ಧಾರವಾಡ:

ರಾಜ್ಯ ಸರ್ಕಾರವು 2026ರ ಮೇ 22ರಂದು ಕನಿಷ್ಠ ವೇತನ ಪರಿಷ್ಕರಿಸಿ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಜಿಲ್ಲೆಯಲ್ಲಿ ಅದೇ ದಿನದಿಂದ ಎಲ್ಲ ಇಲಾಖೆಗಳಲ್ಲಿ ಜಾರಿ ಮಾಡಲು ಒತ್ತಾಯಿಸಿ, ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹೋರಾಟಗಾರ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ, ಸರ್ಕಾರವು ಈಗ ವೇತನ ಸಂಹಿತೆ ಚೌಕಟ್ಟಿನಲ್ಲಿ ಎಲ್ಲ ನಿಗದಿತ ಉದ್ಯೋಗಗಳಿಗೂ ಅನ್ವಯವಾಗುವಂತೆ ಏಕರೂಪದ ಕೌಶಲ್ಯಾಧಾರಿತ ವೇತನ ಶ್ರೇಣಿಯನ್ನು ಅಳವಡಿಸಿಕೊಂಡಿದೆ. ಜಿಲ್ಲಾಧಿಕಾರಿ ಕೂಡಲೇ ಈ ಆದೇಶವನ್ನು ಜಿಲ್ಲಾದ್ಯಂತ ಜಾರಿಗೊಳಿಸಲು ಕಾರ್ಮಿಕ ಇಲಾಖೆಗೆ ನಿರ್ದೇಶನ ನೀಡಿ ದುಡಿಯುವ ಕಾರ್ಮಿಕರಿಗೆಲ್ಲಗೂ ಪರಿಷ್ಕೃತ ವೇತನ ಖಾತ್ರಿ ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಉಪಾಧ್ಯಕ್ಷರಾದ ಭುವನಾ ಮಾತನಾಡಿ, ಶಾಲಾ-ಕಾಲೇಜುಗಳು ಈಗಾಗಲೇ ಪ್ರಾರಂಭವಾಗಿದ್ದು, ಅದರಂತೆಯೇ ಹಾಸ್ಟೆಲ್‌ಗಳೂ ಹಿರಿಯ ವಿದ್ಯಾರ್ಥಿಗಳಿಗೆ ಈಗಾಗಲೇ ಕಾರ್ಯನಿರ್ವಹಣೆ ಪ್ರಾರಂಭ ಮಾಡಿವೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಸಂಖ್ಯೆ ಹೆಚ್ಚಿದ ಮೇಲೆ ಕೆಲಸಕ್ಕೆ ತೆಗೆದುಕೊಳ್ಳಲಾಗುವುದು ಎಂಬ ಕಾರಣವೊಡ್ಡಿ ಗುತ್ತಿಗೆ ಕಾರ್ಮಿಕರಿಗೆ ಕೆಲಸ ನಿರಾಕರಣೆ ಮಾಡಲಾಗುತ್ತಿದೆ. ಅದರಂತೆಯೇ ಪರೀಕ್ಷಾ ನಂತರ ಮತ್ತು ಮಧ್ಯಂತರ ರಜೆ ಸಮಯದಲ್ಲಿ ಮತ್ತದೇ ಕಾರಣವೊಡ್ಡಿ ಮತ್ತೆ ಕೆಲಸ ನಿರಾಕರಣೆ ಮಾಡಲಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಿಂದ ಆಗಮಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಶೈನಾಜ್ ಹುಡದಮನಿ, ಗಂಗಮ್ಮ ನಾಗನಾಯಕ, ಕುಸುಮ ವೀರಕರ್, ರತ್ನಾ ಧಾರವಾಡ, ನಿರ್ಮಲಾ ಚಲವಾದಿ, ಸುಧಾ ಸಿಂದಗಿ, ಲಕ್ಷ್ಮಿ ಮೇದಾರ್, ರೇಣುಕಾ ಕಿಟ್ಟದಾಳ್, ಚೈನಾ ದರ್ಗಾ, ಸೀಮಾ ಚೌಹಾಣ್, ನಿರ್ಮಲಾ ನೆರ್ತಿ ಇದ್ದರು.