ಕನ್ನಡಪ್ರಭ ವಾರ್ತೆ ವಿಜಯಪುರ
ಐದಾರು ಹಳ್ಳಿಗಳಿಗೆ ವಿದ್ಯುತ್ ಅನುಕೂಲ ಕಲ್ಪಿಸಬೇಕಿರುವ ತಾಲೂಕಿನ ಕನ್ನೂರಿನಲ್ಲಿರುವ 110 ಕೆವಿ ವಿದ್ಯುತ್ ಸರಬರಾಜು ಕೇಂದ್ರವು ಸಿದ್ಧವಾಗಿ ವರ್ಷವೇ ಕಳೆದರೂ ಬೇಜಾವಾಬ್ದಾರಿಯಿಂದ ಲೋಕಾರ್ಪಣೆಗೊಳಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರೈತರು ತಿಡಗುಂದಿ ಕೆಇಬಿ ಕಚೇರಿ ಎದುರು ಪ್ರತಿಭಟಿಸಿದರು.ಕನ್ನೂರನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕಳೆದೊಂದು ವರ್ಷದ ಹಿಂದೆಯೇ ಉದ್ಘಾಟನೆ ಆಗಬೇಕಿದ್ದ 110 ಕೆವಿ ಇಲ್ಲಿಯವರೆಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನೀರ್ಲಕ್ಷ್ಯದಿಂದ ಆಗಿಲ್ಲ, ತಕ್ಷಣವೇ ಆರಂಭಿಸಬೇಕು ಎಂದು ಆಗ್ರಹಿಸಿ ರೈತರು ಗೇಟ್ಗೆ ಹಸಿರು ಶಾಲು ಕಟ್ಟಿ ಸುಮಾರು 3 ಗಂಟೆಗಳ ಕಾಲ ಹೋರಾಟ ಮಾಡಿದರು.ತಾಲೂಕಿನ ಬೊಮ್ಮನಳ್ಳಿ, ಮಿಂಚನಾಳ, ಗುಣಕಿ, ತಿಡಗುಂದಿ ಸೇರಿದಂತೆ ಐದಾರು ಹಳ್ಳಿಗಳೊಗೆ ವಿದ್ಯುತ್ ಅನುಕೂಲ ಕಲ್ಪಿಸಬೇಕಿರುವ ವಿದ್ಯುತ್ ಸ್ಟೇಷನ್ ಉದ್ಘಾಟನೆ ಮಾಡದಿರುವ ಹಿಂದಿನ ಉದ್ದೇಶವೇನು?, ವಿಳಂಬ ನೀತಿಗೆ ಕಾರಣವೇನು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳಾದ ಎಕ್ಸಿಕ್ಯೂಟಿವ್ ಎಂಜಿನಿಯರ್ ಸಂತೋಷ ಪಾಟೀಲ, ಎಇಇ ಗಳಾದ ಅನೀಲ ಪೂಜಾರಿ, ಗಂಗಾಧರ ಲೋಣಿ, ಎಸ್.ಎಸ್.ಸಿದ್ದಾಪುರ ಹಾಗೂ ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಅವರು ಗುತ್ತಿಗೆದಾರನನ್ನು ಹಿಗ್ಗಾಮುಗ್ಗಾ ಜಾಡಿಸಿ ಶೀಘ್ರದಲ್ಲಿ ಕನ್ನೂರಿನ ಕೆಇಬಿಯನ್ನು ಪ್ರಾರಂಭಿಸಬೇಕು ಎಂದು ಸೂಚಿಸಿದರು.