ಶಿರಸಿಯಲ್ಲಿ ಅನಧಿಕೃತ ಬೀದಿಬದಿ ಅಂಗಡಿಗಳ ತೆರವಿಗೆ ಆಗ್ರಹ

| Published : Oct 05 2024, 01:30 AM IST

ಶಿರಸಿಯಲ್ಲಿ ಅನಧಿಕೃತ ಬೀದಿಬದಿ ಅಂಗಡಿಗಳ ತೆರವಿಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸಿ, ಕಾಯಂ ಅಂಗಡಿಕಾರರಿಗೆ ಅನುಕೂಲ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಶಿರಸಿ: ನಗರ ವ್ಯಾಪ್ತಿಯಲ್ಲಿ ಅನಧಿಕೃತ ಬೀದಿಬದಿ ಅಂಗಡಿಗಳು ಹೆಚ್ಚುತ್ತಿದೆ. ನಗರಸಭೆಗ ಬಾಡಿಗೆ ಸಂದಾಯ ಮಾಡುತ್ತಿರುವ ವ್ಯಾಪಾರಸ್ಥರಿಗೆ ವ್ಯಾಪಾರವಿಲ್ಲದೇ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ, ಅಂಗಡಿಕಾರರು ನಗರಸಭೆಯ ಪೌರಾಯುಕ್ತರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.ನಗರದ ಬಿಡ್ಕಿಬೈಲ್, ಶಿವಾಜಿ ಚೌಕ, ದೇವಿಕೆರೆ, ಕೋಟೆಕೆರೆ, ಪಂಡಿತ ಸಾರ್ವಜನಿಕ ಆಸ್ಪತ್ರೆ ಎದುರಿನ ರಸ್ತೆ ಸೇರಿದಂತೆ ನಗರ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಬೀದಿಬದಿ ಗೂಡಂಗಡಿಗಳು ಹೆಚ್ಚಾಗುತ್ತಿದೆ. ಅವರಿಗೆ ಬಾಡಿಗೆ ಸಂದಾಯ ಮಾಡುವುದು ಇಲ್ಲವಾದ್ದರಿಂದ ಕಡಿಮೆ ದರಲ್ಲಿ ತಿಂಡಿಗಳನ್ನು ಮಾರಾಟ ಮಾಡುವುದರಿಂದ ಗ್ರಾಹಕರು ಅಲ್ಲಿಗೆ ತೆರಳುತ್ತಾರೆ.

ನಾವು ನಗರಸಭೆಗೆ ಸಾವಿರಾರು ರು. ಬಾಡಿಗೆ ಸಂದಾಯ ಮಾಡಿ, ಅಂಗಡಿಗಳನ್ನು ನಡೆಸುತ್ತಿದ್ದೇವೆ. ಗ್ರಾಹಕರು ನಮ್ಮ ಅಂಗಡಿಗೆ ಬರುತ್ತಿಲ್ಲ. ಇದರಿಂದ ವ್ಯಾಪಾರವಿಲ್ಲದೇ ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಗಿದೆ. ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸಿ, ಕಾಯಂ ಅಂಗಡಿಕಾರರಿಗೆ ಅನುಕೂಲ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಪೌರಾಯುಕ್ತ ಕಾಂತರಾಜು ಮನವಿ ಸ್ವೀಕರಿಸಿ, ಅಧ್ಯಕ್ಷರ ಗಮನಕ್ಕೆ ತಂದು ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ, ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.ಮನವಿ ಸಲ್ಲಿಸುವ ವೇಳೆ ಪ್ರದೀಪ ನಾಯ್ಕ, ನಾರಾಯಣ ದೇವಡಿಗ, ವಿನಯ ಶಾನಭಾಗ, ಮಂಜುನಾಥ ಪೂಜಾರಿ, ನಾರಾಯಣ ನಾಯ್ಕ ಮತ್ತಿತರರು ಇದ್ದರು.ಒಳ ಮೀಸಲಾತಿ ಜಾರಿಗೆಗಾಗಿ ಹೋರಾಟ: ಸಂಗಮೇಶ್ವರ

ಕಾರವಾರ: ನ್ಯಾಯಾಲಯದ ಆದೇಶದಂತೆ ಪರಿಶಿಷ್ಟ ಜಾತಿ, ಪಂಗಡದಲ್ಲಿ ಒಳಮೀಸಲಾತಿ ಜಾರಿ ಮಾಡಬೇಕು. ಆದರೆ, ಇದು ವರೆಗೂ ಆಗಿಲ್ಲ. ಹೀಗಾಗಿ ಅ. ೧೬ರಂದು ಕಾರವಾರದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದೇವೆ ಎಂದು ಒಳ ಮೀಸಲಾತಿ ಹೋರಾಟ ಸಮಿತಿಯ ಬಸವರಾಜ ಸಂಗಮೇಶ್ವರ ತಿಳಿಸಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳ ಮೀಸಲಾತಿ ಜಾರಿಗೆ ಸಮಿತಿ ರಚಿಸಲು ಸರ್ಕಾರ ಮುಂದಾಗಿದೆ. ಇದು ಕಾಲಹರಣ ಮಾಡುವ ನಿರ್ಧಾರವಾಗಿದೆ. ಈ ನಿಟ್ಟಿನಲ್ಲಿ ಹಲವು ಸಂಘಟನೆಗಳು ಎಲ್ಲರೂ ಒಗ್ಗಟ್ಟಾಗಿ ರಾಜ್ಯಾದ್ಯಂತ ಹೋರಾಟ ಮಾಡಲು ನಿರ್ಧರಿಸಿದ್ದೇವೆ ಎಂದರು.ಹಲವರು ಒಳ ಮೀಸಲಾತಿ ಜಾರಿಗೆ ಹೋರಾಟ ಮಾಡಿದ ಪರಿಣಾಮ ನ್ಯಾಯಾಲಯ ಆದೇಶ ನೀಡಿದೆ. ಒಳ ಮೀಸಲಾತಿ ಇಲ್ಲದ ಕಾರಣ ರಾಜಕೀಯವಾಗಿ, ಶೈಕ್ಷಣಿಕವಾಗಿ ಕೆಲ ಸಮುದಾಯ ಹಿಂದೆ ಬಿದ್ದಿವೆ. ಇದು ಜಾರಿಗೆಯಾದರೆ ದಲಿತ ಸಮುದಾಯವರು ಇನ್ನಷ್ಟು ಬೆಳೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಿಸಿದರು,

ದಲಿತ ಮುಖಂಡರಾದ ಎಲಿಷಾ ಎಲಕಪಾಟಿ, ಚಿದಾನಂದ ಹರಿಜನ, ಶರೀಫ್ ಹನುಮಂತಪ್ಪ, ಕಲ್ಲಪ್ಪ ಕಾದ್ರೋಳ್ಳಿ ಮೊದಲಾದವರು ಇದ್ದರು.