ಅರಣ್ಯ ಇಲಾಖೆಯ ಸಸಿಗಳಿಗೆ ಡಿಮಾಂಡಪೋ ಡಿಮಾಂಡ್‌..!

| Published : Jun 24 2024, 01:37 AM IST

ಸಾರಾಂಶ

ಈ ಬಾರಿ ಮೇ ತಿಂಗಳ ಕೊನೆಗೆ ಮಳೆಯಾದ ಹಿನ್ನೆಲೆಯಲ್ಲಿ ರಿಯಾಯ್ತಿ ದರದಲ್ಲಿ ಒದಗಿಸುವ ಸಾಮಾನ್ಯ ಬೇವು, ಹೆಬ್ಬೇವು, ನೇರಳೆ, ಮಹಾಗನಿ, ಸಂಪಿಗೆ, ಮತ್ತಿ, ಹೊನ್ನೆ, ಸೀಸಂ, ಸಾಗವಾನಿ, ಕರಿಬೇವು, ಈಚಲು ಸೇರಿದಂತೆ ವಿವಿಧ ಸಸಿಗಳಿಗೆ ಡಿಮಾಂಡ್ ಬಂದಿದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಧಾರವಾಡ

ಸಾಮಾನ್ಯವಾಗಿ ಮಳೆಗಾಲ ಬಂದರೆ ಸಸಿ ನಡೆಲು ಎಲ್ಲರೂ ಮುಂದಾಗುತ್ತಾರೆ. ಮಳೆಗಾಲದಲ್ಲಿ ಸಸಿ ನೆಟ್ಟರೇ ಯಾವುದೇ ನೀರಿನ ನಿರ್ವಹಣೆ ಇಲ್ಲದೇ ಸಸಿಗಳು ಸಹಜವಾಗಿ ಬೆಳವಣಿಗೆಯಾಗಲಿವೆ ಎಂಬುದು ಲೆಕ್ಕಾಚಾರ. ಅಂತೆಯೇ ಇದೀಗ ಮಳೆಗಾಲದ ಹಿನ್ನೆಲೆಯಲ್ಲಿ ಹೊಲಗಳ ಬದುವು ಹಾಗೂ ಖಾಲಿ ಜಾಗಗಳಲ್ಲಿ ತರಹೇವಾರಿ ಜಾತಿಯ ಸಸಿಗಳನ್ನು ನೆಡಲು ಜನರು ಮುಂದಾಗಿದ್ದಾರೆ.

ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರು ಬರಗಾಲದ ಹಿನ್ನೆಲೆಯಲ್ಲಿ ರೈತರು, ಸಾರ್ವಜನಿಕರು ಸಸಿಗಳನ್ನು ನೆಡಲು ಮುಂದಾಗಿರಲಿಲ್ಲ. ನೆಟ್ಟ ಕೆಲ ಸಸಿಗಳು ಸಹ ನೀರಿನ ಕೊರತೆಯಿಂದ ಬೆಳೆಯಲು ಸಾಧ್ಯವಾಗಿರಲಿಲ್ಲ. ಈ ಬಾರಿ ಮೇ ತಿಂಗಳ ಕೊನೆಗೆ ಮಳೆಯಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ರಿಯಾಯ್ತಿ ದರದಲ್ಲಿ ಒದಗಿಸುವ ಸಾಮಾನ್ಯ ಬೇವು, ಹೆಬ್ಬೇವು, ನೇರಳೆ, ಮಹಾಗನಿ, ಸಂಪಿಗೆ, ಮತ್ತಿ, ಹೊನ್ನೆ, ಸೀಸಂ, ಸಾಗವಾನಿ, ಕರಿಬೇವು, ಈಚಲು ಸೇರಿದಂತೆ ವಿವಿಧ ಸಸಿಗಳಿಗೆ ಡಿಮಾಂಡ್ ಬಂದಿದೆ. ಆದರೆ, ಸಾರ್ವಜನಿಕರು ಕೇಳಿದಷ್ಟು ಸಸಿಗಳನ್ನು ನೀಡಲು ಅರಣ್ಯ ಇಲಾಖೆಗೆ ಆಗುತ್ತಿಲ್ಲ. ಧಾರವಾಡದ ಅರಣ್ಯ ಇಲಾಖೆ ನರ್ಸರಿಯಲ್ಲಿ ಸಾರ್ವಜನಿಕರಿಗೆ ರಿಯಾಯ್ತಿ ದರದಲ್ಲಿ ನೀಡುವ ಎಲ್ಲ ಸಸಿಗಳು ಈಗಾಗಲೇ ಮಾರಾಟವಾಗಿದ್ದು, ಸಸಿ ಕೇಳಲು ಬರುವ ಜನರು ಖಾಲಿ ಕೈಯಲ್ಲಿ ಹೋಗುವಂತಾಗಿದೆ.

ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ಕೇಂದ್ರಿಯ ನರ್ಸರಿ, ತಾಲೂಕಿನ ಹೊಲ್ತಿಕೋಟಿ ಹಾಗೂ ಹೊನ್ನಾಪುರದ ನರ್ಸರಿಗಳಲ್ಲಿ ಈ ವರ್ಷಕ್ಕಾಗಿ 45,000 ಸಸಿಗಳನ್ನು ಸಾರ್ವಜನಿಕರಿಗೆ ನೀಡಲು ಸಿದ್ಧಪಡಿಸಲಾಗಿತ್ತು. ಜೂನ್‌ ತಿಂಗಳ ಆರಂಭದಲ್ಲಿಯೇ ಅವುಗಳೆಲ್ಲ ಮಾರಾಟವಾಗಿವೆ. ಪ್ರಸ್ತುತ ಅರಣ್ಯಗಳಲ್ಲಿ ಹಾಗೂ ರಸ್ತೆ ಬದಿ ನೆಡಲು 60 ಸಾವಿರ ಸಸಿಗಳು ನರ್ಸರಿಗಳಲ್ಲಿದ್ದು, ಅವುಗಳನ್ನು ನೆಡಲು ಈಗಾಗಲೇ ಒಯ್ಯಲಾಗುತ್ತಿದೆ. ಸಂಘ-ಸಂಸ್ಥೆಗಳು, ಸರ್ಕಾರಿ ಇಲಾಖೆಗಳ ಮೂಲಕ ಈ ಸಸಿಗಳನ್ನು ವಿತರಣೆ ಮಾಡಿ ನೆಡಲು ಇಲಾಖೆ ಯೋಜಿಸಲಾಗಿದೆ.

ನಮಗೆ ನೀಡಿದ ಗುರಿಗೆ ಅನುಗುಣವಾಗಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ನೀಡಲು 45 ಸಾವಿರ ಸಸಿಗಳನ್ನು ಸಿದ್ಧಪಡಿಸಲಾಗಿತ್ತು. ಹೊಲಗಳಲ್ಲಿ ನೆಡುವ ಉದ್ದೇಶದಿಂದ ಮೇ ಹಾಗೂ ಜೂನ್ ಮೊದಲ ವಾರದಲ್ಲಿ ರೈತರು ಉತ್ಸಾಹದಿಂದ ಎಲ್ಲ ಸಸಿಗಳನ್ನು ಖರೀದಿಸಿ ನೆಟ್ಟಿದ್ದಾರೆ. ಉಳಿದಂತೆ ಅರಣ್ಯಗಳಲ್ಲಿ ಹಾಗೂ ರಸ್ತೆ ಬದಿ ನೆಡಲು 65 ಸಾವಿರ ಸಸಿಗಳನ್ನು ನರ್ಸರಿಗಳಲ್ಲಿ ಸಿದ್ಧಪಡಿಸಿ ಮಳೆ ಬಂದಂತೆ ಅವುಗಳನ್ನು ನೆಡಲಾಗುತ್ತಿದೆ. ವಿಶ್ವ ಪರಿಸರ ದಿನದ ನಿಮಿತ್ತ ಸರ್ಕಾರಿ ಇಲಾಖೆಗಳು, ಸಂಘ-ಸಂಸ್ಥೆಗಳು ಆಯೋಜಿಸುವ ಕಾರ್ಯಕ್ರಮಗಳಿಗೆ ಈ ಸಸಿಗಳನ್ನು ವಿತರಣೆ ಮಾಡಲಾಗುವುದು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ವಿಪರೀತ ಬೇಡಿಕೆ ಬಂದಿದ್ದು, ಈ ಬೇಡಿಕೆ ಅನ್ವಯ ಮುಂದಿನ ವರ್ಷ ಗುರಿಯನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದು ಅರಣ್ಯ ಇಲಾಖೆ ವಲಯ ಅಧಿಕಾರಿ ಪ್ರದೀಪ ಪವಾರ ಮಾಹಿತಿ ನೀಡಿದರು.