ಈ ವರ್ಷ ಮುಂಗಾರು ಹಂಗಾಮು ಅವಧಿಗಿಂತ ಮೊದಲು ಆರಂಭವಾಗಿದ್ದು, ರೈತರಿಗೆ ಅವಶ್ಯವಾಗಿರುವ ಬಿತ್ತನೆ ಬೀಜ ಮತ್ತು ಗೊಬ್ಬರ ಕೊರತೆ ಆಗದಂತೆ ತಾಲೂಕು ಕೃಷಿ ಅಧಿಕಾರಿಗಳಿಗೆ ತಾಕೀತು ಮಾಡಬೇಕು.

ಲಕ್ಷ್ಮೇಶ್ವರ: ತಾಲೂಕಿನಲ್ಲಿ ಉತ್ತಮ ಮುಂಗಾರು ಹಂಗಾಮಿನ ಮಳೆಯಾಗಿದ್ದು, ರೈತರಿಗೆ ಅಗತ್ಯ ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ವಿಳಂಬ ಮಾಡದೆ ರಿಯಾಯಿತಿ ದರದಲ್ಲಿ ಸರಬರಾಜು ಮಾಡಬೇಕು ಎಂದು ಜಯಕರ್ನಾಟಕ ಜನಪರ ವೇದಿಕೆಯ ವತಿಯಿಂದ ತಹಸೀಲ್ದಾರ್ ಧನಂಜಯ ಎಂ. ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಸಂಘಟನೆಯ ರಾಜ್ಯ ಉಪಾಧ್ಯಕ್ಷ ಹಾಲಪ್ಪ ವರವಿ ಮಾತನಾಡಿ, ಈ ವರ್ಷ ಮುಂಗಾರು ಹಂಗಾಮು ಅವಧಿಗಿಂತ ಮೊದಲು ಆರಂಭವಾಗಿದ್ದು, ರೈತರಿಗೆ ಅವಶ್ಯವಾಗಿರುವ ಬಿತ್ತನೆ ಬೀಜ ಮತ್ತು ಗೊಬ್ಬರ ಕೊರತೆ ಆಗದಂತೆ ತಾಲೂಕು ಕೃಷಿ ಅಧಿಕಾರಿಗಳಿಗೆ ತಾಕೀತು ಮಾಡಬೇಕು. ಅವುಗಳನ್ನು ರೈತರಿಗೆ ಪೂರೈಸಬೇಕು. ಯಾವುದೇ ಅವ್ಯವಹಾರ ನಡೆಯದೆ, ರಿಯಾಯಿತಿ ದರದಲ್ಲಿ ರೈತರಿಗೆ ಬೀಜ, ಗೊಬ್ಬರ ದೊರೆಯುವಂತೆ ಅನುಕೂಲ ಮಾಡಿಕೊಡಬೇಕು ಎಂದರು.ಮಾರುಕಟ್ಟೆಯಲ್ಲಿ ಗೊಬ್ಬರ ಮತ್ತು ಬೀಜ ಮಾರಾಟ ಮಾಡುವ ಅಂಗಡಿಯ ಮಾಲೀಕರು ಹೆಚ್ಚಿನ ದರದಲ್ಲಿ ಮಾರಾಟ ಮಾಡದಂತೆ ನಿಗಾ ವಹಿಸಬೇಕು ಹಾಗೂ ಎಚ್ಚರಿಕೆ ನೀಡಬೇಕೆಂದು ಆಗ್ರಹಿಸಿದರು.

ತಾಲೂಕು ಅಧ್ಯಕ್ಷ ಮೋಹನ ನಂದೆಣ್ಣವರ ಹಾಗೂ ಜಿಲ್ಲಾಧ್ಯಕ್ಷ ಸಣ್ಣಯಲ್ಲಪ್ಪ ವಳಗೇರಿ ಮಾತನಾಡಿ, ಯಾವುದೇ ಬಿತ್ತನೆ ಬೀಜ ಕಳಪೆ ಗುಣಮಟ್ಟದಿಂದ ಕೂಡಿರಬಾರದು. ಅಕ್ರಮವಾಗಿ ಬೇರೆ ರಾಜ್ಯದಿಂದ ಬರುವ ಕಳಪೆ ಬೀಜಗಳ ಬಗ್ಗೆ ನಿಗಾ ಇಡಬೇಕು. ಬೀಜ ಗೊಬ್ಬರಗಳ ಕೃತಕ ಅಭಾವ ಸೃಷ್ಟಿ ಮಾಡಿ, ರೈತರಿಗೆ ತೊಂದರೆ ಆಗದಂತೆ ಗೊಬ್ಬರ ಮತ್ತು ಬೀಜದ ಅಂಗಡಿಯ ಮಾಲೀಕರಿಗೆ ಮನದಟ್ಟು ಮಾಡಬೇಕು. ಕೃತಕ ಅಭಾವ ಸೃಷ್ಟಿಸುವ ಯಾವುದೇ ಗೊಬ್ಬರ, ಬಿತ್ತನೆ ಬೀಜ, ಕೀಟನಾಶಕ ಮಾರಾಟಗಾರರ ಮೇಲೆ ಮುಲಾಜಿಲ್ಲದೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು.

ಈ ಸಂಬಂಧ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಮತ್ತು ಉಪನಿರ್ದೇಶಕರಿಗೆ ಸೂಕ್ತ ನಿರ್ದೇಶನ ನೀಡಬೇಕು. ಜತೆಗೆ ಎಫ್‌ಐಡಿ ಮೇಲೆ ರಸಗೊಬ್ಬರ ಕೊಡುವುದನ್ನು ಕೈಬಿಡಬೇಕು ಎಂದರು.

ಸಂತೋಷ ರಾಠೋಡ, ಮಂಜುನಾಥ ಮೂಲಿಮನಿ, ಕುಮಾರ ಬೆಟಗೇರಿ, ಶೇಖಪ್ಪ ತಳವಾರ, ಸುಭಾಷ ಲಮಾಣಿ, ಶಿವಾನಂದ ಕಡೆಮನಿ, ಚಂದ್ರು ಬಸಪ್ಪನ್ನವರ, ಹನುಮಂತ ತುಂಬಣ್ಣನವರ, ಶಿವಾನಂದ ಶೀರನಹಳ್ಳಿ, ಶರಣಪ್ಪಗೌಡ ಪಾಟೀಲ್, ನಿಂಗಪ್ಪ ರಗಟಿ, ವೆಂಕಟೇಶ ಶಾಂತಗೇರಿ, ಶ್ರೀಕಾಂತ ಲಮಾಣಿ, ಸಂಜು ಲಮಾಣಿ, ಮಂಜುನಾಥ ಲಮಾಣಿ, ಅಜಯ ಲಮಾಣಿ ಇದ್ದರು.