ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡರ ಬಣದ ತಾಲೂಕು ಘಟಕ ವತಿಯಿಂದ ಪಟ್ಟಣದ ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿನ ಒನಕೆ ಓಬವ್ವ ವೃತ್ತದ ಕನ್ನಡ ಧ್ವಜಸ್ತಂಬಕ್ಕೆ ಸುಣ್ಣ ಬಣ್ಣ ಬಳಿದು ನಿರ್ವಹಣೆ ಮಾಡುವಂತೆ ಬುಧವಾರ ಮನವಿ ಮಾಡಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡರ ಬಣದ ತಾಲೂಕು ಘಟಕ ವತಿಯಿಂದ ಪಟ್ಟಣದ ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿನ ಒನಕೆ ಓಬವ್ವ ವೃತ್ತದ ಕನ್ನಡ ಧ್ವಜಸ್ತಂಬಕ್ಕೆ ಸುಣ್ಣ ಬಣ್ಣ ಬಳಿದು ನಿರ್ವಹಣೆ ಮಾಡುವಂತೆ ಬುಧವಾರ ಮನವಿ ಮಾಡಿತು. ಈ ಸ್ತಂಭಕ್ಕೆ ಸಂತೆ ದಿನ ಸೇರಿದಂತೆ ದಿನಂಪ್ರತಿ ಅಪಮಾನ ಮಾಡುತ್ತಿದ್ದಾರೆ. ವ್ಯಾಪಾರಿಗಳು ಇದಕ್ಕೆ ಹಗ್ಗ ಕಟ್ಟಿ ಬಳಸಿಕೊಳ್ಳುವುದು, ಕಬ್ಬಿನ ಅಂಗಡಿಯವರು ಇದೇ ಸ್ತಂಭಕ್ಕೆ ತಮ್ಮ ಗಾಡಿಯನ್ನು ಒರಗಿಸಿ ದುರುಪಯೋಗ ಪಡಿಸಿಕೊಳ್ಳುವುದರೊಂದಿಗೆ ಅಪಮಾನ ಮಾಡುತ್ತಿದ್ದಾರೆ. ಆದುದರಿಂದ ಕೂಡಲೇ ಪಟ್ಟಣ ಪಂಚಾಯಿತಿಯವರು ಈ ಸ್ಥಂಭವನ್ನು ದುರಸ್ತಿಪಡಿಸಿ, ಸುಣ್ಣ ಬಣ್ಣ ಹೊಡೆಸಿ, ಸ್ವಚ್ಛ ಮಾಡುವುದರೊಂದಿಗೆ, ಆಗುತ್ತಿರುವ ಅಪಮಾನವನ್ನು ತಡೆಯಬೇಕು. ತಪ್ಪಿದರೆ ಮುಂದಿನ ದಿನಗಳಲ್ಲಿ ಪಂಚಾಯಿತಿ ಎದುರು ಉಗ್ರ ಹೋರಾಟ ನಡೆಸಲಾಗುವುದು ಎಂದು ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ಸಂತೋಷ್ ಎಚ್ಚರಿಸಿದರು. ಸಂಬಂಧಿತ ಮನವಿಯನ್ನು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಅವರಿಗೆ ಸಲ್ಲಿಸಿದರು. ಈ ಸಂದರ್ಭ ವೇದಿಕೆ ತಾಲೂಕು ಘಟಕದ ಉಸ್ತುವಾರಿ ಎಚ್.ಎ. ನಾಗರಾಜು, ಪ್ರಧಾನ ಕಾರ್ಯದರ್ಶಿ ಜಗದೀಶ್, ಸಂಘಟನಾ ಕಾರ್ಯದರ್ಶಿ ಪ್ರವೀಣ್, ಸಾಮಾಜಿಕ ಜಾಲತಾಣದ ಬೋಪಯ್ಯ ಮತ್ತು ಜಾನ್‌ಸನ್ ಇದ್ದರು.