಗೆ ಸಂಪುಟದಲ್ಲಿ ಪ್ರಮುಖ ಸಚಿವರಾಗಿ ಮಾಡಿ, ಉಪ ಮುಖ್ಯಮಂತ್ರಿ ಸ್ಥಾನವನ್ನೂ ನೀಡಬೇಕು. ಹಿರಿಯ ನಾಯಕರಾಗಿದ್ದ ದಿವಂಗತ ಶಾಮನೂರು ಶಿವಶಂಕಪ್ಪ ಜೊತೆ ಮಲ್ಲಿಕಾರ್ಜುನ ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದಾರೆ. ಶಾಮನೂರು ಶಿವಶಂಕರಪ್ಪನವರು ಮುಖ್ಯಮಂತ್ರಿ ಆಗುವ ಅರ್ಹತೆ ಇದ್ದರೂ ಸ್ಥಾನಮಾನ ಸಿಗಲಿಲ್ಲ. ಈಗ ಮಧ್ಯ ಕರ್ನಾಟಕದಿಂದ ಎಸ್ಸೆಸ್ಸೆಂಗೆ ಡಿಸಿಎಂ ಮಾಡಿ, ಕಾಂಗ್ರೆಸ್ ಹೈಕಮಾಂಡ್ ಸ್ಪಂದಿಸಲಿ ಎಂದು ಆಗ್ರಹಿಸಿದರು.

ಪಕ್ಷದ ಮುಖಂಡಲಾದ ಕೆ.ಎಚ್. ಚೈತನ್ಯಕುಮಾರ ಮೇಸ್ತ್ರಿ, ಗೋಣೆಪ್ಪ, ಶಿವಮೂರ್ತಿ, ಬಿ.ವಿ.ರಾಜಶೇಖರ, ಎಚ್.ನಾಗರಾಜ, ಜಿ.ಮಂಜಮ್ಮ, ಮಹದೇವಮ್ಮ, ಭಾಸ್ಕರ, ಅಕ್ಬರ್ ಬಾಷಾ, ಎಸ್.ಎಂ.ಸುರೇಶ ಇತರರು ಇದ್ದರು.

- - -

-31ಕೆಡಿವಿಜಿ1: ದಾವಣಗೆರೆಯಲ್ಲಿ ಭಾನುವಾರ ಎಸ್.ಎಸ್‌. ಮಲ್ಲಿಕಾರ್ಜುನ ಅಭಿಮಾನಿ ಬಳಗದ ನಾಗೇಂದ್ರ ಬಂಡೀಕರ್, ಕೇರಂ ವಿ.ಗಣೇಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.