ಧಾರವಾಡ:

ಬಹುತೇಕ ಇಲಾಖೆಗಳಲ್ಲಿ ದಿವ್ಯಾಂಗ ನೌಕರರು ಹಲವಾರು ಸಮಸ್ಯೆ ಎದುರಿಸುತ್ತಿದ್ದು, ಸರ್ಕಾರಗಳು ಗಮನ ನೀಡುತ್ತಿಲ್ಲ. ಆದಷ್ಟೂ ಬೇಗ ನೌಕರರ ಬೇಡಿಕೆಗಳನ್ನು ಅನುಕಂಪದ ನೆಲೆಯಲ್ಲಿ ತಕ್ಷಣ ಈಡೇರಿಸಬೇಕೆಂದು ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಶಿವಾನಂದ ಖವಟಕೊಪ್ಪ ಆಗ್ರಹಿಸಿದ್ದಾರೆ.

ನಗರದಲ್ಲಿ ಜರುಗಿದ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ಜಿಲ್ಲಾ ಮತ್ತು ತಾಲೂಕು ಘಟಕಗಳ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ದಿವ್ಯಾಂಗ ನೌಕರರ ಪ್ರತಿ ಬೇಡಿಕೆಯನ್ನು ಅನುಕಂಪದ ನೆಲೆಯಲ್ಲಿ ಪರಿಗಣಿಸಿ ಶೀಘ್ರ ಪರಿಹಾರ ಒದಗಿಸಬೇಕು ಎಂದರು.

ಸಂಘದ ಗೌರವಾಧ್ಯಕ್ಷ ಎಚ್.ಪಿ. ಕಡ್ಲಿಮಟ್ಟಿ ಮಾತನಾಡಿ, ರಾಜ್ಯ ಸರ್ಕಾರ ದಿವ್ಯಾಂಗ ನೌಕರರಿಗೆ ನೀಡುತ್ತಿರುವ ಸಂಚಾರಿ ಭತ್ಯೆಯನ್ನು ಶಿಕ್ಷಕ ವೃಂದದ ವರಿಗೆ ನೀಡುತ್ತಿಲ್ಲ. ಸಂಚಾರಿ ಭತ್ಯೆ ಪಡೆಯುತ್ತಿರುವ ದಿವ್ಯಾಂಗ ನೌಕರರ ನಗರ ಭತ್ಯೆಯನ್ನು ಕಡಿತಗೊಳಿಸಲಾಗುತ್ತಿದೆ. ಆದರೆ, ಇತರೆ ನೌಕರರಿಗೆ ಎಲ್ಲ ಭತ್ಯೆಗಳ ಜತೆಗೆ ನಗರಭತ್ಯೆ ಸೇರಿಸಿ ವೇತನ ನೀಡಲಾಗುತ್ತಿದೆ. ಕೇವಲ ದಿವ್ಯಾಂಗ ನೌಕರರಿಗೆ ಮಾತ್ರ ತಾರತಮ್ಯ ಮಾಡಲಾಗುತ್ತಿದ್ದು, ಇದು ಅಂಗವಿಕಲರ ಹಕ್ಕುಗಳ ಅಧಿನಿಯಮದ ಸ್ಪಷ್ಟ ಉಲ್ಲಂಘನೆ. ಸರ್ಕಾರ ಈ ತಾರತಮ್ಯವನ್ನು ನಿವಾರಿಸಬೇಕೆಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಆರ್. ತಳವಾರ, ಸಹ ಕಾರ್ಯದರ್ಶಿ ಶಿವಾನಂದ ಸವಸುದ್ದಿ ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷ ಡಾ. ಶಿವಾನಂದ ಖವಟಕೊಪ್ಪ ಅವರನ್ನು ಇದೇ ವೇಳೆ ಗೌರವಿಸಲಾಯಿತು. ಸಂಘದ ಜಿಲ್ಲಾ ಕೋಶಾಧ್ಯಕ್ಷ ಸಂತೋಷ ಕರಮಳ್ಳವರ, ಎನ್.ಎಸ್. ಕಾಳಿಕೋಟಿಮಠ, ಅಶೋಕ ಕೋಟಳ್ಳಿ, ಶೀತಲ ಸಮಾಜೆ ಇದ್ದರು.