ಗಜೇಂದ್ರಗಡ: ಅಲ್ಪಸಂಖ್ಯಾತರ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಜುಮನ್ ಇಸ್ಲಾಂ ಕಮಿಟಿಯಿಂದ ಸೋಮವಾರ ತಹಸೀಲ್ದಾರ ಮೂಲಕ ಸಿಎಂಗೆ ಮನವಿ ನೀಡಿದರು.ಅಂಜುಮನ್ ಇಸ್ಲಾಂ ಕಮಿಟಿ ನಿರ್ದೇಶಕ ದಾವಲಸಾಬ ತಾಳಿಕೋಟಿ ಮಾತನಾಡಿ, ರಾಜ್ಯ ಸರ್ಕಾರ ಅಧಿಕಾರಕ್ಕೆ ಅಲ್ಪಸಂಖ್ಯಾತ ಸಮುದಾಯದ ಹಿತ ಕಾಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಚುನಾವಣೆಗೂ ಮುನ್ನ ನೀಡಿದ ಭರವಸೆಗಳು ಕೇವಲ ಭರವಸೆಗಳಾಗಿ ಉಳಿದಿವೆ. ಬಿಜೆಪಿ ಸರ್ಕಾರವು ರದ್ದು ಮಾಡಿದ್ದ ಮುಸಲ್ಮಾನರ ಶೇ.೪/ ೨ಬಿ ಮೀಸಲಾತಿಯನ್ನು ರಾಜ್ಯ ಸರ್ಕಾರ ಅದನ್ನು ರದ್ದುಪಡಿಸಿ ಯಾಥಾಪ್ರಕಾರವಾಗಿ ೨ಬಿ ಮೀಸಲಾತಿಯನ್ನು ಮರುಜಾರಿಗೆ ಮಾಡಲು ಹಿಂದೇಟು ಹಾಕುತ್ತಿದೆ ಎಂದು ದೂರಿದ ಅವರು, ಟಿಪ್ಪು ಸುಲ್ತಾನರ ಬಗ್ಗೆ, ಸಿಎಂ ಹಾಗೂ ಆಡಳಿತ ಪಕ್ಷದ ಸಚಿವರು ಅನೇಕ ಸಭೆ ಸಮಾರಂಭಗಳಲ್ಲಿ ಟಿಪ್ಪು ಸುಲ್ತಾನರ ಶೌರ್ಯ, ಪರಾಕ್ರಮ ಹಾಗೂ ಅವರ ದೇಶಪ್ರೇಮದ ಬಗ್ಗೆ, ಗಂಟೆಗಟ್ಟಲೇ ಭಾಷಣ ಮಾಡುತ್ತಾರೆ. ಸಾರ್ವಜನಿಕವಾಗಿ ಜಯಂತಿಯನ್ನು ಮಾಡಲು ಹೋದರೆ ಪರವಾನಗಿ ಹಾಗೂ ಜಯಂತಿಗೆ ಅವಕಾಶವನ್ನು ಕೊಡದೆ ಇರುವುದು ನಿಜಕ್ಕೂ ರಾಜ್ಯ ಸರ್ಕಾರದ ದ್ವಂದ ನೀತಿಗೆ ಕೈಗನ್ನಡಿಯಾಗಿದೆ ಎಂದರು.ಅಂಜುಮನ್ ಇಸ್ಲಾಂ ಕಮಿಟಿ ಕಾರ್ಯದರ್ಶಿ ಫಯಾಜ್ ತೋಟದ ಮಾತನಾಡಿ, ಒಂದಷ್ಟು ಪ್ರತಿರೋಧ ಮುಸಲ್ಮಾನರಿಂದ ಎದುರಿಸಿದ ರಾಜ್ಯ ಸರ್ಕಾರ ಹಿಜಾಬ್ ನಿರ್ಬಂಧವನ್ನು ತೆರವುಗೊಳಿಸಿದೆ. ಆದರೆ ನೈಜವಾಗಿ ಮುಸ್ಲಿಮರಿಗೆ ಸೀಗಬೇಕಾದ ೨ಬಿ ಮೀಸಲಾತಿ ರದ್ದತಿ, ವಿಶೇಷ ಮತದಾರರ ಪರಿಷ್ಕರಣೆ(ಎಸ್‌ಐಆರ್) ರಾಜ್ಯದಲ್ಲಿ ವಿರೋಧ ವ್ಯಕ್ತಪಡಿಸುವ ಬದಲಾಗಿ ಅದನ್ನು ಜಾರಿಗೆ ತರಲು ಮುಂದಾಗಿದೆ ಎಂದರು.ಅಂಜುಮನ್ ಇಸ್ಲಾಂ ಕಮಿಟಿ ಚೇರ್ಮನ್ ಹಸನಸಾಬ ತಟಗಾರ ಮಾತನಾಡಿದರು. ತಹಸೀಲ್ದಾರರ ಕಿರಣಕುಮಾರ ಕುಲಕರ್ಣಿ ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.ನಾಸೀರ ಅಲಿ ಸುರಪುರ, ಎ.ಕೆ. ಕಾತರಕಿ, ಅಬ್ಬಾಸಲಿ ನಿಶಾನದಾರ, ಫಕ್ರುಸಾಬ ಕಾತರಕಿ, ಮಾಬುಸಾಬ ಸುರಪುರ, ರಜಾಕ ಡಾಲಾಯತ, ಖಾಸಿಂಸಾಬಅಲಿ ದಿಂಡವಾಡ ಇತರರು ಇದ್ದರು.