ಆಗ ಗುತ್ತಿಗೆದಾರ ಬಾಕಿ ಉಳಿದಿರುವ ಸಣ್ಣಪುಟ್ಟ ಕಾಮಗಾರಿಗಳನ್ನು ಮಾರ್ಚ್ 15 ರೊಳಗಾಗಿ ಮುಗಿಸುವುದಾಗಿ ತಿಳಿಸಿದಾಗ ಅಧಿಕಾರಿಗಳು ಮಾ.22 ರವರೆಗೆ ಕಾಲಾವಕಾಶ ಕೊಡಿ ಎಂದು ರೈತರಿಗೆ ಮನವಿ ಮಾಡಿದರು. ಆಗ ರೈತರು ಮತ್ತು ಅಧಿಕಾರಿಗಳ ಮಧ್ಯ ವಾಗ್ವಾದ ಉಂಟಾಗಿ ಅಧಿಕಾರಿಗಳಿಗೂ ಗೌರವ ಕೊಡಬೇಕು ಎಂದು ರೈತರೆಲ್ಲರೂ ಮಾ.15 ರೊಳಗಾಗಿ ಎಲ್ಲ ಕೆಲಸ ಮುಗಿಸಿ ಶಾಸಕರಿಂದಲೇ ಈ ಕೆಇಬಿ ಉದ್ಗಾಟನೆ ಮಾಡಿಸಬೇಕು. ಇದನ್ನು ಮುಖ್ಯಸ್ಥರು ಅಧಿಕೃತವಾಗಿ ಬರೆದುಕೊಡಬೇಕು ಎಂದು ಹೇಳಿದಾಗ ಅಧಿಕಾರಿಗಳು ಒಪ್ಪಿಗೆ ಸೂಚಿಸಿ ಬರೆದು ಕೊಟ್ಟ ನಂತರ ಹೋರಾಟ ಹಿಂಪಡೆಯಲಾಯಿತು.ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ಗುತ್ತಿಗೆದಾರ ಸರಿ ಇಲ್ಲ ಸಾಕಷ್ಟು ಬಾರಿ ನಾನೇ ಫೋನ್ ಹಚ್ಚಿ ಮತ್ತೆ ಸಭೆಯಲ್ಲಿಯೂ ಕೂಡಾ ಕೇಳಿದಾಗ ಕೇವಲ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಎಂದು ಗುತ್ತಿಗೆದಾರನಿಗೆ ಬೈದು ತಾಕೀತು ಮಾಡಿ ಮಾ.12 ರೊಳಗಾಗಿ ಕೆಲಸ ಮುಗಿಸಬೇಕು. ಹಗಲು-ರಾತ್ರಿ ಆದರೂ ಪರವಾಗಿಲ್ಲ, ಕೂಡಲೇ ಕೆಲಸ ಮುಗಿಸಿ. ನಂತರ 2 ದಿನ ಅಧಿಕಾರಿಗಳು, ತಜ್ಞರಿಂದ ತಪಾಸಣೆ ಮಾಡಿ ಮಾರ್ಚ ರಂದು ಉದ್ಘಾಟನೆ ಮಾಡೋಣ ಎಂದರು.ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೆಶ ಸಗರ, ವಿಜಯಪುರ ತಾಲೂಕು ಅಧ್ಯಕ್ಷ ಅನಮೇಶ ಜಮಖಂಡಿ, ಮುಖಂಡರಾದ ರಾಮಸಿಂಗ್ ರಜಪೂತ, ಸತೀಶ ದಾಶ್ಯಾಳ, ಗೆನ್ನಪ್ಪ ಬಿರಾದಾರ, ಮಹಾಂತಗೌಡ ಬಿರಾದಾರ, ಗಿರೀಶ ತಾಳಿಕೋಟಿ, ರಾಮನಗೌಡ ಬಿರಾದಾರ, ರಾಮನಗೌಡ ಪಾಟೀಲ, ಮುದಕಣ್ಣ ಬಿರಾದಾರ, ಕಾಶಿರಾಯಗೌಡ ಪಾಟೀಲ, ಕಲ್ಲಪ್ಪ ಹತ್ತಿ, ಶ್ರೀನಾಥ ದಾಶ್ಯಾಳ, ಸಂಗನಗೌಡ ಬಿರಾದಾರ, ಪ್ರಕಾಶಗೌಡ ಪಾಟೀಲ, ಪ್ರಕಾಶ ಜಾಧವ, ವಿರೇಶ ಮುರಗುಂಡಿ, ದೇವೆಗೌಡ ಬಿರಾದಾರ ಸೇರಿದಂತೆ ಬೊಮ್ಮನಳ್ಳಿ, ಮಿಂಚನಾಳ, ಗುಣಕಿ, ತಿಡಗುಂದಿ, ಗ್ರಾಮದ ರೈತರು ಇದ್ದರು.