ನಿವೇಶನ ಹಂಚಿರುವ ಕಡೆ ಮೂಲಸೌಲಭ್ಯಕ್ಕೆ ದಸಂಸ ಆಗ್ರಹ

| Published : Mar 14 2024, 02:04 AM IST

ನಿವೇಶನ ಹಂಚಿರುವ ಕಡೆ ಮೂಲಸೌಲಭ್ಯಕ್ಕೆ ದಸಂಸ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಂಡ್ಯದ 62 ವಸತಿ ರಹಿತ ಜನರನ್ನು ಆಯ್ಕೆ ಮಾಡಿದ್ದು ಇವರಲ್ಲಿ 29 ಜನರಿಗೆ ಹಕ್ಕು ಪತ್ರ ವಿತರಿಸಿದ್ದು, ಉಳಿದ 33 ಜನರಿಗೆ ತಕ್ಷಣ ಹಕ್ಕುಪತ್ರ ವಿತರಿಸಬೇಕು. ವಾಸಿಸಲು ಯೋಗ್ಯವಾಗುವಂತ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯನಿವೇಶನ ಹಂಚಿಕೆ ಮಾಡಿರುವ ಕಡೆ ಮೂಲ ಸೌಲಭ್ಯ ನೀಡುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಪಂ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಸರ್‌ಎಂ.ವಿ.ಪ್ರತಿಮೆ ಎದುರು ಸೇರಿದ ಕಾರ್ಯಕರ್ತರು ಜಿಲ್ಲಾ ಪಂಚಾಯ್ತಿ ಕಚೇರಿವರೆಗೂ ಧರಣಿ ಮೆರವಣಿಗೆ ನಡೆಸಿದರು. ನಂತರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಚಿಕ್ಕಮಂಡ್ಯ ವಸತಿ ರಹಿತ ಜನರಿಗೆ ಎಚ್‌.ಕೋಡಿಹಳ್ಳಿ ಸ.ನಂ.67ರಲ್ಲಿ 2018 ರಲ್ಲಿ ನಿವೇಶನ ಹಂಚಿಕೆ ಮಾಡಿದ್ದು, ಕೂಡಲೇ ರಸ್ತೆ, ಚರಂಡಿ, ನೀರು, ವಿದ್ಯುತ್‌ ಒಳಗೊಂಡಂತೆ ಮೂಲ ಸೌಕರ್ಯ ಕಲ್ಪಿಸಲು ಅಗತ್ಯ ಕ್ರಮ ವಹಿಸಬೇಕು. ನಿವೇಶನ ಹಂಚಿಕೆಯಾಗಿರುವ ಬಡಾವಣೆಗೆ ಮುಖ್ಯ ರಸ್ತೆಯಿಂದ ಸಂಪರ್ಕ ರಸ್ತೆ ಕಲ್ಪಿಸಲು ರಸ್ತೆಗೆ ಅಗತ್ಯವಿರುವ ಭೂಮಿಯ ಭೂ ಸ್ವಾಧೀನಕ್ಕೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಹಕ್ಕುಪತ್ರ ವಿತರಿಸಿರುವ ಎಲ್ಲರಿಗೂ ಮನೆ ನಿರ್ಮಾಣ ಮಾಡಿಕೊಂಡು ವಾಸಿಸಲು ರಾಜೀವ್‌ ಗಾಂಧಿ ವಸತಿ ನಿಗಮದಿಂದ ಸಹಾಯ ಧನ ಬಿಡುಗಡೆ ಮಾಡಬೇಕು. ವಾಸಮಾಡಲು ಯೋಗ್ಯವಲ್ಲದ ಭೂಮಿಯನ್ನು ಖರೀದಿಸಿ ಚಿಕ್ಕಮಂಡ್ಯದ ವಸತಿ ರಹಿತ ಜನರಿಗೆ ಹಂಚಿಕೆ ಮಾಡಿ ಭೂ ಮಾಲೀಕರ ಹತ್ತಿರ ಕಮಿಷನ್‌ ಹಣ ಪಡೆದು ಸರ್ಕಾರಕ್ಕೆ ವಂಚಿಸಿ ಅಕ್ರಮವೆಸಗಿರುವ ಅಧಿಕಾರಿಗಳು ಮತ್ತು ದಲ್ಲಾಳಿಗಳ ವಿರುದ್ಧ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಚಿಕ್ಕಮಂಡ್ಯದ 62 ವಸತಿ ರಹಿತ ಜನರನ್ನು ಆಯ್ಕೆ ಮಾಡಿದ್ದು ಇವರಲ್ಲಿ 29 ಜನರಿಗೆ ಹಕ್ಕು ಪತ್ರ ವಿತರಿಸಿದ್ದು, ಉಳಿದ 33 ಜನರಿಗೆ ತಕ್ಷಣ ಹಕ್ಕುಪತ್ರ ವಿತರಿಸಬೇಕು. ವಾಸಿಸಲು ಯೋಗ್ಯವಾಗುವಂತ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹ ಪಡಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಅಂದಾನಿ ಸೋಮನಹಳ್ಳಿ, ಶಿವು ಮದ್ದೂರು, ಬಿ.ಎಂ.ಸತ್ಯ, ಮೂರ್ತಿ ಕಂಚಿನಕೋಟೆ, ಡಿ.ಕೆ.ಅಂಕಯ್ಯ, ಮೋಹನ್‌ ಚಿಕ್ಕಮಂಡ್ಯ, ಲಿಂಗರಾಜು, ನಿರಂಜನ್‌, ಮುರುಗನ್‌, ನಾಗರಾಜು, ವೆಂಕಟಗಿರಿ ಭಾಗವಹಿಸಿದ್ದರು.